ಬೆಂಗಳೂರು: ಬೆನ್ಜ್ ಕಾರು ತಯಾರಿಕಾ ಕಂಪನಿಯಲ್ಲಿ ಕೆಲಸ ಕೊಡಿಸುವುದಾಗಿ ಹೇಳಿ ಎಂಜಿನಿಯರಿಂಗ್ ಪದವೀಧರರಿಂದ ₹10 ಲಕ್ಷ ಪಡೆದು ವಂಚಿಸಲಾಗಿದ್ದು, ಈ ಸಂಬಂಧ ವೈಟ್ಫೀಲ್ಡ್ ವಿಭಾಗದ ಸೈಬರ್ ಕ್ರೈಂ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
‘ವಂಚನೆಗೀಡಾಗಿರುವ ಕೆ.ಆರ್.ಪುರದ ಸುಕುಮಾರ್ ರೆಡ್ಡಿ ಮತ್ತು ಹರ್ಷವರ್ಧನ್ ಎಂಬುವರು ದೂರು ನೀಡಿದ್ದಾರೆ. ಆರೋಪಿಗಳಾದ ಪ್ರಭುದೇವ್, ಮಹೇಶ್ ಕುಮಾರ್, ದೀಪಕ್ ಹಾಗೂ ಕಿರಣ್ ಕುಮಾರ್ ಎಂಬುವರ ವಿರುದ್ಧ ಎಫ್ಐಆರ್ ದಾಖಲಿಸಿಕೊಳ್ಳಲಾಗಿದೆ’ ಎಂದು ಪೊಲೀಸರು ಹೇಳಿದರು.
‘ಬಿ.ಟೆಕ್ ಮುಗಿಸಿದ್ದ ಸುಕುಮಾರ್ ರೆಡ್ಡಿ ಮತ್ತು ಹರ್ಷವರ್ಧನ್, ಕೆಲಸಕ್ಕಾಗಿ ಜಾಲತಾಣವೊಂದರಲ್ಲಿ ಸ್ವ–ವಿವರ ಅಪ್ಲೋಡ್ ಮಾಡಿದ್ದರು. ಅದನ್ನು ತಿಳಿದುಕೊಂಡು ಅವರಿಬ್ಬರನ್ನು ಸಂಪರ್ಕಿಸಿದ್ದ ಆರೋಪಿಗಳು, ‘ಬೆನ್ಜ್ ಕಾರು ತಯಾರಿಕಾ ಕಂಪನಿಯಲ್ಲಿ ಕೆಲಸ ಕೊಡಿಸುತ್ತೇವೆ. ಅದಕ್ಕಾಗಿ ಠೇವಣಿ ನೀಡಬೇಕು’ ಎಂದಿದ್ದರು.’
‘ಆರೋಪಿಗಳ ಮಾತು ನಂಬಿದ್ದ ದೂರುದಾರರು, ತಲಾ ₹5 ಲಕ್ಷ ಠೇವಣಿ ನೀಡಿದ್ದರು. ಹಣ ಪಡೆದ ಆರೋಪಿಗಳು ಮೊಬೈಲ್ ಸ್ವಿಚ್ ಆಫ್ ಮಾಡಿಕೊಂಡು ನಾಪತ್ತೆಯಾಗಿದ್ದಾರೆ’ ಎಂದೂ ಪೊಲೀಸರು ವಿವರಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.