ADVERTISEMENT

ಬೇರೆ ಯುವತಿ ಜತೆ ಮದುವೆ ನಿಶ್ಚಯವಾಗಿದ್ದಕ್ಕೆ ಸ್ನೇಹಿತನಿಗೆ ಬಿಸಿನೀರು ಎರಚಿದ ಮಹಿಳೆ

​ಪ್ರಜಾವಾಣಿ ವಾರ್ತೆ
Published 29 ಮೇ 2023, 20:16 IST
Last Updated 29 ಮೇ 2023, 20:16 IST
ಪ್ರಾತಿನಿಧಿಕ ಚಿತ್ರ
ಪ್ರಾತಿನಿಧಿಕ ಚಿತ್ರ   

ಬೆಂಗಳೂರು: ಬಟ್ಟೆ ಮಾರಾಟ ಜಾಲತಾಣವೊಂದರ ಕಚೇರಿಯಲ್ಲಿ ಕೆಲಸ ಮಾಡುತ್ತಿದ್ದ ವಿಜಯ್‌ಕುಮಾರ್ ಎಂಬುವರ ಮೇಲೆ ಬಿಸಿನೀರು ಎರಚಿ ಗಾಯಗೊಳಿಸಲಾಗಿದ್ದು, ಕೃತ್ಯ ಎಸಗಿದ್ದ ಆರೋಪದಡಿ ಸ್ನೇಹಿತೆ ವಿರುದ್ಧ ಚಾಮರಾಜಪೇಟೆ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

‘ಕಲಬುರಗಿಯ ವಿಜಯ್‌ಕುಮಾರ್, ಕೆಲಸ ಹುಡುಕಿಕೊಂಡು ನಗರಕ್ಕೆ ಬಂದಿದ್ದರು. ಬೊಮ್ಮಸಂದ್ರದಲ್ಲಿ ಸ್ನೇಹಿತರ ಜೊತೆ ವಾಸವಿದ್ದರು. ಬಿಸಿನೀರು ಎರಚಿದ್ದರಿಂದ ಗಾಯಗೊಂಡಿರುವ ವಿಜಯ್‌, ವಿಕ್ಟೋರಿಯಾ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಅವರು ನೀಡಿರುವ ದೂರು ಆಧರಿಸಿ ಸ್ನೇಹಿತೆ ವಿರುದ್ಧ ಎಫ್‌ಐಆರ್ ದಾಖಲಿಸಿಕೊಳ್ಳಲಾಗಿದೆ’ ಎಂದು ಪೊಲೀಸರು ಹೇಳಿದರು.

‘30 ವರ್ಷ ವಯಸ್ಸಿನ ವಿಜಯ್ ಅವರಿಗೆ ಐದು ವರ್ಷಗಳ ಹಿಂದೆಯಷ್ಟೇ ಕಲಬುರಗಿ ಜಿಲ್ಲೆಯ ಮಹಿಳೆಯೊಬ್ಬರ ಪರಿಚಯವಾಗಿ ಸ್ನೇಹ ಬೆಳೆದಿತ್ತು. ಇಬ್ಬರ ನಡುವೆ ಸಲುಗೆ ಇತ್ತು. ಮಹಿಳೆ ಸಹ ಬೆಂಗಳೂರಿಗೆ ಬಂದು, ಹನುಮಂತನಗರ ಬಳಿಯ ಆಸ್ಪತ್ರೆಯಲ್ಲಿ ಕೆಲಸಕ್ಕೆ ಸೇರಿದ್ದರು. ಮದುವೆಯಾಗಿದ್ದ ಮಹಿಳೆ, ವಿಷಯ ಮುಚ್ಚಿಟ್ಟು ವಿಜಯ್ ಅವರನ್ನು ಪ್ರೀತಿಸುತ್ತಿದ್ದರು. ಮದುವೆ ಆಗುವಂತೆ ಒತ್ತಾಯಿಸಿದ್ದರು.’

ADVERTISEMENT

‘ಮಹಿಳೆಯ ಮೊದಲ ಮದುವೆ ವಿಷಯ ವಿಜಯ್‌ಗೆ ಗೊತ್ತಾಗಿತ್ತು. ಬಳಿಕ, ವಿಜಯ್ ಮಹಿಳೆಯಿಂದ ಅಂತರ ಕಾಯ್ದುಕೊಳ್ಳಲಾರಂಭಿಸಿದ್ದರು. ಇದರ ನಡುವೆಯೇ ವಿಜಯ್‌ಗೆ ಬೇರೊಬ್ಬ ಯುವತಿ ಜೊತೆ ಮದುವೆ ನಿಶ್ಚಯವಾಗಿತ್ತು’ ಎಂದು ಪೊಲೀಸರು ತಿಳಿಸಿದರು.

‘ತಮ್ಮ ಜನ್ಮದಿನ ಆಚರಣೆ ತಯಾರಿ ಬಗ್ಗೆ ಮಾತನಾಡುವ ನೆಪದಲ್ಲಿ ಮಹಿಳೆ, ವಿಜಯ್‌ ಅವರನ್ನು ಮೇ 25ರಂದು ಕೊಠಡಿಗೆ ಕರೆಸಿದ್ದರು. ಇದೇ ವೇಳೆ ವಿಜಯ್, ತಮ್ಮ ಭಾವಿ ಪತ್ನಿ ಜೊತೆ ಮೊಬೈಲ್‌ನಲ್ಲಿ ಮಾತನಾಡಿದ್ದರು. ಇದರಿಂದ ಸಿಟ್ಟಾದ ಮಹಿಳೆ, ವಿಜಯ್‌ ಮೇಲೆ ಬಿಸಿನೀರು ಎರಚಿ ಕೊಠಡಿ ಬಾಗಿಲು ಹಾಕಿಕೊಂಡು ಪರಾರಿಯಾಗಿದ್ದಾರೆ. ಮನೆ ಮಾಲೀಕರು, ವಿಜಯ್ ಅವರನ್ನು ರಕ್ಷಿಸಿ ಆಸ್ಪತ್ರೆಗೆ ದಾಖಲಿಸಿದ್ದಾರೆ. ಶೇ 40ರಷ್ಟು ದೇಹ ಸುಟ್ಟಿದೆ’ ಎಂದು ಪೊಲೀಸರು ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.