ಬೆಂಗಳೂರು: ಪೀಣ್ಯ ಹಾಗೂ ಯಲಹಂಕ ಠಾಣೆ ವ್ಯಾಪ್ತಿಯಲ್ಲಿ ದುಷ್ಕರ್ಮಿಗಳು, ಮಹಿಳೆಯರಿಬ್ಬರ ಸರಗಳವು ಮಾಡಿದ್ದಾರೆ. ಗಿರಿನಗರ ಠಾಣೆ ವ್ಯಾಪ್ತಿಯಲ್ಲಿ ವ್ಯಕ್ತಿಯೊಬ್ಬರಿಗೆ ಚಾಕು ತೋರಿಸಿ ಚಿನ್ನಾಭರಣ ದೋಚಿದ್ದಾರೆ.
ಪೀಣ್ಯ ಬಳಿಯ ದೊಡ್ಡಬಿದರಕಲ್ಲಿನಲ್ಲಿ ಜ್ಯೂಸ್ ಅಂಗಡಿ ಇಟ್ಟುಕೊಂಡಿರುವ ಗಾಯತ್ರಿ ಎಂಬುವರು, ಸೋಮವಾರ ಬೆಳಿಗ್ಗೆ 5.30 ಗಂಟೆಗೆ ಅಂಗಡಿ ಮುಂದೆ ಕಸಗೂಡಿಸಿ ಸ್ವಚ್ಛಗೊಳಿಸುತ್ತಿದ್ದರು. ಬೈಕ್ನಲ್ಲಿ ಬಂದಿದ್ದ ದುಷ್ಕರ್ಮಿಗಳು, ಅವರ 30 ಗ್ರಾಂ ಚಿನ್ನದ ಸರವನ್ನು ಕಿತ್ತೊಯ್ದಿದ್ದಾರೆ.
ಇನ್ನೊಂದು ಪ್ರಕರಣದಲ್ಲಿ ಯಲಹಂಕ ಬಳಿಯಮಾರುತಿನಗರದಲ್ಲಿ ಬೆಳಿಗ್ಗೆ 5.20 ಗಂಟೆಗೆ ರತ್ನಮ್ಮ ಎಂಬುವರ 40 ಗ್ರಾಂ ತೂಕದ ಚಿನ್ನದ ಸರವನ್ನು ಕಿತ್ತೊಯ್ಯಲಾಗಿದೆ.
ಚಾಕು ತೋರಿಸಿ ದರೋಡೆ: ಗಿರಿನಗರದ ಮುನೇಶ್ವರ ಬ್ಲಾಕ್ನ 17ನೇ ಮುಖ್ಯರಸ್ತೆಯಲ್ಲಿ ದುಷ್ಕರ್ಮಿಗಳು, ಪ್ರಜ್ವಲ್ಗೌಡ ಎಂಬುವರಿಗೆ ಚಾಕು ತೋರಿಸಿ ಚಿನ್ನದ ಸರ ಹಾಗೂ ಉಂಗುರ ಸುಲಿಗೆ ಮಾಡಿದ್ದಾರೆ.
ಸ್ಥಳೀಯ ನಿವಾಸಿಯಾದ ಪ್ರಜ್ವಲ್, ಭಾನುವಾರ ಬೆಳಿಗ್ಗೆಮನೆಯ ಕಸವನ್ನು ಸಮೀಪದ ತೊಟ್ಟಿಗೆ ಹಾಕಿ ವಾಪಸ್ ನಡೆದುಕೊಂಡು ಹೋಗುತ್ತಿದ್ದರು. ಬೈಕ್ನಲ್ಲಿ ಬಂದಿದ್ದ ದುಷ್ಕರ್ಮಿಗಳು ಅವರನ್ನು ಅಡ್ಡಗಟ್ಟಿ ಚಾಕು ತೋರಿಸಿ ಕೊಲೆ ಬೆದರಿಕೆ ಹಾಕಿದ್ದರು. ಅವರ 16 ಗ್ರಾಂ ಚಿನ್ನದ ಸರ, ಕೈಯಲ್ಲಿದ್ದ ಬ್ರೇಸ್ಲೆಟ್ ಹಾಗೂ 5 ಗ್ರಾಂ ಚಿನ್ನದ ಉಂಗುರ ಕಿತ್ತುಕೊಂಡು ಆರೋಪಿಗಳು ಪರಾರಿಯಾಗಿದ್ದಾರೆ ಎಂದು ಗಿರಿನಗರ ಪೊಲೀಸರು ಹೇಳಿದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.