ಬೆಂಗಳೂರು: ‘ಪೊಲೀಸ್ ಇಲಾಖೆಯ ಆಧುನೀಕರಣಕ್ಕಾಗಿ ಬಜೆಟ್ನಲ್ಲಿ ₹100 ಕೋಟಿ ಮೀಸಲಿಡುವಂತೆ ಗೃಹ ಸಚಿವ ಬಸವರಾಜ ಬೊಮ್ಮಾಯಿ ಮನವಿ ಮಾಡಿದ್ದಾರೆ. ಈ ಕುರಿತು ಮುಂದಿನ ಬಜೆಟ್ನಲ್ಲಿ ಗಮನ ಹರಿಸಲಾಗುವುದು’ ಎಂದು ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ತಿಳಿಸಿದರು.
ಮಡಿವಾಳದಲ್ಲಿ ನಿರ್ಮಾಣಗೊಂಡಿರುವ ನ್ಯಾಯ ವಿಜ್ಞಾನ ಪ್ರಯೋಗಾಲಯ ನಿರ್ದೇಶನಾಲಯದ ನೂತನ ಕಟ್ಟಡ ಉದ್ಘಾಟಿಸಿ ಹಾಗೂ ಪೊಲೀಸ್ ಸಮುದಾಯ ಭವನದ ಶಂಕುಸ್ಥಾಪನೆ ನೆರವೇರಿಸಿ ಅವರು ಮಾತನಾಡಿದರು.
‘ಕಾನೂನು ಮತ್ತು ಸುವ್ಯವಸ್ಥೆ ಕಾಪಾಡುವುದು ಎಷ್ಟು ಮುಖ್ಯವೋ? ಅಪರಾಧಗಳನ್ನು ತಡೆಯುವುದು ಹಾಗೂ ತಪ್ಪಿತಸ್ಥರು ಪಾರಾಗದಂತೆ ತನಿಖೆ ನಡೆಸುವುದೂ ಅಷ್ಟೇ ಮುಖ್ಯ. ಸರ್ಕಾರವು ಪೊಲೀಸ್ ಇಲಾಖೆಗೆ ಸುಸಜ್ಜಿತ ಕಟ್ಟಡ ಹಾಗೂ ಅತ್ಯಾಧುನಿಕ ಯಂತ್ರೋಪಕರಣಗಳನ್ನು ಒದಗಿಸುವ ಮೂಲಕ ನ್ಯಾಯ ವ್ಯವಸ್ಥೆಯನ್ನು ಬಲಗೊಳಿಸುತ್ತಿದೆ’ ಎಂದು ಹೇಳಿದರು.
ಗೃಹಸಚಿವ ಬಸವರಾಜ ಬೊಮ್ಮಾಯಿ, ‘ಪೊಲೀಸರ ತನಿಖೆಗೆ ಈ ಪ್ರಯೋಗಾಲಯ ಬಲ ತುಂಬಿದೆ. ಫಿಂಗರ್ ಪ್ರಿಂಟ್ಗೆ (ಬೆರಳು ಮುದ್ರೆ) ಸೀಮಿತಗೊಂಡಿದ್ದ ಪ್ರಯೋಗಾಲಯವು ಎಲ್ಲ ರೀತಿಯ ಆಧುನಿಕ ತಂತ್ರಜ್ಞಾನಗಳೊಂದಿಗೆ ಸಜ್ಜಾಗಿದೆ. ಇದಕ್ಕಾಗಿ ₹20 ಕೋಟಿ ಖರ್ಚಾಗಿದೆ. ಇಲಾಖೆಗಾಗಿ ಬಜೆಟ್ನಲ್ಲಿ ಹೆಚ್ಚಿನ ಹಣ ಮೀಸಲಿಡಲು ಬೇಡಿಕೆ ಇಡಲಾಗಿದೆ’ ಎಂದರು.
‘ಆರೋಪಿಗಳ ಪತ್ತೆಗೆ ಎಫ್ಎಸ್ಎಲ್ ಪ್ರಮುಖ ಪಾತ್ರ ವಹಿಸುತ್ತದೆ. ರಾಜ್ಯದಲ್ಲಿ ಇನ್ನೂ 5 ಪ್ರಯೋಗಾಲಯಗಳನ್ನು ನಿರ್ಮಾಣ ಮಾಡಲಿದ್ದು, ಪ್ರತಿ ಜಿಲ್ಲೆಯಲ್ಲೂ ಒಂದು ಪ್ರಯೋಗಾಲಯ ತೆರೆಯುವ ಚಿಂತನೆ ಇದೆ’ ಎಂದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.