ADVERTISEMENT

ವಿದ್ಯಾರ್ಥಿನಿಯನ್ನು ಬಸ್‌ನಿಂದ ಹೊರದಬ್ಬಿದ ಕಂಡಕ್ಟರ್‌ 

ಉಮೇಶ್‌ ಯಾದವ್‌
Published 18 ನವೆಂಬರ್ 2019, 19:17 IST
Last Updated 18 ನವೆಂಬರ್ 2019, 19:17 IST
ಗಾಯಗೊಂಡಿರುವ ವಿದ್ಯಾರ್ಥಿನಿ ಭೂಮಿಕಾ
ಗಾಯಗೊಂಡಿರುವ ವಿದ್ಯಾರ್ಥಿನಿ ಭೂಮಿಕಾ   

ಬೆಂಗಳೂರು: ಬಸ್‌ ಪಾಸ್ ಇದ್ದುದ್ದರಿಂದ ಟಿಕೆಟ್‌ ತೆಗೆದುಕೊಳ್ಳಲು ನಿರಾಕರಿಸಿದ ವಿದ್ಯಾರ್ಥಿನಿಯನ್ನು ಕಂಡಕ್ಟರ್‌ ಚಲಿಸುವ ಬಸ್ಸಿನಿಂದ ಹೊರಕ್ಕೆ ತಳ್ಳಿದ ಅಮಾನವೀಯ ಘಟನೆ ಇತ್ತೀಚೆಗೆ ನಗರದಲ್ಲಿ ನಡೆದಿದೆ. ಕಂಡಕ್ಟರ್‌ ವರ್ತನೆಯಿಂದ ವಿದ್ಯಾರ್ಥಿನಿ ತೀವ್ರವಾಗಿ ಗಾಯಗೊಂಡಿದ್ದಾರೆ.

ನಗರದ ಜ್ಯೋತಿ ಕೇಂದ್ರಿಯ ವಿದ್ಯಾಲಯದಲ್ಲಿ ಮೊದಲ ಪಿಯುಸಿ ಓದುತ್ತಿರುವ ಕನಕಪುರ ಪಟ್ಟಣದ ಭೂಮಿಕಾ (16) ಈ ತಿಂಗಳ 11ರಂದು ಮಧ್ಯಾಹ್ನ 3 ಗಂಟೆಗೆ ಕಾಲೇಜು ಮುಗಿಸಿಕೊಂಡು ಊರಿಗೆ ಹೋಗಲು ಬಸ್‌ ಹತ್ತಿದಾಗ ಈ ಘಟನೆ ನಡೆದಿದೆ.

‘ನಾನು ಮನೆಗೆ ಹಿಂತಿರುಗಲು ರಾಜ್ಯ ರಸ್ತೆ ಸಾರಿಗೆ ಸಂಸ್ಥೆಯ ಕೆಎ42 ಎಫ್‌– 2217 ಬಸ್‌ ಹತ್ತಿದೆ. ಕಂಡಕ್ಟರ್‌ ಟಿಕೆಟ್‌ ತೆಗೆದುಕೊಳ್ಳಲು ಹೇಳಿದಾಗ ಬಸ್‌ ಪಾಸ್‌ ಇದೆ ಎಂದೆ. ಈ ಬಸ್‌ನಲ್ಲಿ ಬಸ್‌ ಪಾಸ್‌ ನಡೆಯುವುದಿಲ್ಲ ಎಂದರು. ಮುಂದಿನ ನಿಲ್ದಾಣದಲ್ಲಿ ಇಳಿಯುವುದಾಗಿ ಅವರಿಗೆ ಹೇಳಿದೆ. ಇಲ್ಲೇ ಇಳಿಯುವಂತೆ ಕಂಡಕ್ಟರ್‌ ಒತ್ತಾಯಿಸಿದರು. ಅಷ್ಟು ಹೊತ್ತಿಗೆ ಬಸ್‌ ಚಲಿಸಲಾರಂಭಿಸಿತು. ಆದರೂ, ಕಂಡಕ್ಟರ್‌ ನನ್ನನ್ನು ಬಲವಂತವಾಗಿ ಹೊರದಬ್ಬಿದರು’ ಎಂದು ಭೂಮಿಕಾ ‘ಪ್ರಜಾವಾಣಿ’ಗೆ ತಿಳಿಸಿದರು.

ADVERTISEMENT

‘ಬಸ್ಸಿನಿಂದ ಹೊರಗೆ ಬಿದ್ದುದ್ದರಿಂದ ಹಣೆ, ಎಡ ಮಂಡಿಗೆ ಗಾಯಗಳಾಗಿವೆ. ಹಲ್ಲುಗಳು ಮುರಿದಿವೆ. ದಾರಿ ಹೋಕರು ತಕ್ಷಣ ಆಸ್ಪತ್ರೆಗೆ ಕರೆದೊಯ್ದು ಚಿಕಿತ್ಸೆ ಕೊಡಿಸಿದರು’ ಎಂದು ವಿದ್ಯಾರ್ಥಿನಿ ವಿವರಿಸಿದರು. ಚಿಕಿತ್ಸೆ ಬಳಿಕ ಕಂಡಕ್ಟರ್‌ ಶಿವಶಂಕರ್‌ ವಿರುದ್ಧ ಕೋಣನಕುಂಟೆ ಪೊಲೀಸ್‌ ಠಾಣೆಯಲ್ಲಿ ಭೂಮಿಕಾ ದೂರು ಸಲ್ಲಿಸಿದರು.

ಹಾರೋಹಳ್ಳಿ ಡಿಪೊಗೆ ಸೇರಿದ ಕಂಡಕ್ಟರ್‌ ವಿರುದ್ಧ ಪ್ರಕರಣ ದಾಖಲಿಸಲಾಗಿದ್ದು, ವಿಚಾರಣೆಗೆ ಹಾಜರಾಗುವಂತೆ ನೋಟಿಸ್‌ ನೀಡಲಾಗಿದೆ ಎಂದು ಪೊಲೀಸ್‌ ಇನ್‌ಸ್ಪೆಕ್ಟರ್‌ ತಿಳಿಸಿದ್ದಾರೆ.

‘ನನ್ನ ಮಗಳು ಒಳ್ಳೆಯ ಕಾಲೇಜಿನಲ್ಲಿ ಕಲಿಯಬೇಕು ಎಂಬ ಉದ್ದೇಶದಿಂದ ಪ್ರತಿನಿತ್ಯ 100 ಕಿ.ಮೀ ಪ್ರಯಾಣಿಸುತ್ತಿದ್ದಾಳೆ. ರಾಜ್ಯ ಸರ್ಕಾರ ಮಕ್ಕಳ ವಿದ್ಯಾಭ್ಯಾಸಕ್ಕೆ ಅನುಕೂಲವಾಗಲಿ ಎಂಬ ಉದ್ದೇಶದಿಂದ ರಿಯಾಯ್ತಿ ಬಸ್‌ ಪಾಸ್‌ ವಿತರಿಸುತ್ತಿದೆ. ಆದರೆ, ಕಂಡಕ್ಟರ್‌ಗಳು ಟಿಕೆಟ್‌ ಹೆಚ್ಚು ಖರ್ಚಾದರೆ ಕಮಿಷನ್‌ ಬರುತ್ತದೆ ಎನ್ನುವ ದುರಾಸೆಯಿಂದ ಪಾಸ್‌ಗೆ ಮಾನ್ಯತೆ ಇಲ್ಲ ಎಂದು ಹೇಳುತ್ತಾರೆ. ಆಕೆ ಹೊರಗೆ ಬೀಳುತ್ತಿದ್ದಂತೆ ಹಿಂದಿನಿಂದ ಬಿಎಂಟಿಎಸ್‌ ಬಸ್‌ ಬಂದಿದೆ. ಚಾಲಕ ತಕ್ಷಣವೇ ಬ್ರೇಕ್‌ ಹಾಕಿದ್ದರಿಂದ ಯಾವುದೇ ಅಪಾಯವಾಗಿಲ್ಲ. ಕಂಡಕ್ಟರ್‌, ಬಾಲಕಿ ಮೈಮುಟ್ಟಿ ಬಲವಂತವಾಗಿ ಹೊರದಬ್ಬಿದ್ದು ಸರಿಯಾದ ನಡವಳಿಕೆಯಲ್ಲ. ಅವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಬೇಕು’ ಎಂದು ವಿದ್ಯಾರ್ಥಿನಿ ತಾಯಿ ಶಿವರತ್ನ ಆಗ್ರಹಿಸಿದ್ದಾರೆ.

ಆರೋಪಿ ಅಮಾನತು

ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಕಂಡಕ್ಟರ್‌ ಶಿವಶಂಕರ್‌ ಅವರನ್ನು ಸಸ್ಪೆಂಡ್‌ ಮಾಡಿ, ಇಲಾಖಾ ವಿಚಾರಣೆಗೆ ಆದೇಶಿಸಲಾಗಿದೆ ಎಂದು ರಾಜ್ಯ ರಸ್ತೆ ಸಾರಿಗೆ ಸಂಸ್ಥೆಯ ವ್ಯವಸ್ಥಾಪಕ ನಿರ್ದೇಶಕ ಶಿವಯೋಗಿ ಕಳಸದ ತಿಳಿಸಿದರು.

‘ದೂರದ ಊರುಗಳಿಗೆ ಹೋಗುವ ಬಸ್‌ಗಳಲ್ಲಿ ವಿದ್ಯಾರ್ಥಿ ಬಸ್‌ ಪಾಸ್‌ ನಡೆಯುವುದಿಲ್ಲ. ಆದರೂ, ಈ ರೀತಿಯ ನಡವಳಿಕೆಯನ್ನು ಸರಿಯಲ್ಲ. ನಮ್ಮ ಸಿಬ್ಬಂದಿಗೆ ಪ್ರಯಾಣಿಕರ ಜೊತೆ ಸೌಜನ್ಯದಿಂದ ವರ್ತಿಸುವಂತೆ ಹೇಳಲಾಗುತ್ತಿದೆ’ ಎಂದು ಅವರು ಸ್ಪಷ್ಟಪಡಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.