ಬೆಂಗಳೂರು: ‘ಚಾಮರಾಜಪೇಟೆ ಈದ್ಗಾ ಮೈದಾನ ಪಾಲಿಕೆಯ ಸ್ವತ್ತಲ್ಲ. ಆದ್ದರಿಂದ ಯಾವುದೇ ಕಾರ್ಯಕ್ರಮಕ್ಕೂ ಅನುಮತಿ ನೀಡುವ ಅಧಿಕಾರ ನಮಗೆ ಇಲ್ಲ’ ಎಂದು ಬಿಬಿಎಂಪಿ ಮುಖ್ಯ ಆಯುಕ್ತ ತುಷಾರ್ ಗಿರಿನಾಥ್ ಸ್ಪಷ್ಟಪಡಿಸಿದರು.
‘ಸುಪ್ರೀಂಕೋರ್ಟ್ ಆದೇಶಸೇರಿ ವಕ್ಫ್ ಮಂಡಳಿ ನೀಡಿರುವ ದಾಖಲೆ ಗಳನ್ನು ಪರಿಶೀಲಿಸಲಾಗಿದೆ. ಎಲ್ಲವನ್ನೂ ಗಮನಿಸಿದ ಬಳಿಕ ಈ ಆಸ್ತಿ ಪಾಲಿಕೆಯದ್ದಲ್ಲ ಎಂಬುದು ಸ್ಪಷ್ಟವಾಗಿದೆ’ ಎಂದು ಅವರು ಬುಧವಾರ ಸುದ್ದಿಗೋಷ್ಠಿಯಲ್ಲಿ ಒಪ್ಪಿಕೊಂಡರು.
‘ವಕ್ಫ್ ಮಂಡಳಿಗೆ ಸೇರಿದ ಆಸ್ತಿ ಎಂಬುದು ಸುಪ್ರೀಂ ಕೋರ್ಟ್ ಆದೇಶ ದಲ್ಲಿ ಇದೆ. ಆದರೆ, ಈವರೆಗೆ ವಕ್ಫ್ ಮಂಡಳಿ ಹೆಸರಿಗೆ ಖಾತೆ ಬದಲಾವಣೆ ಆಗಿಲ್ಲ. ಆದ್ದರಿಂದ ಪಾಲಿಕೆಯ ಸ್ವಾಧೀನ ದಲ್ಲೇ ಮೈದಾನ ಇತ್ತು. 1974ರಲ್ಲಿ ನಗರ ಸರ್ವೆ ನಡೆದಿದ್ದು, ಪಾಲಿಕೆ ಸ್ವಾಧೀನದ ಆಸ್ತಿ ಎಂದೇ ದಾಖಲಿಸಲಾಗಿದೆ. ಆದ್ದ ರಿಂದ ಇದು ಪಾಲಿಕೆ ಆಸ್ತಿ ಇರಬಹುದು ಎಂದು ಭಾವಿಸಿದ್ದೆವು. ದಾಖಲೆಗಳನ್ನು ಪರಿಶೀಲಿಸಿದ ಬಳಿಕ ವಕ್ಫ್ ಮಂಡಳಿ ಆಸ್ತಿ ಎಂಬುದು ಗೊತ್ತಾಗಿದೆ’ ಎಂದು ವಿವರಿಸಿದರು.
‘2005ರಲ್ಲಿ ಈದ್ಗಾ ಮೈದಾನದ ಒಂದು ಭಾಗದಲ್ಲಿ ನಿರ್ಮಲ ಶೌಚಾಲಯ ನಿರ್ಮಿಸಲಾಗಿದೆ. ಆಗಲೂ ವಕ್ಫ್ ಮಂಡಳಿ ತಕರಾರು ತೆಗೆದಿಲ್ಲ. ಈಗ ಖಾತೆ ಬದಲಾವಣೆಗೆವಕ್ಫ್ ಮಂಡಳಿ ಅರ್ಜಿ ಸಲ್ಲಿಸಿದರೆ ದಾಖಲೆಗಳನ್ನು ಪರಿಶೀಲಿಸಲಾಗುವುದು. ಎಲ್ಲವೂ ಸರಿಯಿದ್ದರೆ ಖಾತೆ ಮಾಡಿಕೊಡಲಾಗುವುದು. ಖಾತೆ ಬದಲಾವಣೆ ಆಗುವ ತನಕ ಪಾಲಿಕೆಯ ಸ್ವಾಧೀನದಲ್ಲೇ ಆಸ್ತಿ ಇರಲಿದೆ. ಆದರೆ, ವಕ್ಫ್ ಮಂಡಳಿ ಮಾಲೀಕತ್ವದ ಆಸ್ತಿ ಆಗಿರುವುದರಿಂದ ಬೇರೆ ಯಾವುದೇ ಕಾರ್ಯಕ್ರಮಕ್ಕೂ ಪಾಲಿಕೆ ಅನುಮತಿ ನೀಡುವುದಿಲ್ಲ’ ಎಂದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.