ADVERTISEMENT

ಹೆರಿಗೆ ಆಸ್ಪತ್ರೆಯಲ್ಲಿ ಅವ್ಯವಸ್ಥೆ: ವೈದ್ಯರಿಗೆ ನಾಗಲಕ್ಷ್ಮೀ ಚೌಧರಿ ತರಾಟೆ

ಮಲಸಂದ್ರ ಹೆರಿಗೆ ಆಸ್ಪತ್ರೆ ತಿಂಗಳಿನಿಂದ ಬಂದ್

​ಪ್ರಜಾವಾಣಿ ವಾರ್ತೆ
Published 9 ಮೇ 2025, 21:41 IST
Last Updated 9 ಮೇ 2025, 21:41 IST
ಮಹಿಳಾ ಆಯೋಗದ ಅಧ್ಯಕ್ಷೆ ನಾಗಲಕ್ಷ್ಮೀ ಚೌಧರಿ ಅವರು ಮಲ್ಲಸಂದ್ರ ಹೆರಿಗೆ ಆಸ್ಪತ್ರೆಗೆ ಭೇಟಿ ನೀಡಿ ಪರಿಶೀಲಿಸಿದರು. 
ಮಹಿಳಾ ಆಯೋಗದ ಅಧ್ಯಕ್ಷೆ ನಾಗಲಕ್ಷ್ಮೀ ಚೌಧರಿ ಅವರು ಮಲ್ಲಸಂದ್ರ ಹೆರಿಗೆ ಆಸ್ಪತ್ರೆಗೆ ಭೇಟಿ ನೀಡಿ ಪರಿಶೀಲಿಸಿದರು.    

ಬೆಂಗಳೂರು: ಟಿ.ದಾಸರಹಳ್ಳಿಯ ಮಲ್ಲಸಂದ್ರ ಹೆರಿಗೆ ಆಸ್ಪತ್ರೆಯಲ್ಲಿನ ಅವ್ಯವಸ್ಥೆ ಕಂಡು ಆಕ್ರೋಶ ವ್ಯಕ್ತಪಡಿಸಿದ ರಾಜ್ಯ ಮಹಿಳಾ ಆಯೋಗದ ಅಧ್ಯಕ್ಷ ಡಾ.ನಾಗಲಕ್ಷ್ಮೀ ಚೌಧರಿ,  ವೈದ್ಯರು ಮತ್ತು ಸಿಬ್ಬಂದಿಯನ್ನು ತರಾಟೆಗೆ ತೆಗೆದುಕೊಂಡರು.

ಹೆರಿಗೆ ಆಸ್ಪತ್ರೆಗೆ ಶುಕ್ರವಾರ ಭೇಟಿನೀಡಿದ ಅವರು, ರೋಗಿಗಳ ಆರೋಗ್ಯ ವಿಚಾರಿಸಿದರು. ಆಸ್ಪ‍ತ್ರೆಯಲ್ಲಿ ದೊರೆಯುತ್ತಿರುವ ಸೌಲಭ್ಯಗಳ ಬಗ್ಗೆ ಮಾಹಿತಿ ಪಡೆದುಕೊಂಡರು.

ಹೆರಿಗೆ ವಾರ್ಡ್‌ಗೆ ಭೇಟಿ ನೀಡಿದಾಗ, ಇರುವೆಗಳು, ಧೂಳು ಹಿಡಿದ ಉಪಕರಣಗಳು, ಬಳಸಿರುವ ಸಿರಿಂಜ್‌ಗಳು ಕಂಡು ಬಂತು. ವೈದ್ಯರ ಕೊರತೆಯಿಂದಾಗಿ ತಿಂಗಳಿನಿಂದ ಹೆರಿಗೆ ವಾರ್ಡ್ ಬಂದ್ ಆಗಿರುವ ವಿಚಾರ ತಿಳಿದು, ವೈದ್ಯಾಧಿಕಾರಿಯ ವಿರುದ್ಧ ಅಸಮಾಧಾನ ವ್ಯಕ್ತಪಡಿಸಿದರು.

ADVERTISEMENT

ಈ ವೇಳೆ ಮಾತನಾಡಿದ ನಾಗಲಕ್ಷ್ಮೀ ಚೌಧರಿ, ‘ಮಲ್ಲಸಂದ್ರ ಹೆರಿಗೆ ಆಸ್ಪತ್ರೆ ಅವ್ಯವಸ್ಥೆಯಿಂದ ಕೂಡಿದೆ. ತಿಂಗಳಿನಿಂದ ಬಂದ್ ಆಗಿದೆ. ಕೆ.ಸಿ.ಜನರಲ್ ಆಸ್ಪತ್ರೆ ಅಥವಾ ಸಪ್ತಗಿರಿ ಆಸ್ಪತ್ರೆಗೆ ಗರ್ಭಿಣಿಯರನ್ನು ಕಳುಹಿಸುತ್ತಿದ್ದಾರೆ’ ಎಂದು ಹೇಳಿದರು.

‘ಡಿ ದರ್ಜೆ ನೌಕರರು ಇಲ್ಲದ ಕಾರಣ ಸ್ವಚ್ಛತೆ ಕಾಪಾಡುತ್ತಿಲ್ಲ. ಹೆರಿಗೆ ವಾರ್ಡ್‌ನಲ್ಲಿ ಇರುವೆಗಳು ತುಂಬಿವೆ. ವೈದ್ಯಕೀಯ ಉಪಕರಣಗಳು ದೂಳು ಹಿಡಿದಿವೆ. ಹತ್ತು ಹಾಸಿಗೆಗಳ ಸಾಮರ್ಥ್ಯದ ಆಸ್ಪತ್ರೆಯಲ್ಲಿ ಇಬ್ಬರು ವೈದ್ಯರು ಮತ್ತು ಇಬ್ಬರು ಶುಶ್ರೂಷಕಿಯರು ಇದ್ದಾರೆ. ಸ್ಕ್ಯಾನಿಂಗ್ ವ್ಯವಸ್ಥೆ ಇಲ್ಲ. ಮಕ್ಕಳ ತಜ್ಞ ಹಾಗೂ ಸ್ತ್ರೀರೋಗ ತಜ್ಞೆಯನ್ನು ತಕ್ಷಣ ನೇಮಕ ಮಾಡಬೇಕಿದೆ . ಈ ಬಗ್ಗೆ ಸಂಬಂಧಪಟ್ಟ ಅಧಿಕಾರಿಗಳ ಗಮನಕ್ಕೆ ತರಲಾಗುವುದು’ ಎಂದರು.

ಬಳಿಕ ಟಿ.ದಾಸರಹಳ್ಳಿ ವಿಧಾನಸಭಾ ಕ್ಷೇತ್ರದ ಮಂಜುನಾಥನಗರ, ಕಾಟರಾಯನ ನಗರ, ಕರೇಕಲ್ಲು ಹಾಗೂ ಮಹಾಲಕ್ಷ್ಮೀ ನಗರಕ್ಕೆ ಭೇಟಿ ನೀಡಿ ಮಹಿಳೆಯರು ಮತ್ತು ಸಾರ್ವಜನಿಕರ ಸಮಸ್ಯೆ ಆಲಿಸಿದರು.

ಬಾಗಲಗುಂಟೆಯಲ್ಲಿ ನಡೆದ ಸಭೆಯಲ್ಲಿ ಪಿಂಚಣಿ, ಪತಿಯ ದೌರ್ಜನ್ಯ, ಗೃಹ ಲಕ್ಷ್ಮೀ ಹಣ ಬಾರದಿರುವುದು, ಹಕ್ಕು ಪತ್ರ ನೀಡದಿರುವುದು ಹಾಗೂ ಮದ್ಯದಂಗಡಿಗೆ ಪರವಾನಗಿ ನೀಡಿರುವ ಕುರಿತು ಸ್ಥಳೀಯರು ದೂರು ನೀಡಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.