ADVERTISEMENT

ಅಂಗಡಿ ಮುಚ್ಚುವ ವಿಚಾರ; ಪೊಲೀಸರಿಂದ ಹಲ್ಲೆ ಆರೋಪ

​ಪ್ರಜಾವಾಣಿ ವಾರ್ತೆ
Published 11 ಫೆಬ್ರುವರಿ 2020, 19:32 IST
Last Updated 11 ಫೆಬ್ರುವರಿ 2020, 19:32 IST

ಬೆಂಗಳೂರು: ಪುಟ್ಟೇನಹಳ್ಳಿ ಠಾಣಾ ವ್ಯಾಪ್ತಿಯಲ್ಲಿ ಸೋಮವಾರ ರಾತ್ರಿ ಅಂಗಡಿ ಮುಚ್ಚುವ ವಿಚಾರವಾಗಿ‌ ಕೆಲಸಗಾರರು ಹಾಗೂ ಕಾನ್‌ಸ್ಟೆಬಲ್‌ಗಳಿಬ್ಬರ ನಡುವೆ ಮಾತಿನ ಚಕಮಕಿ ನಡೆದಿದ್ದು, ಇದೇ ವೇಳೆ ಪೊಲೀಸರು ಕೆಲಸಗಾರರ ಮೇಲೆ ಹಲ್ಲೆ ಮಾಡಿದ್ದಾರೆಂಬ ಆರೋಪ ಕೇಳಿಬಂದಿದೆ.

’ಅಂಗಡಿಗೆ ಭಾನುವಾರ ರಾತ್ರಿ ಬಂದಿದ್ದ ಕಾನ್‌ಸ್ಟೆಬಲ್‌ಗಳು ಹಣ ಕೇಳಿದ್ದರು. ಅದನ್ನು ಕೊಡದಿದ್ದಕ್ಕೆ ಸೋಮವಾರ ರಾತ್ರಿ ಪುನಃ ಅಂಗಡಿ ಬಳಿ ಬಂದು ಮುಚ್ಚುವಂತೆ ಹೆದರಿಸಿದ್ದರು. ಅದನ್ನು ಪ್ರಶ್ನಿಸುತ್ತಿದ್ದಂತೆ ನಮ್ಮ ಮೇಲೆಯೇ ಹಲ್ಲೆ ಮಾಡಿದ್ದಾರೆ’ ಎಂದು ಆರೋಪಿಸಿ ‘ಅಪರಂಜಿ ಬಿರಿಯಾನಿ ಮನೆ’ ಹೋಟೆಲ್ ಕ್ಯಾಷಿಯರ್ ಅಭಿ ಎಂಬುವರು ಡಿಸಿಪಿ ರೋಹಿಣಿ ಸಪಟ್ ಅವರಿಗೆ ದೂರು ನೀಡಿದ್ದಾರೆ.

ಅದನ್ನು ಸ್ವೀಕರಿಸಿರುವ ಡಿಸಿಪಿ, ಘಟನೆ ಬಗ್ಗೆ ತನಿಖೆ ನಡೆಸುವಂತೆ ಸುಬ್ರಹ್ಮಣ್ಯಪುರ ಉಪವಿಭಾಗದ ಎಸಿಪಿ ಅವರಿಗೆ ಸೂಚಿಸಿದ್ದಾರೆ. ಕೆಲಸಗಾರರಿಂದ ಪ್ರತ್ಯೇಕ ದೂರು ಪಡೆದು ತನಿಖೆ ಆರಂಭಿಸಲು ಎಸಿಪಿ ಕ್ರಮ ಕೈಗೊಂಡಿದ್ದಾರೆ. ‘ಘಟನೆ ದೃಶ್ಯಗಳು ಹೋಟೆಲ್‌ನ ಸಿ.ಸಿ.ಟಿ.ವಿ ಕ್ಯಾಮೆರಾದಲ್ಲಿ ಸೆರೆಯಾಗಿವೆ. ಅವುಗಳನ್ನು ದೂರುದಾರರು ಡಿಸಿಪಿಗೆ ನೀಡಿದ್ದಾರೆ’ ಎಂದು ಮೂಲಗಳು ಹೇಳಿವೆ.

ADVERTISEMENT

ಆಗಿದ್ದೇನು?: ‘ಗಸ್ತಿನಲ್ಲಿದ್ದ ಕಾನ್‌ಸ್ಟೆಬಲ್‌ಗಳು ರಾತ್ರಿ 11ರ ಸುಮಾರಿಗೆ ಹೋಟೆಲ್ ಬಳಿ ಹೋಗಿದ್ದರು. ಅದೇ ಸಂದರ್ಭದಲ್ಲಿ ಹೋಟೆಲ್‌ನಲ್ಲಿ ಗ್ರಾಹಕರು ಇದ್ದರು. ಅಂಗಡಿ ಮುಚ್ಚುವಂತೆ ಕಾನ್‌ಸ್ಟೆಬಲ್ ಒತ್ತಾಯಿಸಿದ್ದರು. ಈ ದೃಶ್ಯ ಕ್ಯಾಮೆರಾದಲ್ಲಿ ಸೆರೆಯಾಗಿದೆ’.

‘ಅಂಗಡಿಯಲ್ಲಿ ಗ್ರಾಹಕರಿದ್ದಾರೆ. ಕೆಲ ನಿಮಿಷದ ನಂತರ ಬಂದ್ ಮಾಡುತ್ತೇವೆ’ ಎಂದು ಕ್ಯಾಷಿಯರ್ ಹೇಳಿದ್ದರು. ಅದಕ್ಕೆ ಒಪ್ಪದ ಕಾನ್‌ಸ್ಟೆಬಲ್, ಕೆಲಸಗಾರರನ್ನು ಎಳೆದಾಡಿ ಹಲ್ಲೆ ಮಾಡಿದ್ದರು. ನಂತರ, ಅಂಗಡಿ ಫೋಟೊವನ್ನು ತೆಗದುಕೊಂಡಿದ್ದರು’ ಎಂದು ಗೊತ್ತಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.