ADVERTISEMENT

ಕ್ಷೇತ್ರ ವಿಂಗಡಣೆ ಕರಡು ಪಟ್ಟಿ ಪ್ರಕಟ

ಜಿಲ್ಲಾ, ತಾಲ್ಲೂಕು ಪಂಚಾಯಿತಿ: ಆಕ್ಷೇಪಣೆ ಸಲ್ಲಿಸಲು ಜ.16ರವರೆಗೆ ಅವಕಾಶ

​ಪ್ರಜಾವಾಣಿ ವಾರ್ತೆ
Published 3 ಜನವರಿ 2023, 22:44 IST
Last Updated 3 ಜನವರಿ 2023, 22:44 IST
   

ಬೆಂಗಳೂರು: ಕರ್ನಾಟಕ ಪಂಚಾಯತ್‌ ರಾಜ್‌ ಸೀಮಾ ನಿರ್ಣಯ ಆಯೋಗವು ರಾಜ್ಯದ 31 ಜಿಲ್ಲೆಗಳ ಜಿಲ್ಲಾ ಪಂಚಾಯಿತಿಗಳು ಹಾಗೂ ತಾಲ್ಲೂಕು ಪಂಚಾಯಿತಿಗಳ ಕ್ಷೇತ್ರಗಳ ಪುನರ್‌ ವಿಂಗಡಣೆ ಪ್ರಕ್ರಿಯೆಯ ಮೊದಲ ಹಂತವನ್ನು ಪೂರ್ಣಗೊಳಿಸಿದೆ. ಕ್ಷೇತ್ರಗಳ ಕರಡು ಪಟ್ಟಿಯನ್ನು ಸೋಮವಾರ ಪ್ರಕಟಿಸಿದೆ.

ಪ್ರತಿ ಕ್ಷೇತ್ರ ವ್ಯಾಪ್ತಿಯ ಗ್ರಾಮಗಳ ವಿವರಗಳೊಂದಿಗೆ ಅಧಿಸೂಚನೆ ಹೊರಡಿಸಲಾಗಿದೆ. ಹಿಂದಿನ ಬಾರಿ 30 ಜಿಲ್ಲೆಗಳಿಗೆ ಸೀಮಿತವಾಗಿ ಕ್ಷೇತ್ರ ಪುನರ್‌ ವಿಂಗಡಣೆ ಪಟ್ಟಿ ಪ್ರಕಟಿಸ ಲಾಗಿತ್ತು. ವಿಜಯನಗರ ಜಿಲ್ಲೆ ರಚನೆ ಆಗಿರುವುದರಿಂದ 31 ಜಿಲ್ಲಾ ಪಂಚಾ ಯಿತಿಗಳಿಗೆ ಕ್ಷೇತ್ರ ಪುನರ್ ವಿಂಗಡಣೆ ಮಾಡಲಾಗಿದೆ. ಅವಿಭಜಿತ ಬಳ್ಳಾರಿ ಜಿಲ್ಲಾ ಪಂಚಾಯಿತಿಯಲ್ಲಿ 40 ಕ್ಷೇತ್ರಗಳಿದ್ದವು. ಈಗ ಎರಡೂ ಜಿಲ್ಲೆಗಳಲ್ಲಿ ತಲಾ 28 ಕ್ಷೇತ್ರಗಳನ್ನು ಸೃಜಿಸಲಾಗಿದೆ.

ಬೆಳಗಾವಿ ಜಿಲ್ಲಾ ಪಂಚಾಯಿತಿಯಲ್ಲಿ ಅತ್ಯಧಿಕ 91 ಕ್ಷೇತ್ರಗಳಿವೆ. ತುಮಕೂರು ಜಿಲ್ಲಾ ಪಂಚಾಯಿತಿಯಲ್ಲಿ 57, ಉತ್ತರ ಕನ್ನಡ ಜಿಲ್ಲಾ ಪಂಚಾಯಿತಿಯಲ್ಲಿ 54, ಕಲಬುರ ಜಿಲ್ಲಾ ಪಂಚಾಯಿತಿಯಲ್ಲಿ 48 ಕ್ಷೇತ್ರಗಳಿವೆ. ಕೊಡಗು ಮತ್ತು ಗದಗ ಜಿಲ್ಲಾ ಪಂಚಾಯಿತಿಗಳು ಅತಿ ಕಡಿಮೆ ಸದಸ್ಯ ಸ್ಥಾನಗಳನ್ನು ಹೊಂದಿದ್ದು, ತಲಾ 25 ಕ್ಷೇತ್ರಗಳಿವೆ.

ADVERTISEMENT

ಆಕ್ಷೇಪಣೆ ಸಲ್ಲಿಸಲು 15 ದಿನ: ಈಗ ಪ್ರಕಟಿಸಿರುವ ಕರಡು ಪಟ್ಟಿಯಲ್ಲಿರುವ ಜಿಲ್ಲಾ ಪಂಚಾಯಿತಿ ಮತ್ತು ತಾಲ್ಲೂಕು ಪಂಚಾಯಿತಿ ಕ್ಷೇತ್ರಗಳ ಗಡಿ, ವ್ಯಾಪ್ತಿ ಮತ್ತಿತರ ವಿಚಾರಗಳಿಗೆ ಸಂಬಂಧಿಸಿದಂತೆ ಆಕ್ಷೇಪಣೆಗಳನ್ನು ಸಲ್ಲಿಸಲು ಜ. 16ರ ಸಂಜೆ 5 ಗಂಟೆ ಯವರೆಗೂ ಕಾಲಾವಕಾಶ ನೀಡಲಾಗಿದೆ.

ಆನ್‌ಲೈನ್‌ ಮೂಲಕ, ಖುದ್ದಾಗಿ ಅಥವಾ ಅಂಚೆ ಮೂಲಕ ಕರ್ನಾಟಕ ಪಂಚಾಯತ್‌ ರಾಜ್‌ ಸೀಮಾ ನಿರ್ಣಯ ಆಯೋಗದ ಕಚೇರಿಗೆ ಆಕ್ಷೇಪಣೆ ಸಲ್ಲಿಸಬಹುದು ಎಂದು ಆಯೋಗವು ಅಧಿಸೂಚನೆಯಲ್ಲಿ ತಿಳಿಸಿದೆ.

ಆನ್‌ಲೈನ್‌ ಮೂಲಕ ಆಕ್ಷೇಪಣೆ ಸಲ್ಲಿಸುವವರು https://rdpr.karnataka.gov.in/rdc/public/ ವೆಬ್‌ಸೈಟ್‌ನ ಮುಖಪುಟವನ್ನು ಪ್ರವೇಶಿಸಿ, ಎಡ ಭಾಗದಲ್ಲಿರುವ ‘ಸಾರ್ವಜನಿಕ ಸಲಹೆಗಳು’ ಎಂಬ ಶೀರ್ಷಿಕೆಯ ಮೇಲೆ ಕ್ಲಿಕ್‌ ಮಾಡಿ, ಅಲ್ಲಿ ಆಕ್ಷೇಪಣೆಗಳನ್ನು ದಾಖಲಿಸಬಹುದು ಎಂದು ಆಯೋಗ ಹೇಳಿದೆ.

ಕರ್ನಾಟಕ ಪಂಚಾಯತ್‌ ರಾಜ್‌ ಸೀಮಾ ನಿರ್ಣಯ ಆಯೋಗ, ಮೂರನೇ ಗೇಟ್‌, ಎರಡನೇ ಮಹಡಿ, ಕೊಠಡಿ ಸಂಖ್ಯೆ– 222/ಎ, ಬಹುಮಹಡಿ ಕಟ್ಟಡ, ಅಂಬೇಡ್ಕರ್‌ ವೀದಿ, ಬೆಂಗಳೂರು– 560001 ಈ ವಿಳಾಸಕ್ಕೆ ಖುದ್ದಾಗಿ ಅಥವಾ ಅಂಚೆ ಮೂಲಕ ಆಕ್ಷೇಪಣೆಗಳನ್ನು ಸಲ್ಲಿಸುವುದಕ್ಕೂ ಅವಕಾಶ ನೀಡಲಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.