ADVERTISEMENT

ಹಣಕ್ಕಾಗಿ ಬಾಲಕನ ಕೊಲೆ: ಆರೋಪಿಗಳ ಕಾಲಿಗೆ ಗುಂಡೇಟು

​ಪ್ರಜಾವಾಣಿ ವಾರ್ತೆ
Published 1 ಆಗಸ್ಟ್ 2025, 14:36 IST
Last Updated 1 ಆಗಸ್ಟ್ 2025, 14:36 IST
ಗುರುಮೂರ್ತಿ
ಗುರುಮೂರ್ತಿ   

ಬೆಂಗಳೂರು: ಅರಕೆರೆಯ ಶಾಂತಿನಿಕೇತನ ಬಡಾವಣೆಯಲ್ಲಿ ಟ್ಯೂಷನ್‌ ಮುಗಿಸಿಕೊಂಡು ಸೈಕಲ್‌ನಲ್ಲಿ ಮನೆಗೆ ತೆರಳುತ್ತಿದ್ದ ಬಾಲಕ ನಿಶ್ಚಿತ್‌ನನ್ನು(13) ಅಪಹರಿಸಿ, ಕೊಲೆ ಮಾಡಿ ಪೆಟ್ರೋಲ್‌ ಸುರಿದು ಬೆಂಕಿ ಹಚ್ಚಿದ್ದ ಆರೋಪಿಗಳ ಕಾಲಿಗೆ ಗುಂಡು ಹಾರಿಸಿ ಬಂಧಿಸುವಲ್ಲಿ ಎಲೆಕ್ಟ್ರಾನಿಕ್‌ ಉಪ ವಿಭಾಗದ ಹುಳಿಮಾವು ಠಾಣೆಯ ಪೊಲೀಸರು ಯಶಸ್ವಿ ಆಗಿದ್ದಾರೆ.

ಬಿಲ್ವಾರದಹಳ್ಳಿಯ ಅರಣ್ಯ ಪ್ರದೇಶದಲ್ಲಿ ಅಡಗಿದ್ದ ಅಪಹರಣಕಾರರಾದ ಬನ್ನೇರುಘಟ್ಟ ರಸ್ತೆಯ ವೀವರ್ಸ್ ಕಾಲೊನಿ ನಿವಾಸಿಗಳಾದ ಗುರುಮೂರ್ತಿ (25) ಹಾಗೂ ಗೋಪಿ (27) ಎಂಬುವವರನ್ನು ಗುರುವಾರ ತಡರಾತ್ರಿ ಬಂಧಿಸಲಾಗಿದೆ. ಕಾರ್ಯಾಚರಣೆ ವೇಳೆ ಪೊಲೀಸರ ಮೇಲೆ ಹಲ್ಲೆಗೆ ಯತ್ನಿಸಿದಾಗ ಆತ್ಮರಕ್ಷಣೆಗಾಗಿ ಆರೋಪಿಗಳ ಕಾಲಿಗೆ ಗುಂಡು ಹೊಡೆದಿದ್ದಾರೆ.

ಶಾಂತಿನಿಕೇತನ ಬಡಾವಣೆಯ ನಿವಾಸಿ, ಸಹಾಯಕ ಪ್ರಾಧ್ಯಾಪಕ ಜೆ.ಸಿ.ಅಚ್ಯುತ್‌ ಅವರ ಪುತ್ರ ನಿಶ್ಚಿತ್‌ ಎಂಟನೇ ತರಗತಿಯಲ್ಲಿ ಓದುತ್ತಿದ್ದ. ಜುಲೈ 30ರಂದು ಸಂಜೆ 5ರ ಸುಮಾರಿಗೆ ಟ್ಯೂಷನ್‌ಗೆ ತೆರಳಿದ್ದ. ರಾತ್ರಿ 8 ಗಂಟೆಯಾದರೂ ಮನೆಗೆ ಮಗ ಬಂದಿರಲಿಲ್ಲ. ಆತಂಕಗೊಂಡ ಪೋಷಕರು, ಶಿಕ್ಷಕಿಗೆ ಕರೆ ಮಾಡಿ ವಿಚಾರಿಸಿದ್ದರು. ರಾತ್ರಿ 7.30ರ ಸುಮಾರಿಗೆ ನಿಶ್ಚಿತ್‌ ಹೋಗಿರುವುದಾಗಿ ಶಿಕ್ಷಕಿ ತಿಳಿಸಿದ್ದರು. ಆತಂಕಗೊಂಡ ಪೋಷಕರು ಹಲವು ಕಡೆ ಹುಡುಕಾಟ ನಡೆಸಿದ್ದರು. ಅರಕೆರೆಯ ಫ್ಯಾಮಿಲ್‌ ಪಾರ್ಕ್ ಬಳಿ ಸೈಕಲ್‌ ನಿಂತಿದ್ದು, ಕಂಡುಬಂದಿತ್ತು. ತಕ್ಷಣವೇ ಪೊಲೀಸರಿಗೆ ಮಾಹಿತಿ ನೀಡಿದ್ದರು. ನಾಪತ್ತೆ ಪ್ರಕರಣ ದಾಖಲಿಸಿಕೊಂಡು ಪೊಲೀಸರು ಸಹ ಹುಡುಕಾಟ ಆರಂಭಿಸಿದ್ದರು. ಜುಲೈ 31ರಂದು ಸಂಜೆ 5 ಗಂಟೆಯ ಸುಮಾರಿಗೆ ಬಿಲ್ವಾರದಹಳ್ಳಿಯ ಅರಣ್ಯ ಪ್ರದೇಶದಲ್ಲಿ ಬಂಡೆಯ ಮೇಲೆ ಬಾಲಕನ ಮೃತದೇಹ ಪತ್ತೆಯಾಗಿತ್ತು. ಮೃತದೇಹ ಕಂಡ ಸ್ಥಳೀಯರೊಬ್ಬರು ಪೊಲೀಸರಿಗೆ ಮಾಹಿತಿ ನೀಡಿದ್ದರು.

ADVERTISEMENT

‘ಪ್ರಮುಖ ಆರೋಪಿ ಗುರುಮೂರ್ತಿ ಎಂಬಾತ ಅಚ್ಯುತ್‌ ಅವರ ಬಳಿ ಹೆಚ್ಚುವರಿ ಚಾಲಕನಾಗಿ ಕೆಲಸ ಮಾಡಿಕೊಂಡಿದ್ದ. ಆಗಾಗ ಮನೆಗೆ ಬಂದು ಹೋಗುತ್ತಿದ್ದ ಗುರುಮೂರ್ತಿ, ನಿಶ್ಚಿತ್‌ನನ್ನು ಅಪಹರಿಸಿ ಹಣಕ್ಕೆ ಬೇಡಿಕೆ ಇಡುವ ಸಂಚು ರೂಪಿಸಿದ್ದ. ನಿಶ್ಚಿತ್‌ ತಾಯಿಯನ್ನು ಪರಿಚಯ ಮಾಡಿಕೊಂಡು ಬಾಲಕನಿಗೂ ಹತ್ತಿರವಾಗಿದ್ದ. ಬಾಲಕನ ಕುಟುಂಬದ ಹಿನ್ನೆಲೆಯನ್ನು ತಿಳಿದುಕೊಂಡು ಹಣ ಗಳಿಸಲು ಸಂಚು ರೂಪಿಸಿದ್ದ. ಕೃತ್ಯ ಎಸಗಲು ತನ್ನ ಸ್ನೇಹಿತ ಗೋಪಿಯನ್ನೂ ಬಳಸಿಕೊಂಡಿದ್ದ’ ಎಂದು ಪೊಲೀಸರು ಹೇಳಿದರು.

ಬುಧವಾರ ಟ್ಯೂಷನ್ ಮುಗಿಸಿಕೊಂಡು ಸೈಕಲ್‌ನಲ್ಲಿ ಮನೆಯತ್ತ ಬರುತ್ತಿದ್ದ ನಿಶ್ಚಿತ್‌ನನ್ನು ಆರೋಪಿಗಳು ಮಾತನಾಡಿಸಿದ್ದರು. ಗುರುಮೂರ್ತಿಯ ಪರಿಚಯವಿದ್ದ ಕಾರಣಕ್ಕೆ ಬಾಲಕ ಸಹ ಸೈಕಲ್ ನಿಲ್ಲಿಸಿ ಪ್ರತಿಕ್ರಿಯಿಸಿದ್ದ. ಅಲ್ಲಿಂದ ಬಾಲಕನನ್ನು ಆರೋಪಿಗಳು ಅಪಹರಿಸಿದ್ದರು. ಬಾಲಕನನ್ನು ಬೈಕ್‌ನಲ್ಲಿ ಕರೆದೊಯ್ಯುತ್ತಿರುವ ದೃಶ್ಯವು ಸಿಸಿಟಿವಿ ಕ್ಯಾಮೆರಾದಲ್ಲಿ ಸೆರೆಯಾಗಿದೆ. ನಂತರ, ಬಾಲಕನ ತಂದೆಗೆ ಕರೆ ಮಾಡಿದ್ದ ಆರೋಪಿಗಳು ‘ಮಗನನ್ನು ಜೀವಂತವಾಗಿ ನೋಡುವ ಆಸೆಯಿದ್ದರೆ ₹5 ಲಕ್ಷ ನೀಡಬೇಕು’ ಎಂದು ಬೇಡಿಕೆ ಇಟ್ಟಿದ್ದರು. ಹಣ ನೀಡುವುದಾಗಿ ಪೋಷಕರೂ ಒಪ್ಪಿಕೊಂಡಿದ್ದರು‌. ₹5 ಲಕ್ಷ ಕೊಡಲು ಸಿದ್ಧತೆ ಮಾಡಿಕೊಂಡಿದ್ದರು. ಮತ್ತೊಂದೆಡೆ ಅಪಹರಣಕಾರರ ದೂರವಾಣಿ ಕರೆ ಆಧರಿಸಿ ಪೊಲೀಸರು ತನಿಖೆ ಆರಂಭಿಸಿದ್ದರು. ಆರೋಪಿಗಳಿರುವ ಲೊಕೇಶನ್ ಪತ್ತೆ ಹಚ್ಚಿದ್ದರು. ಪೊಲೀಸರಿಗೆ ಮಾಹಿತಿ ನೀಡಿರುವ ಅನುಮಾನ ಬಂದು, ಬನ್ನೇರುಘಟ್ಟ ಅರಣ್ಯ ಪ್ರದೇಶದಲ್ಲಿ ಬಾಲಕನ ಕತ್ತು ಕೊಯ್ದು ಕೊಲೆ ಮಾಡಿದ್ದರು ಎಂದು ಮೂಲಗಳು ತಿಳಿಸಿವೆ.

ಗೋಪಿ
ನಿಶ್ಚಿತ್‌ 
ಬಾಲಕನ ತಾಯಿಗೆ ವಾಟ್ಸ್‌ಆ್ಯಪ್‌ ಕರೆ ಮಾಡಿದ್ದ ಆರೋಪಿಗಳು ಹಣಕ್ಕೆ ಬೇಡಿಕೆ ಇಟ್ಟಿದ್ದರು. ಸಾಕ್ಷ್ಯನಾಶ ಪಡಿಸುವ ಉದ್ಧೇಶದಿಂದ ಬೆಂಕಿ ಹಾಕಿದ್ದರು.
ಎಂ. ನಾರಾಯಣ್‌ ಡಿಸಿಪಿ ಎಲೆಕ್ಟ್ರಾನಿಕ್‌ ಸಿಟಿ ಉಪ ವಿಭಾಗ

ಪೊಲೀಸರಿಗೆ ಮಾಹಿತಿ ನೀಡಿದ್ದಕ್ಕೆ ಕೊಂದರು

ಬಾಲಕನ ತಂದೆ ಅಪಹರಣದ ಮಾಹಿತಿಯನ್ನು ಪೊಲೀಸರಿಗೆ ನೀಡಿದ್ದರು. ಇದರಿಂದ ಕೋಪಗೊಂಡ ಅಪಹರಣಕಾರರು ಬಾಲಕನನ್ನು ಕೊಂದು ಬಳಿಕ ಸುಟ್ಟು ಹಾಕಿದ್ದಾರೆ ಎಂದು ಗೊತ್ತಾಗಿದೆ. ‘ಬಾಲಕನನ್ನು ಹುಡುಕುವುದಕ್ಕೆ ಪೊಲೀಸರು ನಿರಂತರ ಕಾರ್ಯಾಚರಣೆ ನಡೆಸುತ್ತಿದ್ದರು. ಅತ್ತ ಬಾಲಕನ ಪೋಷಕರು ₹5 ಲಕ್ಷವನ್ನು ಸಿದ್ಧಪಡಿಸಿ ಮಗನನ್ನು ಕರೆದುಕೊಂಡು ಬರಲು ಸಿದ್ಧವಾಗಿದ್ದರು. ಆರೋಪಿಗಳು ಪೊಲೀಸರಿಗೆ ಸಿಕ್ಕಿಹಾಕಿಕೊಳ್ಳುವ ಭಯದಿಂದಲೇ ಬಾಲಕನ ಕೈಕಟ್ಟಿ ಥಳಿಸಿ ಕೊಲೆ ಮಾಡಿದ್ದರು. ಬಳಿಕ ರಸ್ತೆ ಬದಿಯ ಕಲ್ಲು ಬಂಡೆಯ ಮೇಲೆ ಪೆಟ್ರೋಲ್ ಹಾಕಿ ಬೆಂಕಿಯಿಟ್ಟು ಪರಾರಿ ಆಗಿದ್ದರು’ ಎಂಬುದು ಗೊತ್ತಾಗಿದೆ.

ಆರೋಪಿಗೆ ಅಪರಾಧ ಹಿನ್ನೆಲೆ 

ಪ್ರಮುಖ ಆರೋಪಿಗೆ ಅಪರಾಧ ಹಿನ್ನೆಲೆಯಿದೆ. ಈತನ ವಿರುದ್ಧ ಪೋಕ್ಸೊ ಪ್ರಕರಣ ದಾಖಲಾಗಿದೆ. ಗುರುಮೂರ್ತಿಯೇ ಅಪಹರಣಕ್ಕೆ ಸಂಚು ರೂಪಿಸಿದ್ದ. ಈ ಕೃತ್ಯಕ್ಕೆ ಕಾರಣವೇನು ಇನ್ನೂ ಯಾರಾದರೂ ಭಾಗಿಯಾಗಿದ್ದಾರಾ ಎಂಬುದರ ಕುರಿತು ತನಿಖೆ ನಡೆಸುತ್ತಿದ್ದೇವೆ ಎಂದು ಪೊಲೀಸರು ಹೇಳಿದರು. ಕೇವಲ ಹಣಕ್ಕಾಗಿ ಮಾತ್ರ ಬಾಲಕನನ್ನು ಅಪಹರಿಸಲಾಗಿತ್ತೇ ಅಥವಾ ಬೇರೆ ಏನಾದರೂ ಕಾರಣ ಉಂಟೇ ಎಂಬುದರ ಕುರಿತು ಪರಿಶೀಲಿಸಲಾಗುತ್ತಿದೆ ಎಂದು ಪೊಲೀಸರು ತಿಳಿಸಿದರು.

ಚಾಕು ಡ್ಯಾಗರ್‌ನಿಂದ ಪೊಲೀಸರ ಮೇಲೆ ಹಲ್ಲೆ

ಆರೋಪಿಗಳ ಬಂಧನಕ್ಕೆ ಎಲೆಕ್ಟ್ರಾನಿಕ್‌ ಸಿಟಿ ಡಿಸಿಪಿ ನಾಲ್ಕು ತಂಡ ರಚಿಸಿದ್ದರು. ಗುರುವಾರ ರಾತ್ರಿಯೇ ಕಾರ್ಯಾಚರಣೆಗೆ ಇಳಿದ ಪೊಲೀಸ್ ತಂಡಕ್ಕೆ ಬೆಂಗಳೂರು ಗ್ರಾಮಾಂತರ ವ್ಯಾಪ್ತಿಯ ಬನ್ನೇರುಘಟ್ಟ ಪೊಲೀಸ್ ಠಾಣಾ ವ್ಯಾಪ್ತಿಯ ಬಿಲ್ವಾರದಹಳ್ಳಿಯ ಅರಣ್ಯ ಪ್ರದೇಶದಲ್ಲಿ ಆರೋಪಿಗಳು ಅಡಗಿರುವುದು ಗೊತ್ತಾಗಿತ್ತು. ಕಾರ್ಯಾಚರಣೆ ವೇಳೆ ಇನ್‌ಸ್ಪೆಕ್ಟರ್‌ ಬಿ.ಜಿ.ಕುಮಾರಸ್ವಾಮಿ ಹಾಗೂ ಪಿಎಸ್‌ಐ ಅರವಿಂದ ಅವರ ಮೇಲೆ ಚಾಕು ಹಾಗೂ ಡ್ಯಾಗರ್‌ನಿಂದ ದಾಳಿ ನಡೆಸಿದ್ದರು. ಎಚ್ಚೆತ್ತ ಅರವಿಂದ ಕುಮಾರ್ ಅವರು ಗಾಳಿಯಲ್ಲಿ ಎರಡು ಸುತ್ತು ಗುಂಡು ಹಾರಿಸಿದ್ದರು. ಆದರೂ ಶರಣಾಗದೇ ಪರಾರಿಯಾಗಲು ಯತ್ನಿಸಿದರು. ಆರೋಪಿಗಳ ಕಾಲಿಗೆ ಪೊಲೀಸರು ಗುಂಡು ಹಾರಿಸಿ ವಶಕ್ಕೆ ಪಡೆದುಕೊಂಡರು.   ಘಟನೆಯಲ್ಲಿ ಗುರುಮೂರ್ತಿಯ ಎರಡು ಕಾಲುಗಳು ಹಾಗೂ ಗೋಪಾಲಕೃಷ್ಣನ ಒಂದು ಕಾಲಿಗೆ ಗುಂಡು ತಗುಲಿದ್ದು ವಿಕ್ಟೋರಿಯಾ ಆಸ್ಪತ್ರೆಗೆ ರವಾನಿಸಲಾಗಿದೆ. ಗಾಯಗೊಂಡ ಪೊಲೀಸ್ ಅಧಿಕಾರಿಗಳೂ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ ಎಂದು ಪೊಲೀಸರು ಮಾಹಿತಿ ನೀಡಿದರು. ಘಟನಾ ಸ್ಥಳಕ್ಕೆ ಎಲೆಕ್ಟ್ರಾನಿಕ್ ಸಿಟಿ ಉಪ ವಿಭಾಗದ ಡಿಸಿಪಿ ಎಂ. ನಾರಾಯಣ್ ಹಾಗೂ ಬೆಂಗಳೂರು ಗ್ರಾಮಾಂತರ ಜಿಲ್ಲಾ ಎಸ್‌ಪಿ ಸಿ.ಕೆ. ಬಾಬಾ ಭೇಟಿ ನೀಡಿ ಪರಿಶೀಲನೆ ನಡೆಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.