ADVERTISEMENT

ಕ್ಲಾಟ್: ಎಸ್‌ಸಿ ಕೆಟಗರಿಯಲ್ಲಿ ಜ್ಞಾನಾಂಕಿತ್‌ಗೆ ಪ್ರಥಮ ರ‍್ಯಾಂಕ್‌

​ಪ್ರಜಾವಾಣಿ ವಾರ್ತೆ
Published 27 ಜೂನ್ 2022, 5:05 IST
Last Updated 27 ಜೂನ್ 2022, 5:05 IST
ಜ್ಞಾನಾಂಕಿತ್‌ ಜೆ.ಎ
ಜ್ಞಾನಾಂಕಿತ್‌ ಜೆ.ಎ   

ಬೆಂಗಳೂರು: ರಾಷ್ಟ್ರೀಯ ಕಾನೂನು ವಿಶ್ವವಿದ್ಯಾಲಯಗಳ ಪ್ರವೇಶಕ್ಕೆ ಪ್ರಸಕ್ತ ಸಾಲಿನಲ್ಲಿ ನಡೆದ 'ಸಾಮಾನ್ಯ ಕಾನೂನು ಪ್ರವೇಶ ಪರೀಕ್ಷೆ’ (ಸಿಎಲ್‌ಎಟಿ–ಕ್ಲಾಟ್)ಯಲ್ಲಿ ಪರಿಶಿಷ್ಟ ಜಾತಿ (ಎಸ್‌ಸಿ) ಕೆಟಗರಿಯಲ್ಲಿ ಮೈಸೂರಿನ ಜ್ಞಾನಾಂಕಿತ್‌ ಜೆ.ಎ ಪ್ರಥಮ ರ‍್ಯಾಂಕ್‌ ಪಡೆದಿದ್ದಾರೆ. ಅವರು ಅಖಿಲ ಭಾರತ ಮಟ್ಟದಲ್ಲಿ 292ನೇ ರ‍್ಯಾಂಕ್‌ ಪಡೆದಿದ್ದಾರೆ.

ಕ್ಲಾಟ್ ಫಲಿತಾಂಶ ಇದೇ 25ರಂದು ಪ್ರಕಟವಾಗಿದೆ. ಜ್ಞಾನಾಂಕಿತ್‌ ಅವರಂತೆ ರಾಜ್ಯದ ಇನ್ನೂ ಕೆಲವು ವಿದ್ಯಾರ್ಥಿಗಳು ಅಖಿಲ ಭಾರತ ಮಟ್ಟದಲ್ಲಿ ಉನ್ನತ ರ‍್ಯಾಂಕ್‌ ಪಡೆದು ರಾಷ್ಟ್ರೀಯ ಕಾನೂನು ವಿಶ್ವವಿದ್ಯಾಲಯಗಳಲ್ಲಿ ಪ್ರವೇಶ ಪಡೆಯಲು ಅರ್ಹರಾಗಿದ್ದಾರೆ.

ಸಂಜನಾ ಎಸ್‌. ರಾವ್‌ 7ನೇ, ಶಿವರಾಮನ್‌ ರಘುರಾಮನ್‌ 12ನೇ, ಔಮಿತಾ ಮಿಶ್ರಾ 14ನೇ, ಪ್ರೇಮ್‌ ವಿನೋದ್‌ 16ನೇ ರ‍್ಯಾಂಕ್‌ ಪಡೆದಿದ್ದಾರೆ.

ADVERTISEMENT

‘ಪ್ರಜಾವಾಣಿ’ಗೆ ಪ್ರತಿಕ್ರಿಯಿಸಿದ ಜ್ಞಾನಾಂಕಿತ್‌, ‘ಒಳ್ಳೆಯ ರ‍್ಯಾಂಕ್‌ ನಿರೀಕ್ಷಿಸಿದ್ದೆ. ಬಹಳ ಖುಷಿ ಆಗಿದೆ. ಅಪ್ಪ ಮಿಲಿಟರಿಯಲ್ಲಿದ್ದರು. ತಾಯಿ ಪ್ರೌಢಶಾಲೆಯಲ್ಲಿ ಶಿಕ್ಷಕಿ. 10ನೇ ತರಗತಿವರೆಗೆ ನಂಜನಗೂಡಿನ ಸಿಟಿಜನ್‌ ಪಬ್ಲಿಕ್‌ ಶಾಲೆಯಲ್ಲಿ ಓದಿದೆ. ಮೈಸೂರಿನಲ್ಲಿರುವ ಡೆಮೊನ್ಟ್ರಾಷನ್‌ ಮಲ್ಟಿಪರ್ಪಸ್‌ ಸ್ಕೂಲ್‌ನಲ್ಲಿ ಪಿಯುಸಿ ಮಾಡಿದೆ. ವೈದ್ಯರಾಗಿರುವ ಮಾವ ‌ಸುರೇಶ್‌ ಅವರು ಕ್ಲಾಟ್‌ ಬರೆಯುವಂತೆ ಪ್ರೋತ್ಸಾಹಿಸಿದರು. ಮುಂದೆ ಸುಪ್ರೀಂ ಕೋರ್ಟ್‌ ವಕೀಲನಾಗಬೇಕು ಎಂದುಕೊಂಡಿದ್ದೇನೆ’ ಎಂದು ಸಂತಸ ಹಂಚಿಕೊಂಡರು.

‘ನನ್ನ ದೊಡ್ಡಮ್ಮನ ಮಗ ಗೌತಮ್‌ ಕೆ.ಆರ್‌. ಸಹ 2020ರಲ್ಲಿ ಪರಿಶಿಷ್ಟ ಜಾತಿ ಕೆಟಗರಿಯಲ್ಲಿ ರ‍್ಯಾಂಕ್‌ ಗಿಟ್ಟಿಸಿಕೊಂಡು ಸದ್ಯ ಜೋಧಪುರ ರಾಷ್ಟ್ರೀಯ ಕಾನೂನು ವಿಶ್ವವಿದ್ಯಾಲಯದಲ್ಲಿ ಓದುತ್ತಿದ್ದಾರೆ. ಅಣ್ಣ ಕಲಿಕೆಗೆ ನೆರವಾಗಿದ್ದರು’ ಎಂದರು.

ದೇಶದಲ್ಲಿರುವ 22 ಕಾನೂನು ವಿಶ್ವವಿದ್ಯಾಲಯಗಳಲ್ಲಿ ಪ್ರವೇಶಕ್ಕೆ ರಾಷ್ಟ್ರೀಯ ಕಾನೂನು ವಿಶ್ವವಿದ್ಯಾಲಯಗಳ ಒಕ್ಕೂಟ ‘ಸಾಮಾನ್ಯ ಕಾನೂನು ಪ್ರವೇಶ ಪರೀಕ್ಷೆ’ ನಡೆಸುತ್ತದೆ. ಈ ವರ್ಷ ಜೂನ್‌ 19ರಂದು ನಡೆದಿದ್ದ ಪರೀಕ್ಷೆಗೆ 60,895 ವಿದ್ಯಾರ್ಥಿಗಳು ನೋಂದಾಯಿಸಿಕೊಂಡಿದ್ದರು. ಈ ಪೈಕಿ, 56,472 ಮಂದಿ ಪರೀಕ್ಷೆ ಬರೆದಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.