ಬೆಂಗಳೂರು: ಲಿಂಫೋಮಾದಿಂದ (ರಕ್ತ ಕ್ಯಾನ್ಸರ್) ಬಳಲುತ್ತಿರುವ ರೋಗಿಗಳಿಗೆ ಇಮ್ಯುನೀಲ್ ಥೆರಪ್ಯೂಟಿಕ್ಸ್ ಸಂಸ್ಥೆಯು ದೇಶೀಯವಾಗಿ ‘ಕಾರ್ ಟಿ-ಸೆಲ್ ಥೆರಪಿ’ ಅಭಿವೃದ್ಧಿಪಡಿಸಿದೆ.
ಶನಿವಾರ ಇಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಇಮ್ಯುನೀಲ್ ಥೆರಪ್ಯೂಟಿಕ್ಸ್ ಮಂಡಳಿಯ ನಿರ್ದೇಶಕಿ ಕಿರಣ್ ಮಜುಂದಾರ್ ಷಾ, ‘ದೇಶದಲ್ಲಿ ಸಾಕಷ್ಟು ಜನರು ರಕ್ತದ ಕ್ಯಾನ್ಸರ್ನಿಂದ ಬಳಲುತ್ತಿದ್ದಾರೆ. ಮರುಕಳಿಸಬಹುದಾದ ಈ ಕ್ಯಾನ್ಸರ್ಗೆ ಶಾಶ್ವತ ಪರಿಹಾರವಾಗಿ ಕಾರ್ ಟಿ-ಸೆಲ್ ಥೆರಪಿಯನ್ನು 2022ರಲ್ಲಿ ಅಭಿವೃದ್ಧಿಪಡಿಸಲಾಗಿದೆ. ಈ ಥೆರಪಿಯಿಂದ ಏಳು ರಕ್ತದ ಕ್ಯಾನ್ಸರ್ ರೋಗಿಗಳು ಸಂಪೂರ್ಣ ಗುಣಮುಖರಾಗಿದ್ದಾರೆ’ ಎಂದು ಹೇಳಿದರು.
‘ವಯಸ್ಕ ರೋಗಿಗಳಿಗೆ ಈ ಥೆರಪಿ ಹೆಚ್ಚು ಪರಿಣಾಮಕಾರಿ. ರಕ್ತದ ಕ್ಯಾನ್ಸರ್ ಹೆಚ್ಚು ಆಕ್ರಮಣಕಾರಿ ರೂಪದಲ್ಲಿದ್ದರೂ ಈ ಥೆರಪಿ ಮೂಲಕ ಗುಣಪಡಿಸುವ ಪ್ರಮಾಣ ಜಾಸ್ತಿ. ಈವರೆಗೆ ರಕ್ತದ ಕ್ಯಾನ್ಸರ್ಗೆ ಇರುವ ಚಿಕಿತ್ಸೆಯ ಫಲಿತಾಂಶದ ಪ್ರಮಾಣ ಶೇ 70ಕ್ಕಿಂತ ಕಡಿಮೆಯಿದೆ. ಆದರೆ, ಕಾರ್ ಟಿ-ಸೆಲ್ ಥೆರಪಿಯ ಫಲಿತಾಂಶದ ಪ್ರಮಾಣ ಶೇ 83 ರಷ್ಟಿದೆ. ಇಷ್ಟು ಪ್ರಮಾಣದ ಫಲಿತಾಂಶ ಹೊಂದಿರುವ ದೇಶದ ಮೊದಲ ಚಿಕಿತ್ಸೆ ಇದಾಗಿದೆ. ದೇಶದಲ್ಲಿ ಈಗ 50ಕ್ಕೂ ಹೆಚ್ಚು ರೋಗಿಗಳಿಗೆ ಈ ಚಿಕಿತ್ಸೆಯನ್ನು ನೀಡಲಾಗಿದೆ’ ಎಂದು ವಿವರಿಸಿದರು.
ಇಮ್ಯುನೀಲ್ ಥೆರಪ್ಯೂಟಿಕ್ಸ್ ಮಂಡಳಿಯ ನಿರ್ದೇಶಕ ಅಮಿತ್ ಮೂಕಿಮ್, ‘ಈ ವಿಧಾನದಲ್ಲಿ ರೋಗಿಯ ಬಿಳಿ ರಕ್ತಕಣವನ್ನು ಹೊರತೆಗೆದು, ಸಂಸ್ಕರಣೆ ಮಾಡಲಾಗುತ್ತದೆ. ಕ್ಯಾನ್ಸರ್ ಕೋಶಗಳನ್ನು ಗುರುತಿಸಿ, ನಾಶಗೊಳಿಸುವಂತೆ ಅದರ ವಂಶವಾಹಿಯಲ್ಲಿ ಬದಲಾವಣೆ ಮಾಡಲಾಗುತ್ತದೆ. ಹೀಗಾಗಿ, ಕ್ಯಾನ್ಸರ್ ಕೋಶವನ್ನು ಸಂಪೂರ್ಣ ನಾಶ ಮಾಡುವ ಶಕ್ತಿ ಈ ಥೆರಪಿಗಿದೆ. ಕ್ಯಾನ್ಸರ್ ಮರುಕಳುಹಿಸುವ ಸಾಧ್ಯತೆ ಇರುವುದಿಲ್ಲ’ ಎಂದು ತಿಳಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.