ಬೆಂಗಳೂರು: ಸಂತಾನೋತ್ಪತ್ತಿ ಕೇಂದ್ರಕ್ಕೆ ನಾಯಿಗಳು ಮತ್ತು ನಾಯಿ ಮರಿಗಳನ್ನು ಹಿಂದಿರುಗಿಸಬೇಕು ಎಂಬ ಮ್ಯಾಜಿಸ್ಟ್ರೇಟ್ ನ್ಯಾಯಾಲಯದ ಆದೇಶವನ್ನು ಹೈಕೋರ್ಟ್ ರದ್ದುಪಡಿಸಿದೆ.
ಜೆ.ಪಿ. ನಗರದಲ್ಲಿ ಸಂತಾನೋತ್ಪತ್ತಿ ಕೇಂದ್ರ ಹೊಂದಿರುವ ಶ್ರೇಯಸ್ ವಿರುದ್ಧ ಪ್ರಾಣಿ ಕಲ್ಯಾಣ ಕಾರ್ಯಕರ್ತ ಕೆ.ಬಿ. ಹರೀಶ್ ದೂರು ದಾಖಲಿಸಿದ್ದರು. ‘ಈ ಕೇಂದ್ರದಲ್ಲಿ ನಾಯಿಗಳ ಸ್ಥಿತಿ ಕರುಣಾಜನಕವಾಗಿದೆ. ಅವುಗಳಿಗೆ ತಕ್ಷಣದ ವೈದ್ಯಕೀಯ ಆರೈಕೆ ಅಗತ್ಯವಿದೆ’ ಎಂದು ದೂರಿನಲ್ಲಿ ತಿಳಿಸಿದ್ದರು.
ದೂರು ಆಧರಿಸಿ ಪೊಲೀಸರು ಸಿಯುಪಿಎ(ಕಂಪಾಷನ್ ಅನ್ಲಿಮಿಟೆಡ್ ಪ್ಲಸ್ ಆ್ಯಕ್ಷನ್) ಕೇಂದ್ರಕ್ಕೆ ವರ್ಗಾಯಿಸಿದ್ದರು. ಇದನ್ನು ಪ್ರಶ್ನಿಸಿ ಶ್ರೇಯಸ್ ನ್ಯಾಯಾಲಯಕ್ಕೆ ಅರ್ಜಿ ಸಲ್ಲಿಸಿದ್ದರು. ನಾಯಿಗಳನ್ನು ಈ ಕೇಂದ್ರಕ್ಕೆ ಹಸ್ತಾಂತರಿಸುವ ಮುನ್ನ ಪೊಲೀಸರು ನ್ಯಾಯಾಲಯದ ಅನುಮತಿ ಪಡೆದಿಲ್ಲ ಎಂದು ಆರೋಪಿಸಿದ್ದರು. ವಿಚಾರಣೆ ನಡೆಸಿದ ಮ್ಯಾಜಿಸ್ಟ್ರೇಟ್ ನ್ಯಾಯಾಲಯ, ನಾಯಿಗಳನ್ನು ಮಾಲೀಕರಿಗೆ ಹಸ್ತಾಂತರಿಸುವಂತೆ ಪೊಲೀಸರಿಗೆ ನಿರ್ದೇಶನ ನೀಡಿತ್ತು. ಇದನ್ನು ಪ್ರಶ್ನಿಸಿ ಸಿಯುಪಿಎ ಹೈಕೋರ್ಟ್ ಮೆಟ್ಟಿಲೇರಿತು.
‘ಅನಾರೋಗ್ಯದಿಂದ ಬಳಲುತ್ತಿದ್ದ ನಾಯಿಗಳನ್ನು ಸಿಯುಪಿಎ ಕೇಂದ್ರಕ್ಕೆ ವರ್ಗಾಯಿಸುವಾಗ ಪೊಲೀಸರು ಸರಿಯಾದ ಕಾರ್ಯ ವಿಧಾನ ಅನುಸರಿಸಿಲ್ಲ. ಆದರೆ, ಸಂತಾನೋತ್ಪತ್ತಿ ಕೇಂದ್ರದಲ್ಲಿ ನಾಯಿಗಳನ್ನು ಕ್ರೌರ್ಯವಾಗಿ ನಡೆಸಿಕೊಳ್ಳುತ್ತಿದ್ದ ಅಂಶವನ್ನು ನ್ಯಾಯಾಲಯ ಪರಿಗಣಿಸಬೇಕು. ನ್ಯಾಯಾಲಯದ ಅನುಮತಿ ಪಡೆಯದಿದ್ದರೂ, ಕ್ರೌರ್ಯಕ್ಕೆ ಗುರಿಯಾಗುವ ನಾಯಿಗಳ ಹಿತಾಸಕ್ತಿ ಕಾಪಾಡುವುದು ಮುಖ್ಯ’ ಎಂದು ನ್ಯಾಯಮೂರ್ತಿ ಎಚ್.ಪಿ. ಸಂದೇಶ್ ಅಭಿಪ್ರಾಯಪಟ್ಟರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.