ಬೆಂಗಳೂರು: ನೈಸ್ ರಸ್ತೆಯಲ್ಲಿ ‘ಟೆಸ್ಟ್ ಡ್ರೈವ್’ ಮಾಡುವಾಗ ಕಾರು ಅಪಘಾತಕ್ಕೀಡಾಗಿ ಕಟ್ಟಡಗಳ ಒಳಾಂಗಣ ವಿನ್ಯಾಸಗಾರ ಸಾಗರ್ ಜಯರಾಮ್ ಮೃತಪಟ್ಟ ಪ್ರಕರಣದ ತನಿಖೆ ನಡೆಸುತ್ತಿರುವ ಪೊಲೀಸರು, ‘ಕಾರು ಚಾಲನೆ ಮಾಡುತ್ತಿದ್ದುದು ಸಾಗರ್ ಅಲ್ಲ. ಅವರ ಸ್ನೇಹಿತ ಗೌತಮ್’ ಎಂಬುದನ್ನು ಪತ್ತೆ ಹಚ್ಚಿದ್ದಾರೆ.
‘ಮಂಗಳವಾರ ಮಧ್ಯಾಹ್ನ ಕಾರು ಚಾಲನೆ ಮಾಡುತ್ತಿದ್ದುದು ಗೌತಮ್. ಆದರೆ, ಅಪಘಾತ ಸಂಭವಿಸಿದ ಬಳಿಕ ಆತ ಪೊಲೀಸರಿಗೆ ಸುಳ್ಳು ಹೇಳಿದ್ದ. ‘ಸಾಗರ್ ಕಾರು ಓಡಿಸುತ್ತಿದ್ದ. ಆತನ ಪುತ್ರ ಸಮರ್ಥ್ ಹಾಗೂ ಪತ್ನಿ ಸಂಧ್ಯಾ ಜತೆನಾನು ಹಿಂದಿನ ಸೀಟಿನಲ್ಲಿ ಕುಳಿತಿದ್ದೆ’ ಎಂದು ಹೇಳಿಕೆ ಕೊಟ್ಟಿದ್ದ. ಆದರೆ, ಘಟನೆ ವೇಳೆ ಕಾರಿನಲ್ಲಿದ್ದ ‘ರೇಂಜ್ ರೋವರ್’ ಶೋರೂಂನ ಚಾಲಕ ಶಿವಕುಮಾರ್ ಸೋನಿ ವಾಸ್ತವ ಬಹಿರಂಗಪಡಿಸಿದರು’ ಎಂದು ಸಂಚಾರ ವಿಭಾಗದ (ಪಶ್ಚಿಮ) ಡಿಸಿಪಿ ಎಸ್.ಕೆ.ಸೌಮ್ಯಲತಾ
ಹೇಳಿದರು.
‘ವೇಗದ ಹಾಗೂ ಅಜಾಗರೂಕ ಚಾಲನೆಯಿಂದಲೇ ಈ ದುರಂತ ಸಂಭವಿಸಿದೆ. ಹೀಗಾಗಿ, ಗೌತಮ್ ಅವರನ್ನೇ ಆರೋಪಿಯನ್ನಾಗಿ ಮಾಡಲಾಗುವುದು. ಅಪಘಾತದಲ್ಲಿ ಅವರೂ ಗಾಯಗೊಂಡು ಚಿಕಿತ್ಸೆ ಪಡೆಯುತ್ತಿದ್ದಾರೆ. ಚೇತರಿಸಿಕೊಂಡ ಬಳಿಕ ವಶಕ್ಕೆ ಪಡೆಯಲಾಗುವುದು’ ಎಂದರು.
120 ಕಿ.ಮೀ ವೇಗ: ‘ಸಾಗರ್ ಅವರು ರೂಪೇನಾ ಅಗ್ರಹಾರದಲ್ಲಿರುವ ನಮ್ಮ ಶೋರೂಂನಲ್ಲಿ ಕಾರು ಬುಕ್ ಮಾಡಿದ್ದರು. ಮಧ್ಯಾಹ್ನ 2 ಗಂಟೆ ಸುಮಾರಿಗೆ ಕುಟುಂಬ ಸಮೇತ ಟೆಸ್ಟ್ ಡ್ರೈವ್ ಹೊರಟಿದ್ದ ಅವರು, ನನ್ನನ್ನೂ ಜೊತೆಗೆ ಕರೆದರು. ನೈಸ್ ರಸ್ತೆಯಲ್ಲಿ 120 ಕಿ.ಮೀ ವೇಗದಲ್ಲಿ ಚಾಲನೆ ಮಾಡಿದ ಗೌತಮ್, ಟೋಲ್ ಬಳಿ ನಿಯಂತ್ರಣ ಕಳೆದುಕೊಂಡು. ಆಗ ಕಾರು ಅಡ್ಡಾದಿಡ್ಡಿಯಾಗಿ ಸಾಗಿ ಕಂದಕಕ್ಕೆ ಬಿದ್ದಿತು’ ಎಂದು ಶಿವಕುಮಾರ್ ಹೇಳಿಕೆ ಕೊಟ್ಟಿರುವುದಾಗಿ ಪೊಲೀಸರು ಮಾಹಿತಿ ನೀಡಿದರು. ‘ಕಾರು ಕನಿಷ್ಠ 150 ಕಿ.ಮೀ ವೇಗದಲ್ಲಿತ್ತು ಎಂಬುದು ಪ್ರಾಥಮಿಕ ತನಿಖೆಯಿಂದ ಗೊತ್ತಾಗಿದೆ. ಕಾರಿನಲ್ಲಿ ಬೇರೆ ಏನಾದರೂ ದೋಷಗಳಿದ್ದವೇ ಎಂಬುದನ್ನು ತಿಳಿಯಲು ತಂತ್ರಜ್ಞರ ಮೂಲಕ ತಪಾಸಣೆ ಮಾಡಿಸಲಾಗುತ್ತಿದೆ’ ಎಂದು ಪೊಲೀಸರು ಹೇಳಿದರು.
ಸಂಧ್ಯಾ ಸ್ಥಿತಿ ಗಂಭೀರ
ಮರಣೋತ್ತರ ಪರೀಕ್ಷೆ ಮಾಡಿಸಿ ಸಾಗರ್ ಶವವನ್ನು ಪೋಷಕರಿಗೆ ಹಸ್ತಾಂತರಿಸಲಾಗಿದೆ. ಸಮರ್ಥ್ ಹಾಗೂ ಶಿವಕುಮಾರ್ ಚೇತರಿಸಿಕೊಂಡು ಮನೆಗೆ ಮರಳಿದ್ದಾರೆ. ಸಂಧ್ಯಾ ಸ್ಥಿತಿ ಗಂಭೀರವಾಗಿದ್ದು, ಐಸಿಯುನಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.