ಬೆಂಗಳೂರು: ‘ಉಚಿತ ವಸತಿ, ನಿವೇಶನ, ಅನ್ನಭಾಗ್ಯ, ಕ್ಷೀರಭಾಗ್ಯದಂತಹ ಹಲವಾರು ಯೋಜನೆಗಳನ್ನು ಆರಂಭಿಸಿದ ಕಾಂಗ್ರೆಸ್ ಪಕ್ಷ ಸದಾ ಬಡವರ, ರೈತರ, ಕಾರ್ಮಿಕರ ಪರವಾಗಿ ದುಡಿಯುತ್ತಿರುವ ಪಕ್ಷ. ಮುಂದೆಯೂ ಕ್ಷೇತ್ರದ ಅಭಿವೃದ್ಧಿಗಾಗಿ ನಿಮ್ಮ ಮಗಳಿಗೆ ಮತ ನೀಡಿ ಬೆಂಬಲಿಸಿ’ ಎಂದು ಕಾಂಗ್ರೆಸ್ ಅಭ್ಯರ್ಥಿ ಎಚ್.ಕುಸುಮಾ ಮನವಿ ಮಾಡಿದರು.
ಆರ್.ಆರ್. ನಗರ ವಿಧಾನಸಭಾ ಕ್ಷೇತ್ರದ ಚನ್ನಸಂದ್ರ, ಬೆಮೆಲ್ ಲೇಔಟ್, ಹಲಗೇವಡೇರಹಳ್ಳಿ, ಐಡಿಯಲ್ ಹೋಮ್ಸ್ ಪ್ರದೇಶಗಳಲ್ಲಿ ಶನಿವಾರ ಮನೆ ಮನೆಗೆ ತೆರಳಿ ಮತಯಾಚನೆ ನಡೆಸಿದರು.
‘ಕ್ಷೇತ್ರದಲ್ಲಿ ಸಮಾನತೆ, ಅಭಿವೃದ್ಧಿ ಕಾಣಲು ಜನ ಬಯಸುತ್ತಿದ್ದಾರೆ. ಅವರು ನನ್ನನ್ನು ಬೆಂಬಲಸುತ್ತಾರೆ ಮೆಂಬ ನಂಬಿಕೆ ಇದೆ’ ಎಂದು ಸುದ್ದಿಗಾರರಿಗೆ ತಿಳಿಸಿದರು.
ಬೆಂಗಳೂರು ಉತ್ತರ ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಎಂ.ರಾಜ್ಕುಮಾರ್, ಕಾಂಗ್ರೆಸ್ ಮುಖಂಡ ಹನುಮಂತರಾಯಪ್ಪ ಚುನಾವಣಾ ಪ್ರಚಾರದ ವೇಳೆ ಜೊತೆಯಲ್ಲಿದ್ದರು.
ಚಂದ್ರಶೇಖರ್ಗೆ ಕಾಂಗ್ರೆಸ್ ಗಾಳ?
ಜೆಡಿಎಸ್ ವರಿಷ್ಠರಾದ ಎಚ್.ಡಿ.ದೇವೇಗೌಡ ಹಾಗೂ ಎಚ್.ಡಿ.ಕುಮಾರಸ್ವಾಮಿ ಅವರ ಆಪ್ತ ಬಳಗದಲ್ಲಿ ಗುರುತಿಸಿಕೊಂಡಿದ್ದ ಬಿ.ಎಚ್.ಚಂದ್ರಶೇಖರ್ ಅವರ ಜೊತೆಕಾಂಗ್ರೆಸ್ ಮುಖಂಡ ಹನುಮಂತರಾಯಪ್ಪ ಹಾಗೂ ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಎಮ್.ರಾಜ್ಕುಮಾರ್ ಶನಿವಾರ ಚರ್ಚೆ ನಡೆಸಿದರು.
ಚಂದ್ರಶೇಖರ್ ಅವರು ರಾಜ್ಯ ಯುವ ಜೆ.ಡಿ.ಎಸ್. ಘಟಕದ ಕಾರ್ಯಾಧ್ಯಕ್ಷ
ರಾಗಿಯೂ ಕಾರ್ಯ ನಿರ್ವಹಿಸಿದ್ದರು.
ಚಂದ್ರಶೇಖರ್ ಹಾಗೂ ಕೆಲವು ಜೆಡಿಎಸ್ ಮುಖಂಡರು ತಮ್ಮ ಬೆಂಬಲಿಗರ ಜೊತೆ ಶೀಘ್ರದಲ್ಲಿ ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್, ವಿಧಾನ ಸಭೆಯ ವಿರೋಧ ಪಕ್ಷ ನಾಯಕ ಸಿದ್ದರಾಮಯ್ಯ, ಸಂಸದ ಡಿ.ಕೆ.ಸುರೇಶ್ ಸಮ್ಮುಖದಲ್ಲಿ ಕಾಂಗ್ರೆಸ್ ಸೇರ್ಪಡೆಯಾಗಲಿದ್ದಾರೆ ಎಂದು ಪಕ್ಷದ ಸ್ಥಳೀಯ ಮುಖಂಡರು ತಿಳಿಸಿದ್ದಾರೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.