ಬೆಂಗಳೂರು: ‘ಹಾವೇರಿಯಲ್ಲಿ ಶಾಲಾ ಆವರಣದಲ್ಲಿನ ಹೊಂಡಕ್ಕೆ ಬಿದ್ದು ಮೂರು ಮಕ್ಕಳ ದಾರುಣ ಸಾವಿಗೀಡಾಗಿರುವ ಬಗ್ಗೆ ಸರ್ಕಾರ ತನಿಖೆ ನಡೆಸಬೇಕು. ಶಾಲಾ ಆವರಣದಲ್ಲಿ ಯಾವುದೇ ರೀತಿಯ ನಿರ್ಮಾಣ ಕಾಮಗಾರಿ ನಡೆಯುವಾಗ ಸಾಕಷ್ಟು ಮುಂಜಾಗ್ರತಾ ಕ್ರಮಗಳನ್ನು ಕೈಗೊಳ್ಳಬೇಕು’ ಎಂದು ಚೈಲ್ಡ್ ರೈಟ್ಸ್ ಟ್ರಸ್ಟ್ ಒತ್ತಾಯಿಸಿದೆ.
‘ಈ ಪ್ರಕರಣ ಗಮನಿಸಿದರೆ, ಯಾವುದೇ ಮುನ್ನೆಚ್ಚರಿಕಾ ಕ್ರಮಗಳಿಲ್ಲದೆ ಕಾಮಗಾರಿ ಕೈಗೊಂಡಿರುವುದು ಕಂಡು ಬರುತ್ತದೆ. ಮಕ್ಕಳು ಶಾಲೆಯತ್ತ ಬರುವುದಿಲ್ಲ ಎಂದು ನಿರ್ಲಕ್ಷ್ಯ ತೋರಿದ್ದರ ಪರಿಣಾಮ ಈ ದುರ್ಘಟನೆ ನಡೆದಿದೆ. ಶಾಲಾ ಆವರಣದಲ್ಲಿ ಸುರಕ್ಷಿತ ವಾತಾವರಣ ಕಲ್ಪಿಸಬೇಕು’ ಎಂದು ಟ್ರಸ್ಟ್ನ ನಿರ್ದೇಶಕ ನಾಗಸಿಂಹ ಜಿ. ರಾವ್ ಅವರು ಪ್ರಾಥಮಿಕ ಮತ್ತು ಪ್ರೌಢಶಿಕ್ಷಣ ಸಚಿವ ಎಸ್. ಸುರೇಶ್ಕುಮಾರ್ ಅವರಿಗೆ ಪತ್ರ ಬರೆದಿದ್ದಾರೆ.
‘ಏಳೆಂಟು ತಿಂಗಳಿಂದ ಶಾಲೆಗಳನ್ನು ಮುಚ್ಚಲಾಗಿದೆ. ಇವುಗಳನ್ನು ತೆರೆಯುವ ಮೊದಲು ಪ್ರತಿಶಾಲೆಯ್ಲಲೂ ‘ಮಕ್ಕಳ ರಕ್ಷಣಾ ನೀತಿ’ ಕಡ್ಡಾಯಗೊಳಿಸಬೇಕು. ಶಾಲೆಯ ಪ್ರತಿಯೊಬ್ಬ ಸಿಬ್ಬಂದಿಯೂ ರಕ್ಷಣಾ ನಿಯಮಗಳನ್ನು ಓದಿ ಅರ್ಥ ಮಾಡಿಕೊಂಡು ನಿಯಮಗಳಿಗೆ ಬದ್ಧರಾಗಿರುತ್ತೇವೆ ಎಂದು ಸಹಿ ಮಾಡಿದ್ದಾರೆ ಎಂಬುದನ್ನುಶಿಕ್ಷಣಾಧಿಕಾರಿಗಳು ಖಚಿತ ಪಡಿಸಿಕೊಳ್ಳಬೇಕು’ ಎಂದು ಅವರು ಹೇಳಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.