ಬೆಂಗಳೂರು: ಅಮಾನತಿನಲ್ಲಿರುವ ವಿಧಾನಸಭೆ ಕಾರ್ಯದರ್ಶಿ ಎಸ್. ಮೂರ್ತಿ ವಿರುದ್ಧದ ದೋಷಾರೋಪಗಳ ಬಗ್ಗೆ 6 ತಿಂಗಳ ಒಳಗೆ ಇಲಾಖಾ ವಿಚಾರಣೆ ಪೂರ್ಣಗೊಳಿಸಿ ವರದಿ ಸಲ್ಲಿಸ ಬೇಕು ಎಂದು ವಿಚಾರಣಾಧಿಕಾರಿಯಾಗಿರುವ ಸರ್ಕಾರದ ಹೆಚ್ಚುವರಿ ಮುಖ್ಯ ಕಾರ್ಯದರ್ಶಿ ಅಜಯ್ ಸೇಠ್ ಅವರಿಗೆ ವಿಧಾನಸಭಾಧ್ಯಕ್ಷ ವಿಶ್ವೇಶ್ವರ ಹೆಗಡೆ ಕಾಗೇರಿ ಆದೇಶಿಸಿದ್ದಾರೆ.
ಕರ್ನಾಟಕ ನಾಗರಿಕ ಸೇವಾ (ವರ್ಗೀ ಕರಣ, ನಿಯಂತ್ರಣ ಮತ್ತು ಮೇಲ್ಮನವಿ) ನಿಯಮಗಳ ಅನ್ವಯ ಇಲಾಖಾ ವಿಚಾರಣೆ ನಡೆಸಲು 2019ರ ಫೆ. 26 ರಂದು ಹೊರಡಿಸಿದ್ದ ಆದೇಶದಲ್ಲಿ ವಿಚಾರಣಾಧಿಕಾರಿಯಾಗಿ ಅಜಯ್ ಸೇಠ್ ಮತ್ತು ಮಂಡನಾಧಿಕಾರಿಯಾಗಿ ಹಿರಿಯ ವಕೀಲ ನರಸಿಂಹನ್ ಅವರನ್ನು ನೇಮಿಸಲಾಗಿತ್ತು.
2016, 2017ರಲ್ಲಿ ಬೆಳಗಾವಿ ಯ ವಿಧಾನಮಂಡಲ ಅಧಿವೇಶನಕ್ಕೆ ಸಂಬಂ ಧಿಸಿದಂತೆ ಕೈಗೊಂಡ ಕಾಮಗಾರಿಗಳು ಮತ್ತು ಖರ್ಚು ವೆಚ್ಚದಲ್ಲಿ ನಡೆದಿದೆ ಎನ್ನಲಾದ ಅವ್ಯವಹಾರ ಆರೋಪದಡಿ ಇಲಾಖಾ ವಿಚಾರಣೆಯನ್ನು ಬಾಕಿ ಇರಿಸಿ 2018ರ ಡಿ. 27ರಂದು ಮೂರ್ತಿ ಅವರನ್ನು ಅಮಾನತು ಮಾಡಲಾಗಿತ್ತು. ಶಿಸ್ತು ಪ್ರಾಧಿಕಾರ ನೀಡಿದ್ದ ನೋಟಿಸ್ ಪ್ರಶ್ನಿಸಿ ಮೂರ್ತಿ ಹೈಕೋರ್ಟ್ ಮೆಟ್ಟಿಲೇರಿದ್ದರು. ಹೀಗಾಗಿ, ಇಲಾಖಾ ವಿಚಾರಣೆ ಸ್ಥಗಿತಗೊಳಿಸಲಾಗಿತ್ತು. ನ. 4ರಂದು ರಿಟ್ ಅರ್ಜಿ ವಜಾಗೊಳಿಸಿರುವ ಕೋರ್ಟ್, 6 ತಿಂಗಳ ಒಳಗೆ ವಿಚಾರಣೆ ಪೂರ್ಣಗೊಳಿಸಲು ಆದೇಶಿಸಿದೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.