ಬೆಂಗಳೂರು: ಮಹಿಳೆಯರನ್ನು ಹಿಂಬಾಲಿಸಿ ಸರಗಳವು ಮಾಡುತ್ತಿದ್ದ ಉತ್ತರ ಭಾರತದ ಗ್ಯಾಂಗ್ನ ಇಬ್ಬರನ್ನು ಇತ್ತೀಚೆಗಷ್ಟೇ ಬಂಧಿಸಿದ್ದ ರಾಜಾಜಿನಗರ ಠಾಣೆ ಪೊಲೀಸರು, ಅದೇ ಗ್ಯಾಂಗ್ನ ನಾಲ್ವರನ್ನು ಶನಿವಾರ ಸೆರೆ ಹಿಡಿದಿದ್ದಾರೆ.
‘ರಾಜಸ್ಥಾನದ ಚಗನ್ಲಾಲ್ ಮಾಲಿ (27), ಪಂಜಾಬ್ನ ಅರ್ಜುನ್ ಸಿಂಗ್ (32), ರಾಕೇಶ್ (40) ಹಾಗೂ ಸೋನುಕುಮಾರ್ ಕನೌಜಿಯಾ (27) ಬಂಧಿತರು. ಅವರಿಂದ ₹ 20 ಲಕ್ಷ ಮೌಲ್ಯದ ಚಿನ್ನಾಭರಣ ಜಪ್ತಿ ಮಾಡಲಾಗಿದೆ’ ಎಂದು ಉತ್ತರ ವಿಭಾಗದ ಡಿಸಿಪಿ ಧರ್ಮೇಂದ್ರಕುಮಾರ್ ಮೀನಾ ತಿಳಿಸಿದರು.
‘ಸರಗಳವು ಮಾಡಿ ಪರಾರಿಯಾಗುತ್ತಿದ್ದ ಗ್ಯಾಂಗ್ನ ಪ್ರಮುಖ ಆರೋಪಿಗಳಾದ ಪಂಜಾಬ್ನ ಸಂಜಯ್ (30) ಹಾಗೂ ಉತ್ತರ ಪ್ರದೇಶದ ಸುಭಾಷಕುಮಾರ್ (24) ಎಂಬುವರನ್ನು ಕಾಲಿಗೆ ಗುಂಡು ಹಾರಿಸಿ ಇತ್ತೀಚೆಗಷ್ಟೇ ಬಂಧಿಸಲಾಗಿತ್ತು. ಅವರು ನೀಡಿದ್ದ ಮಾಹಿತಿಯನ್ವಯ ಗ್ಯಾಂಗ್ನ ಸದಸ್ಯರೆಲ್ಲರನ್ನೂ ಸೆರೆ ಹಿಡಿಯಲಾಗಿದೆ’ ಎಂದೂ ಹೇಳಿದರು.
‘ಉತ್ತರ ಭಾರತದಿಂದ ಬಂದು ನಗರದ ಬಾಡಿಗೆ ಮನೆಯಲ್ಲಿ ಉಳಿದುಕೊಂಡಿದ್ದ ಆರೋಪಿಗಳು, ಬೈಕ್ನಲ್ಲಿ ಸುತ್ತಾಡಿ ಸರಗಳವು ಮಾಡುತ್ತಿದ್ದರು. ಆರೋಪಿ ಅರ್ಜುನ್ ಸಿಂಗ್, ತಮಿಳುನಾಡಿನಲ್ಲಿ 15 ಕಡೆ ಸರಗಳವು ಮಾಡಿ ಜೈಲು ಶಿಕ್ಷೆಯನ್ನೂ ಅನುಭವಿಸಿದ್ದ. ಇನ್ನೊಬ್ಬ ಆರೋಪಿ ಚಗನ್ಲಾಲ್, ವಂಚನೆ ಪ್ರಕರಣದಲ್ಲಿ ಜೈಲಿಗೆ ಹೋಗಿ ಬಂದಿದ್ದ’ ಎಂದು ಅವರು ವಿವರಿಸಿದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.