ADVERTISEMENT

ಸಿಇಟಿ: ಕೆಲ ಅಡಚಣೆ ಹೊರತಾಗಿ ಮೊದಲ ದಿನ ಸುಸೂತ್ರ

​ಪ್ರಜಾವಾಣಿ ವಾರ್ತೆ
Published 21 ಮೇ 2023, 0:10 IST
Last Updated 21 ಮೇ 2023, 0:10 IST
ಸಂಚಾರ ದಟ್ಟಣೆಯ ಕಾರಣ ಬೆಂಗಳೂರಿನ ಕಂಠೀರವ ಕ್ರೀಡಾಂಗಣದ ಬಳಿಯ ಸಿಇಟಿ ಕೇಂದ್ರಕ್ಕೆ ಶನಿವಾರ ನಡೆದುಬಂದ ಅಭ್ಯರ್ಥಿಗಳು–ಪ್ರಜಾವಾಣಿ/ಚಿತ್ರ ಕಿಶೋರ್ ಕುಮಾರ್ ಬೋಳಾರ್
ಸಂಚಾರ ದಟ್ಟಣೆಯ ಕಾರಣ ಬೆಂಗಳೂರಿನ ಕಂಠೀರವ ಕ್ರೀಡಾಂಗಣದ ಬಳಿಯ ಸಿಇಟಿ ಕೇಂದ್ರಕ್ಕೆ ಶನಿವಾರ ನಡೆದುಬಂದ ಅಭ್ಯರ್ಥಿಗಳು–ಪ್ರಜಾವಾಣಿ/ಚಿತ್ರ ಕಿಶೋರ್ ಕುಮಾರ್ ಬೋಳಾರ್   

ಬೆಂಗಳೂರು: ಮುಖ್ಯಮಂತ್ರಿ ಹಾಗೂ ಇತರೆ ಸಚಿವರ ಪ್ರಮಾಣ ವಚನ ಸ್ವೀಕಾರ ಸಮಾರಂಭದಿಂದ ಕಂಠೀರವ ಕ್ರೀಡಾಂಗಣದ ಸುತ್ತಮುತ್ತಲ ಪ್ರದೇಶಗಳಲ್ಲಿ ಸಂಚಾರ ಸಮಸ್ಯೆಗಳ ಹೊರತಾಗಿ ಶನಿವಾರ ನಡೆದ ಕರ್ನಾಟಕ ಸಾಮಾನ್ಯ ಪ್ರವೇಶ ಪರೀಕ್ಷೆ (ಕೆಸಿಇಟಿ) ರಾಜ್ಯದ 592 ಕೇಂದ್ರಗಳಲ್ಲೂ ಸುಸೂತ್ರವಾಗಿ ನೆರವೇರಿತು.

ಹೆಸರು ನೋಂದಾಯಿಸಿಕೊಂಡಿದ್ದ 2,61,610 ಅಭ್ಯರ್ಥಿಗಳಲ್ಲಿ 2,00,457 (82.53%) ಜೀವ ವಿಜ್ಞಾನ ಹಾಗೂ 2,39,716 (93.78%) ಅಭ್ಯರ್ಥಿಗಳು ಗಣಿತ ವಿಷಯದಲ್ಲಿ ಪರೀಕ್ಷೆ ಬರೆದರು ಎಂದು ಕೆಇಎ ಕಾರ್ಯನಿರ್ವಾಹಕ ನಿರ್ದೇಶಕಿ ಎಸ್‌.ರಮ್ಯಾ ತಿಳಿಸಿದರು.

ಕೆಇಎ ಸೂಚನೆಯಂತೆ ಅಭ್ಯರ್ಥಿಗಳು ಎರಡು ಗಂಟೆ ಮುಂಚಿತವಾಗಿ ಬೆಂಗಳೂರಿನ ಸಿಇಟಿ ಕೇಂದ್ರಗಳಿಗೆ ತಲುಪಿದರು. ಅವರಿಗೆ ಕಾಲೇಜು ಆಡಳಿತ ಮಂಡಳಿಗಳು ಅಲ್ಲೇ ಉಪಹಾರದ ವ್ಯವಸ್ಥೆ ಮಾಡಿದ್ದವು. ಎಲ್ಲೂ ಅಹಿತಕರ ಘಟನೆಗಳು ವರದಿಯಾಗಿಲ್ಲ. ಆದರೆ, ಪ್ರಮಾಣ ವಚನ ಸ್ವೀಕಾರ ಸಮಾರಂಭ ನಡೆದ ಕಂಠೀರವ ಕ್ರೀಡಾಂಗಣ ಎದುರಿನ ವಿಠಲಮಲ್ಯ ರಸ್ತೆಯ ಸೇಂಟ್‌ ಜೋಸೆಫ್‌, ಇಂಡಿಯನ್‌ ಕಾಂಪೋಸಿಟ್‌ ಪಿಯು ಕಾಲೇಜು ಕೇಂದ್ರಗಳ ಅಭ್ಯರ್ಥಿಗಳು ಹೊರಗಿನ ಶಬ್ದ ಮಾಲಿನ್ಯದಿಂದ ತೊಂದರೆ ಅನುಭವಿಸಿದರು. ಕೆಲ ಕೇಂದ್ರಗಳಲ್ಲಿ ಅಲ್ಪ ಸಮಯದ ವಿದ್ಯುತ್‌ ವ್ಯತ್ಯಯದಿಂದ ಬೆಳಕಿನ ಸಮಸ್ಯೆಯಾಗಿತ್ತು.

ADVERTISEMENT

ಗಣಿತ ವಿಷಯದ ಪ್ರಶ್ನೆಗಳು ಸ್ವಲ್ಪ ಕಠಿಣವಾಗಿದ್ದವು ಎಂದು ವಿದ್ಯಾರ್ಥಿಗಳು ಅಭಿಪ್ರಾಯ ವ್ಯಕ್ತಪಡಿಸಿದರು. ಭಾನುವಾರ ಭೌತ ವಿಜ್ಞಾನ ಮತ್ತು ರಸಾಯನ ವಿಜ್ಞಾನ ವಿಷಯಗಳಿಗೆ ಪರೀಕ್ಷೆ ನಡೆಯಲಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.