ADVERTISEMENT

ಕಾರು ಖರೀದಿಸಿದ ದಿನವೇ ಅಪಘಾತ: ದ್ವಿಚಕ್ರ ವಾಹನ ಸವಾರ ಸಾವು

​ಪ್ರಜಾವಾಣಿ ವಾರ್ತೆ
Published 17 ಜನವರಿ 2023, 20:39 IST
Last Updated 17 ಜನವರಿ 2023, 20:39 IST
ವಿಜಯನಗರ ಸಂಚಾರ ಠಾಣೆ ಪೊಲೀಸರು ಜಪ್ತಿ ಮಾಡಿರುವ ಎಲೆಕ್ಟ್ರಿಕ್ ಕಾರು
ವಿಜಯನಗರ ಸಂಚಾರ ಠಾಣೆ ಪೊಲೀಸರು ಜಪ್ತಿ ಮಾಡಿರುವ ಎಲೆಕ್ಟ್ರಿಕ್ ಕಾರು   

ಬೆಂಗಳೂರು: ರಾಜಾಜಿನಗರ ಪಶ್ಚಿಮ ಕಾರ್ಡ್ ರಸ್ತೆಯ ಮೋದಿ ಕೆಳಸೇತುವೆ ಸಮೀಪದಲ್ಲಿ ಎಲೆಕ್ಟ್ರಿಕ್ ಕಾರೊಂದು ದ್ವಿಚಕ್ರ ವಾಹನಕ್ಕೆ ಡಿಕ್ಕಿ ಹೊಡೆದಿದ್ದು, ಸವಾರ ಬೊಗ್ಗರಂ ನಾಗರಾಜು (61) ಮೃತಪಟ್ಟಿದ್ದಾರೆ.

‘ಸೋಮವಾರ ಸಂಜೆ ನಡೆದಿರುವ ಅಪಘಾತ ಸಂಬಂಧ ಮೃತ ನಾಗರಾಜು ಅವರ ಮಗಳು ದೂರು ನೀಡಿದ್ದಾರೆ. ಕಾರು ಚಾಲಕ ಕುಶಾಲ್ ಜೈನ್ (28) ಎಂಬಾತನ ವಿರುದ್ಧ ವಿಜಯನಗರ ಠಾಣೆಯಲ್ಲಿ ಪ್ರಕರಣ ದಾಖಲಿಸಿಕೊಳ್ಳಲಾಗಿದೆ. ಕಾರು ಜಪ್ತಿ ಮಾಡಲಾಗಿದೆ’ ಎಂದು ಸಂಚಾರ ವಿಭಾಗದ (ಪಶ್ಚಿಮ) ಡಿಸಿಪಿ ಕುಲದೀಪ್ ಕುಮಾರ್ ಆರ್. ಜೈನ್ ‘ಪ್ರಜಾವಾಣಿ’ಗೆ ತಿಳಿಸಿದರು.

ಪೂಜೆ ಮಾಡಿಸಿಕೊಂಡು ಹೋಗುತ್ತಿದ್ದಾಗ ಅಪಘಾತ: ‘ಸೋಮವಾರವಷ್ಟೇ ಹೊಸದಾಗಿ ಎಲೆಕ್ಟ್ರಿಕ್ ಕಾರು ಖರೀದಿಸಿದ್ದ ಆರೋಪಿ ಕುಶಾಲ್, ಶೋರೂಮ್‌ನಿಂದ ದೇವಸ್ಥಾನಕ್ಕೆ ಹೋಗಿ ಪೂಜೆ ಮಾಡಿಸಿದ್ದರು. ಅದಾದ ನಂತರ, ಕಾರು ಚಲಾಯಿಸಿಕೊಂಡು ಮೋದಿ ಕೆಳಸೇತುವೆ ಬಳಿಯ ರಸ್ತೆಯಲ್ಲಿ ಹೊರಟಿದ್ದರು’ ಎಂದು ಪೊಲೀಸರು ಹೇಳಿದರು.

ADVERTISEMENT

‘ನಾಗರಾಜು ಅವರು ದ್ವಿಚಕ್ರ ವಾಹನದಲ್ಲಿ ರಾಜಾಜಿನಗರ ಕಡೆಯಿಂದ ವಿಜಯನಗರ ಕಡೆಗೆ ಮೋದಿ ಕೆಳಸೇತುವೆ ಬಳಿಯ ರಸ್ತೆ ಮೂಲಕ ತೆರಳುತ್ತಿದ್ದರು. ಇದೇ ಮಾರ್ಗದಲ್ಲಿ ಹೊರಟಿದ್ದ ಕುಶಾಲ್, ನಿರ್ಲಕ್ಷ್ಯದಿಂದ ಅತಿ ವೇಗವಾಗಿ ಕಾರು ಚಲಾಯಿಸಿದ್ದರು. ಅದೇ ಕಾರು, ಬೈಕ್‌ಗೆ ಗುದ್ದಿತ್ತು. ದ್ವಿಚಕ್ರ ವಾಹನ ಸಮೇತ ಬಿದ್ದಿದ್ದ ನಾಗರಾಜು ಅವರ ತಲೆಗೆ ತೀವ್ರ ಪೆಟ್ಟು ಬಿದ್ದಿತ್ತು.’

‘ಆರೋಪಿ ಕುಶಾಲ್‌, ಸ್ಥಳೀಯರ ಸಹಾಯದಿಂದ ನಾಗರಾಜು ಅವರನ್ನು ಸಮೀಪದ ಆಸ್ಪತ್ರೆಗೆ ಕರೆದೊಯ್ದಿದ್ದ. ಅಲ್ಲಿಂದ ಹೆಚ್ಚಿನ ಚಿಕಿತ್ಸೆಗಾಗಿ ಯಶವಂತಪುರದ ಮಣಿಪಾಲ್ ಆಸ್ಪತ್ರೆಗೆ ಸ್ಥಳಾಂತರಿಸಲಾಗಿತ್ತು. ತೀವ್ರ ಗಾಯಗೊಂಡಿದ್ದರಿಂದ ನಾಗರಾಜ್ ಸೋಮವಾರ ರಾತ್ರಿ ಆಸ್ಪತ್ರೆಯಲ್ಲಿ ಮೃತಪಟ್ಟಿದ್ದಾರೆ’ ಎಂದು ತಿಳಿಸಿದರು.

‘ಅಪಘಾತದ ನಂತರ ಆರೋಪಿಯೇ ಕಾರನ್ನು ಠಾಣೆಗೆ ತಂದು ಒಪ್ಪಿಸಿದ್ದಾರೆ. ಅವರಿಗೆ ನೋಟಿಸ್ ನೀಡಲಾಗಿದ್ದು, ವಿಚಾರಣೆ ನಡೆಸಿ ಮುಂದಿನ ಕ್ರಮ ಕೈಗೊಳ್ಳಲಾಗುವುದು’ ಎಂದು ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.