ADVERTISEMENT

ಕೊರೊನಾ: ನಿರುದ್ಯೋಗಿಗಳಿಗೆ ಉದ್ಯೋಗ

ಮನೆ ಬಾಗಿಲಿಗೆ ತಾಜಾ ತರಕಾರಿ ವಿಲೇವಾರಿ

​ಪ್ರಜಾವಾಣಿ ವಾರ್ತೆ
Published 6 ಏಪ್ರಿಲ್ 2020, 22:59 IST
Last Updated 6 ಏಪ್ರಿಲ್ 2020, 22:59 IST
ಮನೆ ಬಳಿ ಬಂದ ತರಕಾರಿ ಖರೀದಿಸುತ್ತಿರುವ ಜನರು
ಮನೆ ಬಳಿ ಬಂದ ತರಕಾರಿ ಖರೀದಿಸುತ್ತಿರುವ ಜನರು   

ಬೆಂಗಳೂರು: ಕೊರೊನಾ ಸೋಂಕು ಮತ್ತು ಲಾಕ್‌ಡೌನ್‌ ನಿರುದ್ಯೋಗಿಗಳಾಗಿದ್ದ ಹಲವು ಯುವಕರಿಗೆ ಹೊಸ ಉದ್ಯೋಗ ಅವಕಾಶಗಳನ್ನು ಕಲ್ಪಿಸಿಕೊಡುತ್ತಿದೆ !

ಎಷ್ಟೊಂದು ಮಂದಿ ಉದ್ಯೋಗ ಕಳೆದುಕೊಂಡು ಸಂಕಟಪಡುತ್ತಿರುವ ವೇಳೆ, ಇದೇನಿದು ಹೊಸ ಕಥೆ ಎಂದು ಅಚ್ಚರಿಪಡುತ್ತಿದ್ದೀರಲ್ಲವಾ ? ಅಚ್ಚರಿಯಾದರೂ ನಿಜ.‘

ಅರುಣ್, ಲೋಕೇಶ್ ಮತ್ತು ಇವರ ಸ್ನೇಹಿತರು ಸೇರಿ ಈ ತರಕಾರಿ ವ್ಯಾಪಾರಕ್ಕೆ ಇಳಿದಿದ್ದಾರೆ. ಇವರೆಲ್ಲ ಒಂದೇ ಏರಿಯಾದವರು. ಹೆಚ್ಚೂಕಡಿಮೆ ಒಂದೇ ವಯೋಮಾನದವರು. ಆಟೊ ಓಡಿಸುವುದು ಸೇರಿದಂತೆ ಸಣ್ಣಪುಟ್ಟ ಕೆಲಸ ಮಾಡಿಕೊಂಡಿದ್ದರು. ಈಗ ಕೊರೊನಾ ಲಾಕ್‌ಡೌನ್ ನಂತರ ನಿರುದ್ಯೋಗಿಗಳಾದರು.

ADVERTISEMENT

ಇದೇ ವೇಳೆ ಜನರು ತರಕಾರಿ ಖರೀದಿಗೆ ಪರದಾಡುತ್ತಿದ್ದನ್ನು ಗಮನಿಸಿ ದರು. ‘ಅರೆ, ನಾವೇ ಏಕೆ ಅವರ ಮನೆ ಬಾಗಿಲಿಗೆ ತರಕಾರಿ ತಲುಪಿಸಬಾರದು. ಇದರಿಂದ ಅವರಿಗೂ ಅನುಕೂಲ, ನಮಗೂ ಉದ್ಯೋಗ ಸಿಕ್ಕಂತಾಗುತ್ತದೆ ಎಂದು ಯೋಚಿಸಿದ ಯುವಕರು ಕಾರ್ಯಪ್ರವೃತ್ತರಾದರು.

ತರಕಾರಿ ವ್ಯಾಪಾರಕ್ಕಾಗಿ ತೆರೆದ ವಾಹನವೊಂದನ್ನು ಬಾಡಿಗೆ ಪಡೆದ ಈ ಯುವಕರು, ಮಧ್ಯರಾತ್ರಿ ದಾಸನಪುರದ ಕೃಷಿ ಉತ್ಪನ್ನ ಮಾರುಕಟ್ಟೆಗೆ (ಯಶವಂತಪುರದಿಂದ ತಾತ್ಕಾಲಿಕವಾಗಿ ಅಲ್ಲಿಗೆ ವರ್ಗವಾಗಿದೆ) ತಾಜಾ ತರಕಾರಿ ಖರೀದಿಸಿ ತರುತ್ತಾರೆ. ಮುಂಜಾನೆಯೇ ಅಪಾರ್ಟ್‌ಮೆಂಟ್‌ ಬಳಿ, ಮನೆಗಳು ಹೆಚ್ಚಾಗಿರುವ ಪ್ರದೇಶದಲ್ಲಿಟ್ಟು ವ್ಯಾಪಾರ ಮಾಡುತ್ತಾರೆ.

‘ಸ್ನೇಹಿತರೆಲ್ಲರೂ ಹಣ ಹಾಕಿ ಆರಂಭಿಸಿರುವ ಈ ಹೊಸ ವ್ಯಾಪಾರ ಸದ್ಯಕ್ಕಂತೂ ಕೈ ಹಿಡಿದಿದೆ. ಅಪಾರ್ಟ್‌ಮೆಂಟ್‌, ವಿವಿಧ ಬಡಾವಣೆಗಳಿಗೆ ಹೋಗಿ ಮಾರಾಟ ಮಾಡುತ್ತೇವೆ. ಮೂರ‍್ನಾಲ್ಕು ತಾಸಿನಲ್ಲಿ ಎಲ್ಲ ತರಕಾರಿ ಖಾಲಿಯಾಗುತ್ತದೆ’ ಎನ್ನುತ್ತಾರೆ ಅರುಣ್‌.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.