ಸಿಎಂ ಸಿದ್ದರಾಮಯ್ಯ
ಬೆಂಗಳೂರು: ‘ಸಮಾಜಮುಖಿ ಕೆಲಸಗಳನ್ನು ಮಾಡುವ ಮೂಲಕ ಬೀರಪ್ಪ ಅವರು ಜೀವನವನ್ನು ಸಾರ್ಥಕ ಮಾಡಿಕೊಂಡಿದ್ದಾರೆ’ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ತಿಳಿಸಿದರು.
ನಗರದಲ್ಲಿ ಶನಿವಾರ ನಡೆದ ‘ಬೀರಪ್ಪ-85’ ಕಾರ್ಯಕ್ರಮದಲ್ಲಿ ‘ಸರಿಕೆ’ ಅಭಿನಂದನಾ ಗ್ರಂಥ ಬಿಡುಗಡೆ ಮಾಡಿ ಅವರು ಮಾತನಾಡಿದರು.
‘ಬಿಟಿಎಸ್ನಲ್ಲಿ ಉದ್ಯೋಗ ಆರಂಭಿಸಿ ಸತತ ಓದು ಮತ್ತು ಸಾಧನೆಯ ಮೂಲಕ ಕೆಎಸ್ಆರ್ಟಿಸಿ ಉಪ ಮುಖ್ಯ ಸಂಚಾರ ವ್ಯವಸ್ಥಾಪಕ ಹುದ್ದೆಯವರೆಗೆ ಏರಿ ನಿವೃತ್ತರಾಗಿರುವ ಬೀರಪ್ಪ ಅವರು ನಾಟಕ, ಸಿನಿಮಾ, ಸಮಾಜ ಸೇವೆಯಲ್ಲಿ ತೊಡಗಿಸಿಕೊಂಡಿದ್ದಾರೆ’ ಎಂದು ಹೇಳಿದರು.
‘ನಾನು ಸ್ವಲ್ಪ ದಿನ ಸಾರಿಗೆ ಮಂತ್ರಿಯಾಗಿದ್ದೆ. ಆಗ ಬೀರಪ್ಪ ಅವರು ಕೋಲಾರ ಡಿಪೊದಲ್ಲಿ ಮ್ಯಾನೇಜರ್ ಆಗಿದ್ದರು. ಅವತ್ತಿನಿಂದ ನಮ್ಮ ನಡುವೆ ಆತ್ಮೀಯತೆ ಬೆಳೆಯಿತು. ಈಗ 86ನೇ ವರ್ಷಕ್ಕೆ ಅವರು ಕಾಲಿರಿಸುತ್ತಿದ್ದರೂ ಸಮಾಜಮುಖಿ ಕೆಲಸಗಳನ್ನು ಮುಂದುವರಿಸಿದ್ದಾರೆ’ ಎಂದು ಶ್ಲಾಘಿಸಿದರು.
ಸಾರಿಗೆ ಸಚಿವ ರಾಮಲಿಂಗಾರೆಡ್ಡಿ ಮಾತನಾಡಿ, ‘ಕೆಎಸ್ಆರ್ಟಿಸಿಯಲ್ಲಿ ಕರ್ತವ್ಯದಲ್ಲಿ ಇರುವಾಗಲೇ ಬೀರಪ್ಪ ಅವರು ಸಮಾಜ ಸೇವೆ ಮಾಡುತ್ತಿದ್ದರು. ಇಂದಿರಾಗಾಂಧಿ ಆಸ್ಪತ್ರೆ, ಕಿದ್ವಾಯಿ ಆಸ್ಪತ್ರೆ, ನಿಮ್ಹಾನ್ಸ್ ಆಸ್ಪತ್ರೆಗಳಿಗೆ ಬರುವವರಿಗೆ ಈಗಲೂ ಉಚಿವಾಗಿ ಊಟ, ತಿಂಡಿ ನೀಡುತ್ತಿದ್ದಾರೆ. ಸೊಸೈಟಿ ಕಟ್ಟಿದರು. ವಸತಿ ನಿಲಯ ನಿರ್ಮಿಸಲು ಕಾರಣರಾದರು. ಕಾಗಿನೆಲೆ ಅಭಿವೃದ್ಧಿಗೆ ಶ್ರಮಿಸಿದರು. ಶಾಲೆ ಜೀರ್ಣೋದ್ಧಾರ ಮಾಡಿದರು. ನಡುವೆ ಸಿನಿಮಾಗಳಲ್ಲಿ, ಧಾರಾವಾಹಿಗಳಲ್ಲಿ ನಟಿಸಿದರು’ ಎಂದು ಹೇಳಿದರು.
ಸಮಾಜ ಕಲ್ಯಾಣ ಸಚಿವ ಎಚ್.ಸಿ. ಮಹದೇವಪ್ಪ, ಬೀರಪ್ಪ–85 ಅಭಿನಂದನಾ ಸಮಿತಿ ಗೌರವ ಅಧ್ಯಕ್ಷ ಎಚ್.ಎಂ. ರೇವಣ್ಣ, ಕನಕಗುರು ಪೀಠ ಬೆಂಗಳೂರು ಶಾಖಾ ಮಠದ ಸಿದ್ಧರಾಮಾನಂದ ಸ್ವಾಮೀಜಿ, ‘ಸರಿಕೆ ಸಂಪಾದಕರಾದ ಲಕ್ಷ್ಮಣ್ ಕೊಡಸೆ, ಸುನಂದಮ್ಮ, ಪ್ರಾಧ್ಯಾಪಕ ಓಂಕಾರ ಕಾಕಡೆ ಭಾಗವಹಿಸಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.