ADVERTISEMENT

ಗಾಂಧಿ ತಾತನ ಟ್ರೆಡ್‌ಮಿಲ್‌ ನಡಿಗೆ!

ಚಿತ್ರಕಲಾ ಪರಿಷತ್ತಿನಿಂದ ಆಯೋಜಿಸಲಾಗಿದ್ದ ಗಾಂಧಿ–150 ಕಲಾ ಪ್ರದರ್ಶನ

​ಪ್ರಜಾವಾಣಿ ವಾರ್ತೆ
Published 5 ಜನವರಿ 2019, 20:26 IST
Last Updated 5 ಜನವರಿ 2019, 20:26 IST
ಗಾಂಧಿ 150: ಕಲಾ ಪ್ರದರ್ಶನವನ್ನು ನಟ ರಮೇಶ್ ಅರವಿಂದ್ ಕಲಾಕೃತಿಗಳನ್ನು ವೀಕ್ಷಿಸಿದರು. ಎಸ್‌.ಎಂ.ಕೃಷ್ಣ, ಬಿ.ಎಲ್. ಶಂಕರ್ ಇದ್ದಾರೆ -
ಗಾಂಧಿ 150: ಕಲಾ ಪ್ರದರ್ಶನವನ್ನು ನಟ ರಮೇಶ್ ಅರವಿಂದ್ ಕಲಾಕೃತಿಗಳನ್ನು ವೀಕ್ಷಿಸಿದರು. ಎಸ್‌.ಎಂ.ಕೃಷ್ಣ, ಬಿ.ಎಲ್. ಶಂಕರ್ ಇದ್ದಾರೆ -   

ಬೆಂಗಳೂರು: ಯುದ್ಧದ ಟ್ಯಾಂಕರ್‌ ಮೇಲೆಗಾಂಧಿ ತಾತನ ಟ್ರೆಡ್‌ಮಿಲ್‌ ನಡಿಗೆ, ಅವರೊಂದಿಗೆವಾಟ್ಸ್‌ಆ್ಯಪ್‌ ಮೆಸೇಜ್‌ಗಳ ಮೂಲಕಹಿಟ್ಲರ್‌ ಸಂವಾದ, ಧ್ಯಾನಾಸಕ್ತ ಸ್ಥಿತಿಯಲ್ಲಿ ಕುಳಿತ ಬಾಪೂ...

ಹೀಗೆಮಹಾತ್ಮನ ಬದುಕಿನ ವಿವಿಧ ಹಂತಗಳ ಚಿತ್ರಗಳು ಚಿತ್ರಕಲಾ ಪರಿಷತ್ತಿನ ಗೋಡೆಯನ್ನು ಅಲಂಕರಿಸಿವೆ.

ಪರಿಷತ್ತಿನ ವತಿಯಿಂದ ಶನಿವಾರ ಆಯೋಜಿಸಲಾಗಿದ್ದ ಗಾಂಧಿ–150 ಕಲಾ ಪ್ರದರ್ಶನದಲ್ಲಿ ಬಾಪೂವನ್ನು ಇಂದಿನ ಕಾಲದೊಂದಿಗೆ ಸಮೀಕರಿಸಿ ರಚಿಸಿದ ಚಿತ್ರಗಳು ಗಮನಸೆಳೆದವು.

ADVERTISEMENT

‘ಗಾಂಧಿ ತಮ್ಮ ಇಡೀ ಜೀವನವನ್ನು ಸತ್ಯದ ಶೋಧನೆಗಾಗಿಯೇ ಮುಡಿಪಾಗಿಟ್ಟವರು. ಇಂದಿನ ಆಧುನಿಕ ಮಾಧ್ಯಮಗಳ ಮೂಲಕ ಅವರನ್ನು ಯುವಕರಿಗೆ ಪರಿಚಯಿಸುವ ಅಗತ್ಯವಿದೆ’ ಎಂದು ನಟ ರಮೇಶ್‌ ಅರವಿಂದ್‌ ಹೇಳಿದರು.

‘ಮನುಷ್ಯನನ್ನು ಸಂಪೂರ್ಣವಾಗಿ ಹಣವೇ ಆಕ್ರಮಿಸಿಕೊಂಡಿದೆ ಎಂಬುದನ್ನು ಬಿಂಬಿಸುವ ಮೂರು ಕೋತಿಗಳ ಚಿತ್ರಣ ಸೊಗಸಾಗಿದೆ. ಗಾಂಧಿ ಅವರ ಸರಳ ಜೀವನ, ಸತ್ಯ, ಅಹಿಂಸೆ, ತ್ಯಾಗದ ಸಂದೇಶಗಳನ್ನು ಚಿತ್ರಕಲೆಗಳ ಮೂಲಕ ಯುವ ಜನಾಂಗಕ್ಕೆ ಪರಿಚಯಿಸುವ ಪ್ರಯತ್ನವನ್ನು ಕಲಾವಿದರು ಯಶಸ್ವಿಯಾಗಿ ಮಾಡಿದ್ದಾರೆ’ ಎಂದು ಅವರು ಅಭಿಪ್ರಾಯಪಟ್ಟರು. ‘ಗಾಂಧಿ ಒಬ್ಬ ಕಲಾಪ್ರೇಮಿಯಾಗಿದ್ದರು. ಅವರ ಉಪನ್ಯಾಸವನ್ನು ನಾನೂ ಕೇಳಿದ್ದೇನೆ’ ಎಂದು ಚಿತ್ರಕಲಾ ಪರಿಷತ್‌ ಟ್ರಸ್ಟ್‌ನ ಅಧ್ಯಕ್ಷ ಎಸ್‌.ಎಂ.ಕೃಷ್ಣ ಅವರೊಂದಿಗಿನ ಆ ದಿನಗಳನ್ನು ಸ್ಮರಿಸಿದರು.

ಪರಿಷತ್ತಿನ ಅಧ್ಯಕ್ಷ ಬಿ.ಎಲ್‌.ಶಂಕರ್‌ ಮಾತನಾಡಿ,‘32 ಸಾವಿರ ಲೇಖಕರು ಗಾಂಧಿ ಬಗ್ಗೆ ಬರೆದಿದ್ದಾರೆ. ವಿಶ್ವದ 67 ವಿಶ್ವವಿದ್ಯಾಲಯಗಳಲ್ಲಿ ಅವರ ಕುರಿತು ಅಧ್ಯಯನ ಪೀಠಗಳಿವೆ. ಇಂತಹ ಮಹಾತ್ಮನನ್ನು ಸ್ಮರಿಸಲು ಈ ಬಾರಿಯ ಚಿತ್ರಸಂತೆಯನ್ನು ಅವರಿಗೆ ಸಮರ್ಪಿಸಲಾಗಿದೆ’ ಎಂದು ಹೇಳಿದರು.

ಚಿತ್ರಸಂತೆ ಇಂದು

ಚಿತ್ರಕಲಾ ಪರಿಷತ್ತಿನ ಆವರಣ ದಲ್ಲಿ ಜನವರಿ 6ರಂದು (ಭಾನುವಾರ) ಚಿತ್ರಸಂತೆ ನಡೆಯಲಿದೆ.ಮೈಸೂರಿನ ಸಾಂಪ್ರದಾಯಿಕ, ತಂಜಾವೂರು, ರಾಜಸ್ಥಾನಿ, ಮಧುಬನಿ ಶೈಲಿಯ ತೈಲ ಮತ್ತು ಜಲವರ್ಣದ ಕಲಾಕೃತಿಗಳು, ಅಕ್ರಿಲಿಕ್‌ ಹೀಗೆ ಹಲವು ಬಗೆಯ ಕಲಾರಚನೆಗಳನ್ನು ಸಂತೆಯಲ್ಲಿ ಕಾಣಬಹುದು.

ಎಲ್ಲಿ: ಕುಮಾರಕೃಪಾ ರಸ್ತೆಯ ಗಾಂಧಿ ಭವನದಿಂದ ವಿಂಡ್ಸರ್‌ ಮ್ಯಾನರ್‌ ವೃತ್ತ ಹಾಗೂ ಕ್ರೆಸೆಂಟ್‌ ರಸ್ತೆಯ ಕೆಲವು ಭಾಗದಲ್ಲಿ ಸಂತೆ ನಡೆಯಲಿದೆ. ಬೆಳಗಿನ 8ರಿಂದ ರಾತ್ರಿ 8ರವರೆಗೆ ಚಿತ್ರ ಸಂತೆ ನಡೆಯಲಿದೆ.

ಎಲ್ಲಿ ನಡೆಯಲಿದೆ?

ಕುಮಾರಕೃಪಾ ರಸ್ತೆಯ ಗಾಂಧಿ ಭವನದಿಂದ ವಿಂಡ್ಸರ್‌ ಮ್ಯಾನರ್‌ ವೃತ್ತ ಹಾಗೂ ಕ್ರೆಸೆಂಟ್‌ ರಸ್ತೆಯ ಕೆಲವು ಭಾಗದಲ್ಲಿ ಸಂತೆ ನಡೆಯಲಿದೆ.

ವ್ಯವಹಾರ ಹೇಗೆ?

ನಗದು ನೀಡಿ ಕಲಾಕೃತಿಗಳನ್ನು ಖರೀದಿ ಮಾಡಬಹುದು. ನಾಲ್ಕು ಸಂಚಾರಿ ಎಟಿಎಂಗಳ ಇರಲಿದ್ದು, ಅವುಗಳಿಂದಲೂ ಹಣ ಡ್ರಾ ಮಾಡಬಹುದು. ಕೆಲವು ಜನ ಕಲಾವಿದರು ಇ–ಪೇ, ವ್ಯಾಲೆಟ್‌ಗಳ ವ್ಯವಸ್ಥೆ ಮಾಡಿಕೊಂಡಿದ್ದಾರೆ. ಅಂಥ ಮಳಿಗೆಗಳಲ್ಲಿ ಆನ್‌ಲೈನ್‌ ಮೂಲಕ ಹಣ ವರ್ಗಾವಣೆ ಮಾಡಬಹುದು.

ಪಾರ್ಕಿಂಗ್‌ ಎಲ್ಲಿ?

ಸೇವಾದಳ ಆವರಣ, ಕ್ರೆಸೆಂಟ್ ರಸ್ತೆ ಬದಿಯಲ್ಲಿ ವಾಹನ ನಿಲುಗಡೆಗೆ ವ್ಯವಸ್ಥೆ ಮಾಡಲಾಗಿದೆ.

ಸುರಕ್ಷತೆಗೇನು ಕ್ರಮ?

ಸುರಕ್ಷತೆಗಾಗಿ 50 ಸಿ.ಸಿ. ಟಿ.ವಿ.ಕ್ಯಾಮೆರಾಗಳನ್ನು ಅಳವಡಿಸಿಲಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.