ADVERTISEMENT

ಪ್ರತಿ ಕೃತಿಯಲ್ಲೂ ಹೊಸತನಕ್ಕೆ ಯತ್ನ: ಚೇತನ್‌ ಭಗತ್‌

ಬೆಂಗಳೂರು ಸಾಹಿತ್ಯ ಉತ್ಸವ

ಸಚ್ಚಿದಾನಂದ ಕುರಗುಂದ
Published 18 ಡಿಸೆಂಬರ್ 2021, 20:34 IST
Last Updated 18 ಡಿಸೆಂಬರ್ 2021, 20:34 IST
ಚೇತನ್‌ ಭಗತ್‌
ಚೇತನ್‌ ಭಗತ್‌   

ಬೆಂಗಳೂರು: ‘ಪ್ರತಿ ಬಾರಿ ಬರೆಯುವಾಗ ಮೊದಲ ಕೃತಿ ಬರೆಯುತ್ತಿದ್ದೇನೆ ಎಂದೇ ಭಾವಿಸಿಕೊಳ್ಳುತ್ತೇನೆ. ಬದಲಾಗುತ್ತಿರುವ ಕಾಲಘಟಕ್ಕೆ ತಕ್ಕಂತೆ ಅಧ್ಯಯನ ನಡೆಸಿದಾಗ ಮಾತ್ರ ಹೊಸತನದ ಕೃತಿಗಳನ್ನು ರಚಿಸಲು ಸಾಧ್ಯ...’

ಬೆಂಗಳೂರು ಸಾಹಿತ್ಯ ಉತ್ಸವದ ಮೊದಲ ದಿನವಾದ ಶನಿವಾರ ಕೃತಿಗಳ ರಚನೆ ಮತ್ತು ವ್ಯಕ್ತಿತ್ವ ಕುರಿತು ತಮ್ಮದೇ ಆದ ಶೈಲಿಯಲ್ಲಿ ಅನುಭವಗಳನ್ನು ಹಂಚಿಕೊಂಡ ಲೇಖಕ ಚೇತನ್‌ ಭಗತ್‌ ಅವರು, ‘ಬರೆಯುವುದು ಸುಲಭದ ಕೆಲಸ ಅಲ್ಲ. ಆದರೆ, ಬರವಣಿಗೆಯಿಂದಲೇ ಹೆಚ್ಚು ಜನರನ್ನು ತಲುಪಲು ನನಗೆ ಸಾಧ್ಯವಾಗಿದೆ’ ಎಂದು ವಿವರಿಸಿದರು.

ಯುವಕರು ನಿಮ್ಮ ಕೃತಿಗಳನ್ನು ಏಕೆ ಹೆಚ್ಚು ಇಷ್ಟಪಡುತ್ತಾರೆ ಎನ್ನುವ ಪ್ರಶ್ನೆಗೆ ಉತ್ತರಿಸಿದ ಅವರು, ‘ನಾನು ಯುವಕನಿದ್ದೇನೆ. ಹೀಗಾಗಿ, ಇಷ್ಟಪಡುತ್ತಾರೆ. ಯುವ ಸಮುದಾಯಕ್ಕೆ ಸಂಬಂಧಿಸಿದ ವಿದ್ಯಮಾನಗಳನ್ನು ತಿಳಿದುಕೊಂಡು ಪುಸ್ತಕಗಳಲ್ಲಿ ಉಲ್ಲೇಖಿಸುತ್ತೇನೆ. ಆಧುನಿಕ ತಂತ್ರಜ್ಞಾನದ ವಿಷಯಗಳನ್ನು ಸಹ ಬಳಸಿಕೊಳ್ಳುತ್ತೇನೆ. ಬದಲಾವಣೆಗಳನ್ನು ಗಮನದಲ್ಲಿರಿಸಿಕೊಂಡು ಯುವ ಮನಸ್ಸುಗಳನ್ನು ತಲುಪುವ ಪ್ರಯತ್ನ ಮಾಡುತ್ತೇನೆ’ ಎಂದು ವಿವರಿಸಿದರು.

ADVERTISEMENT

‘ಎಲ್ಲರ ಗಮನಸೆಳೆಯುವ ಪ್ರಯತ್ನ ಮಾಡುವುದೇ ಇಂದು ಪ್ರಾಮುಖ್ಯತೆ ಪಡೆಯುತ್ತಿದೆ. ಇದಕ್ಕೆ ಸಾಮಾಜಿಕ ಮಾಧ್ಯಮಗಳು ವೇದಿಕೆಯಾಗಿವೆ. ಪುಸ್ತಕಗಳು ಸಹ ಗಮನಸೆಳೆಯುವಂತಾಗಬೇಕು. ಉತ್ತಮ ಪುಸ್ತಕಗಳು ಹೊಸ ಕಲ್ಪನಾ ಲೋಕಕ್ಕೆ ಕೊಂಡೊಯ್ಯುತ್ತವೆ’ ಎಂದು ಹೇಳಿದರು.

‘ಪುಸ್ತಕಗಳು ಎಂದಿಗೂ ನಶಿಸಲು ಸಾಧ್ಯವಿಲ್ಲ. ಪುಸ್ತಕಗಳ ಸ್ಥಾನವನ್ನು ಯಾವುದೇ ರೀತಿಯ ಅತ್ಯಾಧುನಿಕ ಡಿಜಿಟಲ್‌ ಸಾಧನಗಳು ಭರ್ತಿ ಮಾಡಲು ಸಾಧ್ಯವಿಲ್ಲ’ ಎಂದು ಪ್ರತಿಪಾದಿಸಿದರು.

ವ್ಯಕ್ತಿತ್ವ ವಿಕಸನ ಕುರಿತು ಮಾತನಾಡಿದ ಅವರು, ‘ಮೊದಲು ನಿಮ್ಮನ್ನು ನೀವು ಪ್ರೀತಿಸಿಕೊಳ್ಳಿ. ನೀವು ಸಂತೋಷವಾಗಿದ್ದರೆ ಮಾತ್ರ ಇತರರನ್ನು ಸಂತೋಷವಾಗಿರಿಸಲು ಸಾಧ್ಯ. ಇನ್ನೊಬ್ಬರನ್ನು ಓಲೈಸುವುದರಲ್ಲೇ ನಮ್ಮ ಬದುಕು ಕಳೆದುಕೊಳ್ಳುತ್ತಿದ್ದೇವೆಯೇ ಹೊರತು ನಮಗಾಗಿ ಬದುಕುವುದು ಕಡಿಮೆ’ ಎಂದರು.

‘ಪ್ರತಿಯೊಬ್ಬ ವ್ಯಕ್ತಿಗೂ ಯಶಸ್ಸು ಮುಖ್ಯ. ಆದರೆ, ಅದೊಂದೇ ಮುಖ್ಯವಲ್ಲ. ಯಶಸ್ಸಿಗಿಂತ ಸಂತೋಷವಾಗಿರುವುದು ಮುಖ್ಯ’ ಎಂದು ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.