ಬೆಂಗಳೂರು: ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆಯ (ಇಸ್ರೊ) ಮಾಜಿ ಅಧ್ಯಕ್ಷ ಡಾ.ಎಸ್.ಸೋಮನಾಥ್ ಅವರು ಚಾಣಕ್ಯ ವಿಶ್ವವಿದ್ಯಾಲಯದ ಕುಲಾಧಿಪತಿಯಾಗಿ ಗುರುವಾರ ಅಧಿಕಾರ ಸ್ವೀಕರಿಸಿದರು.
ಈ ವೇಳೆ ಮಾತನಾಡಿದ ಸೋಮನಾಥ್, ‘ವಿಶ್ವವಿದ್ಯಾಲಯದ ಪ್ರತಿಯೊಬ್ಬ ವಿದ್ಯಾರ್ಥಿಯ ಪ್ರತಿಭೆ ಮತ್ತು ಸಾಮರ್ಥ್ಯವನ್ನು ಶಿಕ್ಷಕರು ಗುರುತಿಸಿ, ಪ್ರೋತ್ಸಾಹಿಸಬೇಕು. ಚಾಣಕ್ಯ ವಿಶ್ವವಿದ್ಯಾಲಯವು ಭವಿಷ್ಯದ ಸವಾಲುಗಳಿಗೆ ಸ್ಪಂದಿಸುವ ಆಧುನಿಕ ನಳಂದ ಅಥವಾ ತಕ್ಷಶಿಲಾ ವಿಶ್ವವಿದ್ಯಾಲಯವಾಗಿ ರೂಪುಗೊಳ್ಳಬೇಕು’ ಎಂದರು.
ಶೈಕ್ಷಣಿಕ ಸಂಶೋಧನೆಯು ದೇಶದ ಆರ್ಥಿಕ ಬೆಳವಣಿಗೆಗೆ ಪೂರಕವಾಗಬೇಕು. ವಿಶ್ವವಿದ್ಯಾಲಯವು ಹೆಚ್ಚಿನ ಪರಿಣಾಮ ಬೀರುವ, ಉದ್ಯಮಕ್ಕೆ ಸಂಬಂಧಿಸಿದ ನಾವೀನ್ಯತೆಗೆ ಮುಂದಾಳತ್ವ ವಹಿಸುವಂತಾಗಬೇಕು ಎಂದು ತಿಳಿಸಿದರು.
ಕಾರ್ಯಕ್ರಮದಲ್ಲಿ ಸಂಸ್ಥಾಪಕ ಕುಲಾಧಿಪತಿ ಪ್ರೊ. ಎಂ. ಕೆ. ಶ್ರೀಧರ್, ಸಮ ಕುಲಾಧಿಪತಿ ಪ್ರೊ. ಎಂ. ಪಿ. ಕುಮಾರ್, ಕುಲಪತಿ ಪ್ರೊ. ಯಶವಂತ ಡೊಂಗ್ರೆ, ಸಮಕುಲಪತಿ ಪ್ರೊ. ಎಚ್. ಎಸ್. ಸುಬ್ರಮಣ್ಯ, ಮುಖ್ಯ ಕಾರ್ಯಾಚರಣೆ ಅಧಿಕಾರಿ ನಾಗರಾಜ್ ರೆಡ್ಡಿ, ಕುಲಸಚಿವರು, ಡೀನ್, ವಿಭಾಗದ ಮುಖ್ಯಸ್ಥರು, ಬೋಧಕ ವರ್ಗ, ಸಿಬ್ಬಂದಿ ಮತ್ತು ವಿದ್ಯಾರ್ಥಿಗಳು ಭಾಗವಹಿಸಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.