ಬೆಂಗಳೂರು: ಮೂಳೆಯ ಕ್ಯಾನ್ಸರ್ ವಿರುದ್ಧ ಒಂದು ವರ್ಷದಿಂದ ಹೋರಾಡುತ್ತಲೇ ನಾಗರಬಾವಿಯ ಆರ್ಯನ್ ಪ್ರೆಸಿಡೆನ್ಸಿ ಶಾಲೆಯ ಚಿರಂತನ್ ಹೊನ್ನಾಪುರ, ಹತ್ತನೇ ತರಗತಿಯ ಐಸಿಎಸ್ಇ ಬೋರ್ಡ್ ಪರೀಕ್ಷೆಯಲ್ಲಿ ಶೇಕಡ 92 ಅಂಕಗಳನ್ನು ಪಡೆದು ಅತ್ಯುನ್ನತ ಶ್ರೇಣಿಯಲ್ಲಿ ಉತ್ತೀರ್ಣನಾಗಿದ್ದಾನೆ.
9ನೇ ತರಗತಿಯಲ್ಲಿ ಓದುತ್ತಿರುವಾಗ ಮೂಳೆಯ ಕ್ಯಾನ್ಸರ್ ಪತ್ತೆಯಾಯ್ತು. ವರ್ಷ ಪೂರ್ತಿ ಶಾಲೆಗೆ ಹೋಗಲಾಗದೆ ಕ್ಯಾನ್ಸರ್ ವಿರುದ್ಧ ಹೋರಾಡಿದ. ಕ್ಯಾನ್ಸರ್ ಪೀಡಿತ ಬಲಗೈ ಮೂಳೆಯನ್ನು ಶಸ್ತ್ರ ಚಿಕಿತ್ಸೆ ಮೂಲಕ ತೆಗೆದು ಹಾಕಲಾಗಿತ್ತು. ಆದಾಗಿಯೂ ಮತ್ತೊಬ್ಬ ವಿದ್ಯಾರ್ಥಿಯ ಸಹಾಯದಿಂದ 9ನೇ ತರಗತಿ ಪರೀಕ್ಷೆಯನ್ನು ಎದುರಿಸಿ ಶೇಕಡ 92 ರಷ್ಟು ಅಂಕಗಳನ್ನು ಪಡೆದಿದ್ದಾನೆ.
9ನೇ ತರಗತಿಯ ಫಲಿತಾಂಶದ ನಂತರ ಕೂಡಲೇ 10ನೇ ತರಗತಿಯ ವಿಶೇಷ ತರಗತಿಗಳು ಪ್ರಾರಂಭವಾಗಿದ್ದವು. ಆದರೆ, ಚಿಕಿತ್ಸೆಗೆ ಆಸ್ಪತ್ರೆಗೆ ದಾಖಲಾಗಬೇಕಾಗಿದ್ದ ಕಾರಣ ಸುಮಾರು ಮೂರು ತಿಂಗಳು ತರಗತಿಗಳಿಗೆ ಹಾಜರಾಗಲು ಸಾಧ್ಯವಾಗಿರಲಿಲ್ಲ.
ಮನೆ ಪಾಠಕ್ಕೆ ಹೋಗದೆ, ಶಾಲೆಯಲ್ಲಿ ಶಿಕ್ಷಕರ ಪಾಠ, ಮಾರ್ಗದರ್ಶನ ಹಾಗೂ ಪ್ರೋತ್ಸಾಹ ಪಡೆದುಕೊಂಡು, ಪರಿಶ್ರಮದಿಂದ ಓದಿಕೊಂಡ. ಸಾಮಾಜಿಕ ಮಾಧ್ಯಮಗಳ ಚಾನೆಲ್ಗಳಲ್ಲಿ ಕಾಲಕಾಲಕ್ಕೆ ಬಿತ್ತರಗೊಳ್ಳುತ್ತಿದ್ದ ಲೈವ್ ಪಾಠಗಳನ್ನು ಕೇಳುತ್ತಿದ್ದ.
‘ಕಾನೂನು ಪದವಿಯನ್ನು ಪಡೆದು ಮುಂದೆ ಯುಪಿಎಸ್ಸಿ ಪರೀಕ್ಷೆ ಬರೆದು ಐಪಿಎಸ್ ಅಧಿಕಾರಿಯಾಗುವ ಆಸೆ ಇದೆ. ಹಾಗಾಗಿ, ಪಿಯುಸಿಯಲ್ಲಿ ವಾಣಿಜ್ಯ ವಿಷಯ ಓದಲು ನಿರ್ಧರಿಸಿದ್ದೇನೆ’ ಎನ್ನುತ್ತಾನೆ ಚಿರಂತನ್.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.