ಬೆಂಗಳೂರು: ನ್ಯಾಯಾಲಯದ ಪ್ರಕರಣಗಳ ವಿಚಾರಣೆಯ ಉಸ್ತುವಾರಿಗಾಗಿ ನಿಯೋಜಿಸಲಾಗುವ ಕಾನ್ಸ್ಟೆಬಲ್ಗಳನ್ನು ತಿಂಗಳಿಗೊಮ್ಮೆ ಬದಲಾವಣೆ ಮಾಡುವಂತೆ ಹೆಚ್ಚುವರಿ ಪೊಲೀಸ್ ಕಮಿಷನರ್ (ಸಂಚಾರ) ಪಿ. ಹರಿಶೇಖರನ್ ಸುತ್ತೋಲೆ ಹೊರಡಿಸಿದ್ದಾರೆ.
‘ಅಪಘಾತ ಹಾಗೂ ಸಂಚಾರ ಉಲ್ಲಂಘನೆ ಪ್ರಕರಣಗಳ ವಿಚಾರಣೆಯ ಉಸ್ತುವಾರಿಗಾಗಿ ಸದ್ಯ ಪ್ರತಿ ಠಾಣೆಯಿಂದ ಸಿಬ್ಬಂದಿಯನ್ನು ನಿಯೋಜಿಸಲಾಗುತ್ತಿದೆ. ಹಲವು ವರ್ಷಗಳಿಂದ ಅದೊಂದೇ ಕೆಲಸವನ್ನು ಕಾಯಂ ಆಗಿ ಮಾಡುತ್ತಿರುವ ಸಿಬ್ಬಂದಿ, ಕೆಲವೇ ವಕೀಲರೊಂದಿಗೆ ಸಂಪರ್ಕವಿಟ್ಟುಕೊಂಡು ಅವರಿಗಷ್ಟೇ ಪ್ರಕರಣಗಳನ್ನು ಒಪ್ಪಿಸುತ್ತಿದ್ದಾರೆ ಎಂಬ ದೂರುಗಳು ಬಂದಿವೆ. ಕೆಲವು ವಕೀಲರು, ಸಿಬ್ಬಂದಿ ಬಗ್ಗೆ ಅಸಮಾಧಾನ ವ್ಯಕ್ತಪಡಿಸಿದ್ದಾರೆ’ ಎಂದು ಹರಿಶೇಖರನ್ ಹೇಳಿದ್ದಾರೆ.
‘ನ್ಯಾಯಾಲಯದ ಸಿಬ್ಬಂದಿಯನ್ನು ತಿಂಗಳಿಗೊಮ್ಮೆ ಬದಲಾಯಿಸಬೇಕು. ಒಮ್ಮೆ ಕೆಲಸ ಮಾಡಿದವರನ್ನು ಪುನಃ ಅದೇ ಕೆಲಸಕ್ಕೆ ನಿಯೋಜಿಸಬಾರದು. ಇನ್ಸ್ಪೆಕ್ಟರ್ ಅವರು ನ್ಯಾಯಾಲಯದ ದಂಡಾಧಿಕಾರಿಗಳು ಹಾಗೂ ಪಬ್ಲಿಕ್ ಪ್ರಾಸಿಕ್ಯೂಟರ್ಗಳನ್ನು ತಿಂಗಳಿಗೊಮ್ಮೆ ಭೇಟಿಯಾಗಿ ಪ್ರಕರಣಗಳ ಪ್ರಗತಿ ಬಗ್ಗೆ ಚರ್ಚಿಸಬೇಕು’ ಎಂದು ಹೇಳಿದ್ದಾರೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.