ಬೆಂಗಳೂರು: ‘ಕೆನಡಾ ಸಂಸತ್ತಿನಲ್ಲಿ ಕನ್ನಡದಲ್ಲಿ ಮಾತನಾಡಿದ ಚಂದ್ರ ಆರ್ಯ ಅವರನ್ನು ನಮ್ಮ ಸಂಸದರು ಅನುಸರಿಸಿ,ಸಂಸತ್ ಅಧಿವೇಶನದಲ್ಲಿ ಆಗಾಗ ಕನ್ನಡದಲ್ಲಿ ಭಾಷಣ ಮಾಡಬೇಕು. ಈ ಮೂಲಕಕನ್ನಡ ನಾಡು-ನುಡಿಯ ಹಿತ ಕಾಪಾಡುವ ಕೆಲಸ ಮಾಡಬೇಕು’ ಎಂದು ಕನ್ನಡ ಗೆಳೆಯರ ಬಳಗ ಆಗ್ರಹಿಸಿದೆ.
‘ಕನ್ನಡಕ್ಕೆ ಶಾಸ್ತ್ರೀಯ ಭಾಷೆ ಸ್ಥಾನ ನೀಡಿ 14 ವರ್ಷಗಳಾಗಿವೆ. ಇಂದಿಗೂ ಕನ್ನಡಕ್ಕೆ ಸ್ವಾಯತ್ತತೆ ಮತ್ತು ಸವಲತ್ತುಗಳು ದೊರೆತಿಲ್ಲ.ಶಾಸ್ತ್ರೀಯ ಉನ್ನತ ಅಧ್ಯಯನ ಕೇಂದ್ರಕ್ಕೆ ಸ್ವಂತ ಕಟ್ಟಡವೂ ಇಲ್ಲ. ರಾಜ್ಯವನ್ನು ಪ್ರತಿನಿಧಿಸುವ ಎಲ್ಲ ಸಂಸದರೂ ಒಗ್ಗಟ್ಟಿನಿಂದ ಮಳೆಗಾಲದ ಅಧಿವೇಶನದಲ್ಲಿ ಧ್ವನಿಯೆತ್ತಿ, ಶಾಸ್ತ್ರೀಯ ಕನ್ನಡ ಭಾಷೆಯ ವನವಾಸವನ್ನು ಕೊನೆಗೊಳಿಸಬೇಕು.ನಮ್ಮ ಸಂಸದರು ಚಂದ್ರ ಆರ್ಯ ಅವರನ್ನು ಅಭಿನಂದಿಸಿದರೆ ಸಾಲದು, ಅವರನ್ನು ಅನುಸರಿಸಬೇಕು’ ಎಂದು ಬಳಗದ ಸಂಚಾಲಕರಾ.ನಂ. ಚಂದ್ರಶೇಖರ ಒತ್ತಾಯಿಸಿದ್ದಾರೆ.
‘ರಾಜಸ್ಥಾನದ ಜೈಪುರದಲ್ಲಿ ನಡೆದ ಬಿಜೆಪಿ ಪದಾಧಿಕಾರಿಗಳ ರಾಷ್ಟ್ರ ಮಟ್ಟದ ಸಭೆಯಲ್ಲಿ ‘ಭಾಷಾ ವೈವಿಧ್ಯವು
ದೇಶದ ಹೆಮ್ಮೆ ಹಾಗೂ ಸ್ಫೂರ್ತಿಯಾಗಿದೆ. ಪ್ರಾದೇಶಿಕ ಭಾಷೆಗಳಲ್ಲಿ ದೇಶದ ಸಿರಿವಂತ ಸಂಸ್ಕೃತಿಯ ಪ್ರತಿಬಿಂಬ ಕಾಣುತ್ತೇವೆ’ ಎಂದು ಪ್ರಧಾನಿ ನರೇಂದ್ರ ಮೋದಿ ಹೇಳಿರುವುದು ಶ್ಲಾಘನೀಯ. ಇದಕ್ಕೆ ಪೂರಕವಾಗಿ ಸಂವಿಧಾನದ 8ನೇ ಪರಿಚ್ಛೇದದ ಎಲ್ಲ ಭಾಷೆಗಳನ್ನೂ ರಾಷ್ಟ್ರಭಾಷೆಗಳು ಎಂದು ಘೋಷಿಸಬೇಕು’ ಎಂದು ಒತ್ತಾಯಿಸಿದ್ದಾರೆ.
‘ದೇಶದ ಎಲ್ಲ ಭಾಷೆಗಳಿಗೆ ಸಮಾನ ಅವಕಾಶ ಮತ್ತು ಸವಲತ್ತುಗಳನ್ನು ನೀಡಬೇಕು. ಕೇಂದ್ರ ಸರ್ಕಾರ ನಡೆಸುವ ಎಲ್ಲ ಸ್ಪರ್ಧಾತ್ಮಕ ಪರೀಕ್ಷೆಗಳು ಎಲ್ಲ ಭಾಷೆಗಳಲ್ಲಿಯೂ ನಡೆಯುವಂತಾಗಬೇಕು. ಶಾಲ ಶಿಕ್ಷಣವನ್ನು ರಾಷ್ಟ್ರೀಕರಣಗೊಳಿಸಿ, ಮಾತೃಭಾಷೆ ಮಾಧ್ಯಮದ ಏಕರೂಪ ಶಿಕ್ಷಣವನ್ನು ರೂಪಿಸಿ, ಜಾರಿಗೊಳಿಸಬೇಕು’ ಎಂದು ಅವರು ಮನವಿ ಮಾಡಿಕೊಂಡಿದ್ದಾರೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.