ADVERTISEMENT

ದೇಶದ್ರೋಹ ಪ್ರಕರಣ ಹೈಕೋರ್ಟ್‌ಗೆ ಮೊರೆ

ಮಕ್ಕಳ ಹಕ್ಕು ಆಯೋಗಕ್ಕೆ ವರದಿ; ಮುಖ್ಯಶಿಕ್ಷಕಿ–ಪಾಲಕಿ ನ್ಯಾಯಾಂಗ ಬಂಧನ ಅವಧಿ ವಿಸ್ತರಣೆ

​ಪ್ರಜಾವಾಣಿ ವಾರ್ತೆ
Published 10 ಫೆಬ್ರುವರಿ 2020, 20:14 IST
Last Updated 10 ಫೆಬ್ರುವರಿ 2020, 20:14 IST
   

ಕಲಬುರ್ಗಿ/ಬೀದರ್‌: ಬೀದರ್‌ನ ಶಾಹೀನ್‌ ಪ್ರಾಥಮಿಕ ಶಾಲೆಯ ವಾರ್ಷಿಕೋತ್ಸವದಲ್ಲಿ ಮಕ್ಕಳು ವಿವಾದಾತ್ಮಕ ನಾಟಕ ಪ್ರದರ್ಶಿಸಿದ್ದಕ್ಕೆ ಸಂಬಂಧಿಸಿದಂತೆ ದಾಖಲಾಗಿರುವ ‘ದೇಶದ್ರೋಹ ಪ್ರಕರಣ’ ರದ್ದುಪಡಿಸುವಂತೆ ಶಾಲೆ ಆಡಳಿತ ಮಂಡಳಿಯವರು ಹೈಕೋರ್ಟ್‌ನ ಕಲಬುರ್ಗಿ ಪೀಠದ ಮೊರೆ ಹೋಗಿದ್ದಾರೆ.

‘ಐಪಿಸಿ124(ಎ), 153 (ಎ), 504, 505 ಕಲಂಗಳ ಅಡಿಯಲ್ಲಿ ಪ್ರಕರಣ ದಾಖಲಿಸಲಾಗಿದೆ. ದೇಶದ್ರೋಹವೆಸಗುವ ಘಟನೆ ಅಲ್ಲಿ ನಡೆದಿಲ್ಲ. ಹೀಗಾಗಿ ಎಫ್‌ಐಆರ್‌ ರದ್ದುಪಡಿಸಬೇಕು’ ಎಂದು ಶಾಹೀನ್‌ ಶಿಕ್ಷಣ ಸಂಸ್ಥೆ ಪರ ವಕೀಲರು ಫೆ.7ರಂದು ಹೈಕೋರ್ಟ್‌ನ ಕಲಬುರ್ಗಿ ಪೀಠದಲ್ಲಿ ಅರ್ಜಿ ಸಲ್ಲಿಸಿದ್ದರು. ಅದೇ ದಿನಅರ್ಜಿಯನ್ನು ವಿಚಾರಣೆಗೆ ಕೈಗೆತ್ತಿಕೊಂಡ ನ್ಯಾಯಪೀಠ, ಇದರ ಬಗ್ಗೆ ವಿವರ ನೀಡುವಂತೆ ಸರ್ಕಾರಿ ವಕೀಲರಿಗೆ ಸೂಚಿಸಿ ವಿಚಾರಣೆಮುಂದೂಡಿತು.

ಶಾಹೀನ್‌ ಪ್ರಾಥಮಿಕ ಶಾಲೆಯ ವಾರ್ಷಿಕೋತ್ಸವದಲ್ಲಿ ಸಿಎಎ ಹಾಗೂ ಎನ್‌ಆರ್‌ಸಿ ವಿರುದ್ಧ ಮಕ್ಕಳಿಂದ ನಾಟಕ ಮಾಡಿಸಿ, ಚಪ್ಪಲಿ ತೋರಿಸಿ ಪ್ರಧಾನಿಯನ್ನು ಅವಹೇಳನ ಮಾಡಲಾಗಿದೆ ಎಂದು ಬಾಲಕಿಯ ತಾಯಿ ಸೇರಿ ಹಲವರ ವಿರುದ್ಧ ಪ್ರಕರಣ ದಾಖಲಾಗಿದೆ.

ADVERTISEMENT

ಇಂದು ವಿಚಾರಣೆ: ಸಂಸ್ಥೆಯ ಆಡಳಿತ ಮಂಡಳಿ ಪದಾಧಿಕಾರಿಗಳು ನಿರೀಕ್ಷಣಾ ಜಾಮೀನು ಕೋರಿ ಸಲ್ಲಿಸಿರುವ ಅರ್ಜಿಯ ವಿಚಾರಣೆಯು ಫೆ.11ರಂದು ಬೀದರ್‌ನ ಜಿಲ್ಲಾ ಪ್ರಧಾನ ಹಾಗೂ ಸೆಷನ್ಸ್‌ ನ್ಯಾಯಾಲಯದಲ್ಲಿ ನಡೆಯಲಿದೆ.

‘ತನಿಖೆ ಮುಂದುವರಿದಿದೆ. ಮಕ್ಕಳ ವಿಚಾರಣೆ ಮಾಡಿದ್ದಕ್ಕೆ ರಾಜ್ಯ ಮಕ್ಕಳ ಹಕ್ಕು ಆಯೋಗ ವರದಿ ಕೇಳಿತ್ತು. ಆಯೋಗದ ಸದಸ್ಯೆ ಜಯಶ್ರೀ ಅವರಿಗೆ ವರದಿ ಕಳುಹಿಸಲಾಗಿದೆ’ ಎಂದು ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿ ನಾಗೇಶ ಡಿ.ಎಲ್‌ ಅವರು ತಿಳಿಸಿದ್ದಾರೆ.

ಅವಧಿ ವಿಸ್ತರಣೆ: ಶಾಲೆ ಮುಖ್ಯ ಶಿಕ್ಷಕಿ ಫರೀದಾ ಬೇಗಂ ಹಾಗೂ ಬಾಲಕಿಯ ತಾಯಿ ಅಂಜುಮನ್ನಿಸಾ ಅವರನ್ನು ಸೋಮವಾರ ಜೆಎಂಎಫ್‌ಸಿ ನ್ಯಾಯಾಲಯಕ್ಕೆ ಹಾಜರು ಪಡಿಸಲಾಯಿತು. ನ್ಯಾಯಾಲಯ ಬಂಧನದ ಅವಧಿಯನ್ನು ಫೆ.24ರ ವರೆಗೆ ವಿಸ್ತರಿಸಿದೆ.

ನ್ಯಾಯಾಂಗ ಬಂಧನ ಅವಧಿ ವಿಸ್ತರಣೆ

ಶಾಹೀನ್‌ ಪ್ರಾಥಮಿಕ ಶಾಲೆ ಮುಖ್ಯ ಶಿಕ್ಷಕಿ ಫರೀದಾ ಬೇಗಂ ಹಾಗೂ ಬಾಲಕಿಯ ತಾಯಿ ಅಂಜುಮನ್ನಿಸಾ ಅವರನ್ನು ಸೋಮವಾರ ಜೆಎಂಎಫ್‌ಸಿ ನ್ಯಾಯಾಲಯಕ್ಕೆ ಹಾಜರುಪಡಿಸಲಾಯಿತು. ನ್ಯಾಯಾಲಯ ಬಂಧನದ ಅವಧಿಯನ್ನು ಫೆ.24ರ ವರೆಗೆ ವಿಸ್ತರಿಸಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.