ಬೆಂಗಳೂರು: ನೌಕರರನ್ನು ಕಳುಹಿ ಸುವ ಏಜೆನ್ಸಿಯ ಸೋಗಿನಲ್ಲಿ ಪರಿಚ ಯಿಸಿಕೊಂಡ ಸೈಬರ್ ಕಳ್ಳರು, ಕಂಪನಿಯೊಂದರ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿಗೆ (ಸಿಇಒ) ₹ 57 ಸಾವಿರ ವಂಚಿಸಿದ್ದಾರೆ.
ಉತ್ತರಹಳ್ಳಿಯ ಶ್ಯಾಮಸುಂದರ್ ವಂಚನೆಗೆ ಒಳಗಾದವರು. ಅವರು ನೀಡಿದ ದೂರಿನ ಅನ್ವಯ, ಕೊಲ್ಕತ್ತಾದ ಸಂಜಯ್ ಜನ್ ಎಂಬಾತನ ವಿರುದ್ಧ ಸುಬ್ರಮಣ್ಯಪುರ ಪೊಲೀಸ್ ಠಾಣೆಯಲ್ಲಿ ಎಫ್ಐಆರ್ ದಾಖಲಾಗಿದೆ.
ಇಂಟಿಮರ್ ಸರ್ವೀಸ್ ಕಂಪನಿಯಲ್ಲಿ ಶ್ಯಾಮಸುಂದರ್ ಸಿಇಒ ಆಗಿದ್ದು, ಕಂಪ ನಿಗೆ ಕೆಲಸ ಮಾಡಲು ನೌಕರರಿಗಾಗಿ ಹುಡುಕುತ್ತಿದ್ದರು. ಅವರಿಗೆ ಗೂಗಲ್ನಲ್ಲಿ ಏಜೆನ್ಸಿಯೊಂದರ ಮೊಬೈಲ್ ನಂಬರ್ ಸಿಕ್ಕಿದ್ದು, ಅದಕ್ಕೆ ಅವರು ಕರೆ ಮಾಡಿದ್ದರು.
ಕೊಲ್ಕತ್ತಾದ ಏಜೆನ್ಸಿಯ ಮುಖ್ಯಸ್ಥ ಸಂಜಯ್ ಜನ್ ಎಂದು ಪರಿಚಯಿಸಿಕೊಂಡ ವ್ಯಕ್ತಿಯೊಬ್ಬ, 25 ಕೆಲಸಗಾರರಿದ್ದಾರೆ. ಅವರನ್ನು ಕಳುಹಿಸುವುದಾಗಿ ಹೇಳಿದ್ದಾನೆ. ಬಳಿಕ 25 ಮಂದಿಯ ಗುರುತಿನ ಚೀಟಿ, ಆಧಾರ್ ಕಾರ್ಡ್ ಪ್ರತಿ ಮತ್ತು ಭಾವಚಿತ್ರ ವನ್ನು ಶ್ಯಾಮ್ ಸುಂದರ್ ಅವರ ವಾಟ್ಸ್ ಆ್ಯಪ್ಗೆ ಕಳುಹಿಸಿದ್ದಾನೆ. ನಂತರ ಕೊಲ್ಕತ್ತಾದಿಂದ ಹೈದರಾಬಾದ್ಗೆ ನೌಕರರನ್ನು ಕರೆದುಕೊಂಡು ಬರಲು ರೈಲು ಟಿಕೆಟ್ಗಾಗಿ ₹ 15 ಸಾವಿರ ಕಳಿಸುವಂತೆ ಹೇಳಿದ್ದ. ಅದರಂತೆ ಆನ್ಲೈನ್ನಲ್ಲಿ ಶ್ಯಾಮ ಸುಂದರ್ ಹಣ ಕಳುಹಿಸಿದ್ದರು.
‘ಆದರೆ, ರೈಲಿನ ಬರುತ್ತಿದ್ದ ವೇಳೆ ಟಿಕೆಟ್ ಇದ್ದ ಬ್ಯಾಗ್ ಕಳೆದುಕೊಂಡಿದ್ದು, ಟಿ.ಸಿ (ಟಿಕೆಟ್ ಪರಿಶೀಲಕರು) ಕೈಗೆ ಸಿಕ್ಕಿಬಿದ್ದಿದ್ದೇವೆ. ಮತ್ತೆ ಟಿಕೆಟ್ ಪಡೆದುಕೊಳ್ಳಲು ಮತ್ತು ದಂಡ ಕಟ್ಟಲು ಹಣ ಪಡೆದು ಕೊಂಡಿದ್ದಾನೆ. ಆದರೆ, ನಂತರ ಸಂಪರ್ಕಕ್ಕೆ ಸಿಕ್ಕಿಲ್ಲ’ ಎಂದು ದೂರಿನಲ್ಲಿ ಅವರು ತಿಳಿಸಿದ್ದಾರೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.