ADVERTISEMENT

ಕಲ್ಯಾಣ ಮಂಟಪ ಬುಕಿಂಗ್ ರದ್ದು: ಶೇ 10ರಷ್ಟು ಕಡಿತ ಮಾತ್ರವೇ ನ್ಯಾಯಸಮ್ಮತ

ಕಲ್ಯಾಣ ಮಂಟಪ ಮುಂಗಡ ಬುಕಿಂಗ್‌ ರದ್ದು ವ್ಯಾಜ್ಯ

​ಪ್ರಜಾವಾಣಿ ವಾರ್ತೆ
Published 7 ಮಾರ್ಚ್ 2022, 16:15 IST
Last Updated 7 ಮಾರ್ಚ್ 2022, 16:15 IST
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ   

ಬೆಂಗಳೂರು: ‘ಕಲ್ಯಾಣ ಮಂಟಪಗಳನ್ನು ಸಮಾರಂಭಗಳಿಗಾಗಿ ಮುಂಗಡ ಬುಕಿಂಗ್‌ ಮಾಡಿದವರು ಕಾರಣಾಂತರಗಳಿಂದ ರದ್ದು ಮಾಡಬೇಕಾದ ಸಂದರ್ಭ ಒದಗಿ ಬಂದರೆ; ಬುಕಿಂಗ್‌ ಮಾಡಿದ ದಿನಾಂಕದಿಂದ 150 ದಿನಗಳ ಒಳಗಾಗಿ ರದ್ದು ಮಾಡಿದಾಗ ಮುಂಗಡ ಹಣದಲ್ಲಿ ಶೇ 10ರಷ್ಟು ಮಾತ್ರವೇ ಕಡಿತಗೊಳಿಸಬೇಕು‘ ಎಂದುನಗರದ ಗ್ರಾಹಕರ ವ್ಯಾಜ್ಯಗಳ ಪರಿಹಾರ ಆಯೋಗ ಅಭಿಪ್ರಾಯಪಟ್ಟಿದೆ.

ಮಾಗಡಿ ರಸ್ತೆ ನಿವಾಸಿ ಎನ್.ಚಂದ್ರಶೇಖರ್ ಎಂಬುವರು ತಮ್ಮ ಪುತ್ರನ ವಿವಾಹಕ್ಕಾಗಿ ವೆಸ್ಟ್ ಆಫ್ ಕಾರ್ಡ್ ರಸ್ತೆಯ ವೆಂಕಟೇಶ್ವರ ಸೇವಾ ಟ್ರಸ್ಟ್‌ನ ಕಲ್ಯಾಣ ಮಂಟಪವನ್ನು2020ರ ಏಪ್ರಿಲ್ 5 ಮತ್ತು 6ಕ್ಕೆ ಕಾಯ್ದಿರಿಸಿದ್ದರು. ಇದಕ್ಕಾಗಿ ₹ 1.47 ಲಕ್ಷ ಮುಂಗಡ ಪಾವತಿ ಮಾಡಿದ್ದರು. ಆದರೆ, ಕೋವಿಡ್‌–19ರ ಕಾರಣದಿಂದ ಮದುವೆ ರದ್ದುಗೊಳಿಸಲು ನಿರ್ಧರಿಸಿ ಮುಂಗಡವಾಗಿ ಪಾವತಿಸಿದ್ದ ₹ 1.47 ಲಕ್ಷ ಹಿಂದಿರುಗಿಸುವಂತೆ ಅವರು ಕೋರಿದ್ದರು.

ಇದರನ್ವಯಕಲ್ಯಾಣ ಮಂಟಪದ ಪದಾಧಿಕಾರಿಗಳು ₹ 1.25 ಲಕ್ಷ ಹಿಂದಿರುಗಿಸಿದ್ದರು. ಉಳಿದ ಶೇ 18ರಷ್ಟು (₹ 22 ಸಾವಿರ) ಹಣವನ್ನು ಸರ್ಕಾರಕ್ಕೆ ತೆರಿಗೆ ಪಾವತಿ ಮಾಡಿರುವುದಾಗಿ ಹೇಳಿದ್ದರು. ಇದನ್ನು ಆಕ್ಷೇಪಿಸಿದ್ದ ದೂರುದಾರರು, ‘ಕಲ್ಯಾಣ ಮಂಟಪ ಕಾಯ್ದಿರಿಸಿದ ಬಳಿಕ ನಾವು ಸಭಾಂಗಣವನ್ನು ಬಳಕೆ ಮಾಡಿಲ್ಲ. ಹಾಗಾಗಿ ತೆರಿಗೆ ಪಾವತಿಸುವ ಅಗತ್ಯವಿಲ್ಲ’ ಎಂದು ಹೇಳಿದ್ದರು. ಆಡಳಿತ ಮಂಡಳಿ ಈ ವಾದವನ್ನು ಒಪ್ಪಿರಲಿಲ್ಲ.

ADVERTISEMENT

ಈ ಸಂಬಂಧ ಚಂದ್ರಶೇಖರ್‌ ಸಲ್ಲಿಸಿದ್ದ ದೂರನ್ನು ಬೆಂಗಳೂರು ನಗರ ಗ್ರಾಹಕರ ವ್ಯಾಜ್ಯಗಳ ಪರಿಹಾರ ಆಯೋಗದ ಅಧ್ಯಕ್ಷ ಕೆ.ಎಸ್.ಬೀಳಗಿ ಮತ್ತು ಸದಸ್ಯೆ ರೇಣುಕಾದೇವಿ ದೇಶಪಾಂಡೆ ಅವರಿದ್ದ ಪೀಠ ವಿಚಾರಣೆ ನಡೆಸಿ, ‘ಕಲ್ಯಾಣ ಮಂಟಪದ ಮಾಲೀಕರು ₹ 22 ಸಾವಿರ ಜಿಎಸ್‌ಟಿ ಪಾವತಿಸಿರುವ ಸಂಬಂಧ ದಾಖಲೆಗಳನ್ನು ಒದಗಿಸಿಲ್ಲ. ಆದ್ದರಿಂದ, ಶೇ 18ರಷ್ಟು ಮೊತ್ತ ಕಡಿತ ಮಾಡಿರುವುದು ನಿಯಮ ಬಾಹಿರ. ಕೇವಲ ಶೇ 10ರಷ್ಟು ಮಾತ್ರವೇ ಕಡಿತ ಮಾಡಬೇಕಿತ್ತು. ಹೀಗಾಗಿ, ಇನ್ನುಳಿದ ₹ 7,700 ಮೊತ್ತವನ್ನು ದೂರುದಾರರಿಗೆ ಹಿಂದಿರುಗಿಸಬೇಕು‘ ಎಂದು ದೂರನ್ನು ಭಾಗಶಃ ಪುರಸ್ಕರಿಸಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.