ಬೆಂಗಳೂರು:ಕಾವೇರಿ ನೀರು ಸರಬರಾಜು ಯೋಜನೆಯ ಪಂಪಿಂಗ್ ಸ್ಟೇಷನ್ ನಿರ್ವಹಣಾ ಕಾಮಗಾರಿ ಸೋಮವಾರವೂ ಮುಂದುವರಿಯಲಿದ್ದು, ನೀರು ಪೂರೈಕೆಯಲ್ಲಿ ವ್ಯತ್ಯಯವಾಗಲಿದೆ ಎಂದು ಜಲಮಂಡಳಿ ತಿಳಿಸಿದೆ.
ಟಿ.ಕೆ.ಹಳ್ಳಿ, ಹಾರೋಹಳ್ಳಿ ಮತ್ತು ತಾತಗುಣಿಯಲ್ಲಿರುವ ಕಾವೇರಿ ನೀರುಸರಬರಾಜು ಯೋಜನೆಯ 1,2,3 ಮತ್ತು 4ನೇ ಹಂತದ ಮತ್ತು 2ನೇ ಘಟ್ಟದ ಪಂಪಿಂಗ್ ವ್ಯವಸ್ಥೆಯ ಕಾರ್ಯಾಚರಣೆ ಸ್ಥಗಿತಗೊಳಿಸಲಾಗಿದೆ. ಭಾನುವಾರ ಮಧ್ಯಾಹ್ನದವರೆಗೆ ಕೆಲವು ಬಡಾವಣೆ
ಗಳಲ್ಲಿ ನೀರು ಪೂರೈಕೆಯಾಯಿತು. ಮಧ್ಯಾಹ್ನ ನಿಲ್ಲಿಸಿದ್ದು, ಸಾರ್ವಜನಿಕರು ತೊಂದರೆ ಅನುಭವಿಸಿದರು.
‘ಸಂಪೂರ್ಣವಾಗಿ ನೀರು ಸರಬರಾಜು ಸ್ಥಗಿತಗೊಳಿಸುವಂತಹ ಸಂದರ್ಭ ಬರುವುದು ತೀರಾ ವಿರಳ. ಆದರೆ, ಕಾಮಗಾರಿ ಕೈಗೆತ್ತಿಕೊಳ್ಳುವುದು ಅನಿವಾರ್ಯವಾಗಿದೆ. ಸೋಮವಾರದಿಂದ ಪಂಪಿಂಗ್ ಕಾರ್ಯ ಶುರುವಾಗುತ್ತದೆಯಾದರೂ, ಮಂಗಳವಾರದಿಂದ ಮನೆಗಳಿಗೆ ನೀರು ಸರಬರಾಜು ಮಾಡಲಾಗುತ್ತದೆ’ ಎಂದು ಜಲಮಂಡಳಿ ಅಧಿಕಾರಿಯೊಬ್ಬರು ಹೇಳಿದರು.
‘ಪಂಪಿಂಗ್ ಸ್ಟೇಷನ್ಗಳಲ್ಲಿ ನೀರು ಪೂರೈಸುವ ವೇಳೆಯಲ್ಲಿ ವಿದ್ಯುತ್ ವ್ಯತ್ಯಯವಾದರೆ, ನೀರು ಅತಿ ವೇಗವಾಗಿ ಪಂಪಿಂಗ್ ಸ್ಟೇಷನ್
ಗಳಿಗೆ ಹಿಂದಿರುಗಿಬಿಡುತ್ತದೆ. ಈ ವೇಳೆ, ಮೋಟರ್, ಯಂತ್ರಗಳು ಮತ್ತು ಪಂಪ್ ಮಾಡುವ ಸಾಧನಗಳಿಗೆ ಹಾನಿಯಾಗುತ್ತಿತ್ತು. ಮುಂದೆ ಈ ರೀತಿಯ ತೊಂದರೆ ಉದ್ಭವಿಸಬಾರದು ಎಂಬ ಉದ್ದೇಶದಿಂದ ಈ ಕಾಮಗಾರಿ ಕೈಗೆತ್ತಿಕೊಳ್ಳಲಾಗುತ್ತಿದೆ’ ಎಂದು
ಜಲಮಂಡಳಿಯ ಹೆಚ್ಚುವರಿ ಮುಖ್ಯ ಎಂಜಿನಿಯರ್ ಎಸ್.ವಿ. ರಮೇಶ್ ತಿಳಿಸಿದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.