ADVERTISEMENT

ಸಂಪತ್‌ ರಾಜ್ ಪರಾರಿ; ವಿಶೇಷ ತಂಡಗಳಿಂದ ಹುಡುಕಾಟ

​ಪ್ರಜಾವಾಣಿ ವಾರ್ತೆ
Published 31 ಅಕ್ಟೋಬರ್ 2020, 20:06 IST
Last Updated 31 ಅಕ್ಟೋಬರ್ 2020, 20:06 IST
ಸಂಪತ್‌ ರಾಜ್
ಸಂಪತ್‌ ರಾಜ್   

ಬೆಂಗಳೂರು: ಪೊಲೀಸರ ಕಣ್ತಪ್ಪಿಸಿ ಪರಾರಿಯಾಗಿರುವ ಕಾಂಗ್ರೆಸ್ ಮುಖಂಡ ಆರ್. ಸಂಪತ್‌ ರಾಜ್ ಪತ್ತೆಗಾಗಿ ಸಿಸಿಬಿಯ ವಿಶೇಷ ತಂಡಗಳು ಹುಡುಕಾಟ ನಡೆಸಿದ್ದು, ಇದುವರೆಗೂ ಯಾವುದೇ ಸುಳಿವು ಸಿಕ್ಕಿಲ್ಲ.

ಶಾಸಕ ಅಖಂಡ ಶ್ರೀನಿವಾಸಮೂರ್ತಿ ಅವರ ಮನೆ ಮೇಲೆ ದಾಳಿ ಮಾಡಿ ಬೆಂಕಿ ಹಚ್ಚಿದ್ದ ಪ್ರಕರಣದ ಆರೋಪಿಯಾಗಿರುವ ಸಂಪತ್‌ ರಾಜ್, ಕೊರೊನಾ ಸೋಂಕು ತಗುಲಿದ ನೆಪವೊಡ್ಡಿ ಆಸ್ಪತ್ರೆಗೆ ದಾಖಲಾಗಿದ್ದರು. ಅ. 30ರಂದು ಬೆಳಿಗ್ಗೆ ಆಸ್ಪತ್ರೆಯಿಂದ ಬಿಡುಗಡೆ ಆಗಿ ಪರಾರಿಯಾಗಿದ್ದಾರೆ.

‘ಪ್ರಕರಣದ ಪ್ರಮುಖ ಆರೋಪಿ ಆಗಿರುವ ಸಂಪತ್‌ರಾಜ್ ವಿರುದ್ಧ ನ್ಯಾಯಾಲಯಕ್ಕೆ ಈಗಾಗಲೇ ದೋಷಾರೋಪ ಪಟ್ಟಿ ಸಲ್ಲಿಸಲಾಗಿದೆ. ಕೊರೊನಾ ಸೋಂಕು ತಗುಲಿದ ಕಾರಣ ನೀಡಿದ್ದಕ್ಕಾಗಿ, ಅವರನ್ನ ಬಂಧಿಸಿರಲಿಲ್ಲ. ಆದರೆ, ಅವರು ಏಕಾಏಕಿ ಆಸ್ಪತ್ರೆಯಿಂದ ಪರಾರಿಯಾಗಿದ್ದನ್ನು ಗಂಭೀರವಾಗಿ ಪರಿಗಣಿಸಲಾಗಿದೆ’ ಎಂದು ಸಿಸಿಬಿ ಅಧಿಕಾರಿಯೊಬ್ಬರು ಹೇಳಿದರು.

ADVERTISEMENT

‘ಆಸ್ಪತ್ರೆ ಆಡಳಿತ ಮಂಡಳಿಗೂ ನೋಟಿಸ್ ನೀಡಿ ಮಾಹಿತಿ ಸಂಗ್ರಹಿಸಲಾಗುತ್ತಿದೆ. ಪರಾರಿಯಾಗಿರುವ ಸಂಪತ್‌ರಾಜ್, ಸಂಬಂಧಿಕರು ಹಾಗೂ ಸ್ನೇಹಿತರ ಜೊತೆ ಸಂಪರ್ಕದಲ್ಲಿರುವ ಮಾಹಿತಿ ಇದೆ. ಆ ಬಗ್ಗೆಯೂ ಪ್ರತ್ಯೇಕ ತಂಡವೊಂದು ತನಿಖೆ ಮುಂದುವರಿಸಿದೆ’ ಎಂದೂ ತಿಳಿಸಿದರು.

ಹೊಸ ಸಿಮ್‌ಕಾರ್ಡ್‌ ಬಳಕೆ ಶಂಕೆ: ‘ಆರೋಪಿ ಸಂಪತ್‌ರಾಜ್, ಹೊಸ ಸಿಮ್‌ ಕಾರ್ಡ್‌ ಬಳಕೆ ಮಾಡುತ್ತಿರುವ ಶಂಕೆ ಇದೆ. ಆ ಸಂಖ್ಯೆ ಯಾವುದು ಎಂಬುದನ್ನು ಪತ್ತೆ ಮಾಡಲಾಗುತ್ತಿದೆ’ ಎಂದು ಅಧಿಕಾರಿ ಹೇಳಿದರು.

‘ಬೆಂಗಳೂರು ಅಥವಾ ನೆರೆ ಜಿಲ್ಲೆಗಳಲ್ಲಿ ಸಂಪತ್‌ರಾಜ್ ತಲೆಮರೆಸಿಕೊಂಡಿರುವ ಮಾಹಿತಿ ಇದೆ. ಹೀಗಾಗಿ, ವಿಶೇಷ ತಂಡಗಳು ಹಲವೆಡೆ ಸಂಚರಿಸುತ್ತಿದ್ದು, ಸದ್ಯದಲ್ಲೇ ಸಂಪತ್‌ ರಾಜ್ ಅವರನ್ನು ಬಂಧಿಸಲಾಗುವುದು’ ಎಂದೂ ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.