ADVERTISEMENT

ಹಲಸೂರು ಕೆರೆಗೆ ನಿರಂತರ ಹರಿವ ಕಲ್ಮಶ

ಹಲವು ಕೋಟಿ ವೆಚ್ಚ ಮಾಡಿದ್ದರೂ ಕಾಣದ ಶುಚಿತ್ವ: ಆರೋಪ l ರಾಜಕಾಲುವೆಯಿಂದಲೂ ಕೆರೆ ಸೇರುವ ತ್ಯಾಜ್ಯ

​ಪ್ರಜಾವಾಣಿ ವಾರ್ತೆ
Published 13 ಜುಲೈ 2022, 19:19 IST
Last Updated 13 ಜುಲೈ 2022, 19:19 IST
ಹಲಸೂರು ಕೆರೆಯಲ್ಲಿ ಅಳವಡಿಸಿರುವ ಸೋಲಾರ್‌ ಪ್ಯಾನಲ್‌ ಹಾಳಾಗಿದ್ದು, ತ್ಯಾಜ್ಯ ತುಂಬಿಕೊಂಡಿರುವುದು
ಹಲಸೂರು ಕೆರೆಯಲ್ಲಿ ಅಳವಡಿಸಿರುವ ಸೋಲಾರ್‌ ಪ್ಯಾನಲ್‌ ಹಾಳಾಗಿದ್ದು, ತ್ಯಾಜ್ಯ ತುಂಬಿಕೊಂಡಿರುವುದು   

ಬೆಂಗಳೂರು: ನಗರದ ಪ್ರಸಿದ್ಧ ತಾಣಗಳಲ್ಲಿ ಒಂದಾಗಿರುವ ಹಲಸೂರು ಕೆರೆಯನ್ನು ಹಲವು ವರ್ಷಗಳಿಂದ ಹಲ
ವಾರು ಕೋಟಿಗಳನ್ನು ವೆಚ್ಚ ಮಾಡಿ ಅಭಿವೃದ್ಧಿಪಡಿಸಲಾಗಿದೆ. ಈಗಲೂ ಅಭಿವೃದ್ಧಿ ಕಾಮಗಾರಿಗಳು ನಡೆಯುತ್ತಿವೆ. ಇಷ್ಟಾ
ದರೂ ಕೆರೆಗೆ ಹರಿಯುತ್ತಿರುವ ಕಲ್ಮಶಕ್ಕೆ ತಡೆಯೇ ಇಲ್ಲದಂತಾಗಿದೆ ಎಂದು ಸ್ಥಳೀಯರು ಅಸಮಾಧಾನ
ವ್ಯಕ್ತಪಡಿಸುತ್ತಿದ್ದಾರೆ.

‘ಕೆರೆ ಅಭಿವೃದ್ಧಿ ಅಥವಾ ಅದರ ನಿರ್ವಹಣೆ ಒಬ್ಬರ ಬಳಿ ಇಲ್ಲ. ಮದ್ರಾಸ್‌ ಎಂಜಿನಿಯರಿಂಗ್‌ ಗ್ರೂಪ್‌ ಆ್ಯಂಡ್‌ ಸೆಂಟರ್‌ (ಎಂಇಜಿ), ಬಿಬಿಎಂಪಿ, ಜಲಮಂಡಳಿ ಎಂದೆಲ್ಲ ಒಬ್ಬೊಬ್ಬರು ಒಂದು ರೀತಿಯ ಕೆಲಸ ಮಾಡುತ್ತಿದ್ದಾರೆ. ನಿರ್ವಹಣೆಯಂತೂ ಹೇಳತೀರದಂತಾ
ಗಿದೆ. ಕೆರೆಯಲ್ಲಿರುವ ಪ್ಲಾಸ್ಟಿಕ್‌ ಅನ್ನು ತೆಗೆದು ಏರಿ ಮೇಲೆ ಹಾಕುತ್ತಾರೆ. ಅದನ್ನು ಅಲ್ಲಿಂದ ತೆಗೆದುಕೊಂಡು ಹೋಗುವ ವೇಳೆಗೆ ಅರ್ಧದಷ್ಟು ಮತ್ತೆ ಕೆರೆಗೇಬೀಳುತ್ತಿದೆ’ ಎಂದು ಹಲಸೂರು ನಿವಾಸಿಗಳ ಕ್ಷೇಮಾಭಿವೃದ್ಧಿ ಸಂಘದ ಮೋಹನ್‌ ರಾಜ್‌ ಆರೋಪಿಸಿದರು.

‘ಹಲಸೂರು ಕೆರೆಗೆ ಮೂರು ರಾಜಕಾಲುವೆಯಿಂದ ನೀರು ಬರುತ್ತಿತ್ತು. ಅದರಲ್ಲಿ ಬ್ರಾಡ್‌ವೇ ಕಡೆಯಿಂದ ಬರುತ್ತಿದ್ದ ರಾಜಕಾಲುವೆಯನ್ನು ಮುಚ್ಚಿ, ಬೇರೆಡೆಗೆ ಮಾರ್ಗ ಬದಲಿಸಲಾಗಿದೆ. ಬಾಣಸವಾಡಿ, ಕಮ್ಮನಹಳ್ಳಿ ಹಾಗೂ ಚಿನ್ನಪ್ಪ ಗಾರ್ಡನ್‌ ಕಡೆಯಿಂದ ರಾಜಕಾಲುವೆಗಳಿವೆ. ಇವುಗಳಿಂದಲೇ ಕೆರೆಗೆ ನೀರು ಬರುತ್ತದೆ. ಕೆರೆಗೆ ಬರುವ ಮುನ್ನ ತ್ಯಾಜ್ಯ ಹಳ್ಳದ ಮೂಲಕ ನೀರು ಬರಬೇಕು. ಅಲ್ಲಿ ತ್ಯಾಜ್ಯ ಉಳಿಯಬೇಕು. ಆದರೆ ಆ ಹಳ್ಳ ತುಂಬಿಹೋಗಿದೆ’ ಎಂದರು.

ADVERTISEMENT

‘ಕೆರೆಗಾಗಿಯೇ ಒಂದು ಎಸ್‌ಟಿಪಿ ನಿರ್ಮಾಣವಾಗಿದೆ. ರಾಜಕಾಲುವೆ ಇರುವುದಕ್ಕೂ ಎಸ್‌ಟಿಪಿ ಇರುವುದಕ್ಕೂ ಸಂಬಂಧ ಇಲ್ಲ. ಚರಂಡಿಯಲ್ಲಿ ಬರುವ ಮಳೆ ನೀರು, ಎಂಇಜಿ ಒಳಭಾಗದಿಂದ ಬರುವ ನೀರು ಎಸ್‌ಟಿಪಿ ಮೂಲಕ ಬರುತ್ತಿದೆ. ಆದರೆ ಇದರಿಂದ ಏನು ಉಪಯೋಗವಿಲ್ಲ. ಎರಡು ರಾಜಕಾಲುವೆಗಳಿಂದ ಹೆಚ್ಚು ನೀರು ಬರುತ್ತದೆ. ಅಲ್ಲೇ ಹೆಚ್ಚು ಕಲ್ಮಶ ಇರುವುದು. ಇದಕ್ಕೆ ಎಸ್‌ಟಿಪಿ ಇಲ್ಲ. ಆದ್ದರಿಂದ ಕಲ್ಮಶ ಕೆರೆಯನ್ನೇ ತಲುಪುತ್ತಿದೆ’ ಎಂದರು.

‘ನಾವು ಸ್ಥಳೀಯರೆಲ್ಲ ಸೇರಿಕೊಂಡು ಕಾರ್ಪೊರೇಟ್‌, ಶಾಸಕರ ನೆರವಿನೊಂದಿಗೆ ಕೆರೆಯ ಸ್ವಚ್ಛತೆ ಕಾರ್ಯ ಕೈಗೊಂಡಿದ್ದೆವು. ರಾಜಕಾಲುವೆಯಲ್ಲಿ ಬಿಸಾಡುವ ತ್ಯಾಜ್ಯವೂ ನೇರವಾಗಿ ಕೆರೆ ಪ್ರವೇಶಿಸುತ್ತಿದೆ. ಶೋಲ್ಡರ್‌ ಡ್ರೈನ್‌ಗಳೂ ಸರಿಯಾಗಿಲ್ಲ. ಹೀಗಾಗಿ ಮಳೆ ಹೆಚ್ಚಾಗಿ ಬಂದಾಗ ನೀರು ಹೊರಭಾಗದಲ್ಲೇ ಹರಿಯುತ್ತಿದೆ’ ಎಂದು ನಿವಾಸಿಗಳು ಅಸಮಾಧಾನ ವ್ಯಕ್ತಪಡಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.