ಬೆಂಗಳೂರು: ಲಾಂಗ್ ಜೊತೆ ಫೋಸ್ ನೀಡಿ ಫೋಟೊ ಕ್ಲಿಕ್ಕಿಸಿಕೊಂಡು ಸಾಮಾಜಿಕ ಜಾಲತಾಣಗಳಲ್ಲಿ ಅಪ್ಲೋಡ್ ಮಾಡಿ ಜನರಲ್ಲಿ ಭಯವನ್ನುಂಟು ಮಾಡುತ್ತಿದ್ದ ಐವರು ಸುಲಿಗೆಕೋರರನ್ನು ಸಿಸಿಬಿ ಪೊಲೀಸರು ಬಂಧಿಸಿದ್ದಾರೆ.
ದೇವಸಂದ್ರದ ನದೀಮ್ ಅಲಿಯಾಸ್ ಸಾಸ್ (26), ಪ್ಯಾಲೇಸ್ ಗುಟ್ಟಹಳ್ಳಿಯ ರಾಜೇಶ್ ಅಲಿಯಾಸ್ ಕಡ್ಡಿ (28),ಕೆ.ಜಿ.ಎಫ್ನ ಹನುಮಂತು (30), ಸಾದರಮಂಗಲದ ಸೂರಿ ಅಲಿಯಾಸ್ ಟೈಗರ್ ಸೂರಿ ಹಾಗೂ ಆಂಧ್ರಪ್ರದೇಶದ ಸುರೇಶ್ಕುಮಾರ್ ಅಲಿಯಾಸ್ ಬೇಕರಿ ಸೂರಿ (26) ಬಂಧಿತ ಆರೋಪಿಗಳು. ಅವರಿಂದ ಎರಡು ಲಾಂಗ್, ಕಬ್ಬಿಣದ ಸಲಾಖೆ, ಡ್ರ್ಯಾಗರ್ ಹಾಗೂ ಖಾರದ ಪುಡಿಯನ್ನು ಜಪ್ತಿ ಮಾಡಲಾಗಿದೆ.
‘ಕೆ.ಆರ್.ಪುರ ಠಾಣೆ ವ್ಯಾಪ್ತಿಯಲ್ಲಿ ಶುಕ್ರವಾರ ರಾತ್ರಿ ಆರೋಪಿಗಳು ಮಾರಕಾಸ್ತ್ರ ಹಿಡಿದು ಜನರನ್ನು ಸುಲಿಗೆ ಮಾಡಲು ಹೊಂಚು ಹಾಕುತ್ತಿದ್ದರು. ಈ ಬಗ್ಗೆ ಮಾಹಿತಿ ಪಡೆದ ಸಿಸಿಬಿ ಸಂಘಟಿತ ಅಪರಾಧ ತಡೆ ದಳದ ಇನ್ಸ್ಪೆಕ್ಟರ್ಗಳಾದ ಜಿ. ಕೇಶವಮೂರ್ತಿ ಹಾಗೂ ಎಂ. ಮುರುಗೇಂದ್ರಯ್ಯ ನೇತೃತ್ವದ ತಂಡ ದಾಳಿ ನಡೆಸಿ ಆರೋಪಿಗಳನ್ನು ಬಂಧಿಸಿದೆ’ ಎಂದು ಸಿಸಿಬಿ ಹಿರಿಯ ಅಧಿಕಾರಿಯೊಬ್ಬರು ಹೇಳಿದರು.
‘ಕೊಲೆಗೆ ಯತ್ನ,ಕೊಲೆ, ಸುಲಿಗೆ ಹಾಗೂ ಜೀವ ಬೆದರಿಕೆ ಪ್ರಕರಣದಲ್ಲಿ ಆರೋಪಿಗಳು ಭಾಗಿಯಾಗಿದ್ದರು. ಕಾರ್ಪೊರೇಟರ್ ಶ್ರೀಕಾಂತ್ ಅಲಿಯಾಸ್ ಪುಟ್ಟ ಅವರ ಸಹೋದರನ ಮೇಲೂ ಹಲ್ಲೆ ಮಾಡಿದ್ದ ಆರೋಪಿಗಳು, ಆ ಪ್ರಕರಣದಲ್ಲಿ ಜೈಲು ಸೇರಿದ್ದರು. ಜಾಮೀನು ಪಡೆದು ಹೊರಬಂದ ಬಳಿಕವೂ ಅಪರಾಧ ಕೃತ್ಯ ಮುಂದುವರಿಸಿದ್ದರು. ಜನರು ತಮ್ಮನ್ನು ನೋಡಿ ಭಯಪಡಬೇಕು ಎಂಬ ಕಾರಣಕ್ಕೆ ಮಾರಕಾಸ್ತ್ರಗಳ ಜೊತೆ ಫೋಟೊ ತೆಗೆಸಿಕೊಂಡು ಸಾಮಾಜಿಕ ಜಾಲತಾಣಗಳಲ್ಲಿ ಅಪ್ಲೋಡ್ ಮಾಡುತ್ತಿದ್ದರು’ ಎಂದು ತಿಳಿಸಿದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.