ಬೆಂಗಳೂರು: ರಾಜ್ಯದಲ್ಲೂ ಕೊರೊನಾ ವೈರಸ್ ಹಬ್ಬುವ ಆತಂಕ ಎದುರಾಗಿರುವ ಹಿನ್ನೆಲೆಯಲ್ಲಿ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯು ಈ ಕುರಿತ ವೈದ್ಯಕೀಯ ಪರೀಕ್ಷೆಗೆ ಸಂಬಂಧಿಸಿದ ಮಾರ್ಗಸೂಚಿಯನ್ನು ಬಿಡುಗಡೆ ಮಾಡಿದೆ.
ರೋಗಿಗಳು ಹಾಗೂ ಸೋಂಕು ತಗುಲಿರುವ ಶಂಕಿತರನ್ನು ಹೇಗೆ ನಿರ್ವಹಣೆ ಮಾಡಬೇಕೆಂದು ವಿಶ್ವ ಆರೋಗ್ಯ ಸಂಸ್ಥೆಯ ಸೂಚನೆ ಅನುಸಾರ ಮಾರ್ಗಸೂಚಿ ಸಿದ್ಧಪಡಿಸಲಾಗಿದೆ. ತಪಾಸಣೆ ಕೇಂದ್ರಗಳು, ಆಸ್ಪತ್ರೆಗಳು, ವಿಶೇಷ ವಾರ್ಡ್, ರಕ್ತದ ಮಾದರಿಗಳ ಸಂಗ್ರಹ ವಿಧಾನ, ಪ್ರಯೋಗಾಲಯ, ವೈದ್ಯರು ಹಾಗೂವೈದ್ಯಕೀಯ ಸಿಬ್ಬಂದಿ ಪಾಲಿಸಬೇಕಾದ ನಿಯಮ ಹಾಗೂ ಮಾನದಂಡವನ್ನು ಸಿದ್ಧಪಡಿಸಿ,ಅಧಿಕಾರಿಗಳು, ವೈದ್ಯಕೀಯ ಶಿಕ್ಷಣ ಇಲಾಖೆ ಹಾಗೂ ವೈದ್ಯರ ಸಂಘಟನೆಗಳಿಗೆ ಕಳುಹಿಸಲಾಗಿದೆ.
ಕೆಂಪೇಗೌಡ ಅಂತರರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ 11,494 ವಿದೇಶ ಪ್ರಯಾಣಿಕರನ್ನು ತಪಾಸಣೆಗೆ ಒಳಪಡಿಸಲಾಗಿದೆ. ಇವರಲ್ಲಿ ಸೋಂಕು ವರದಿಯಾದ ದೇಶಗಳಿಂದ ಒಟ್ಟು 118 ಪ್ರಯಾಣಿಕರು ಬಂದಿದ್ದು, ಅವರಲ್ಲಿ 114 ಶಂಕಿತರು ನಗರದ ವಿವಿಧೆಡೆ ಮನೆಗಳಲ್ಲಿ ನೆಲೆಸಿದ್ದಾರೆ. 93 ಶಂಕಿತರ ರಕ್ತದ ಮಾದರಿಯನ್ನು ಪ್ರಯೋಗಾಲಯಕ್ಕೆ ಕಳುಹಿಸಲಾಗಿದ್ದು, 68 ಮಂದಿಗೆ ಸೋಂಕು ತಗುಲಿಲ್ಲ ಎಂದು ವರದಿ ಬಂದಿದೆ. ಇನ್ನುಳಿದವರ ವರದಿ ಇನ್ನೂ ಬಂದಿಲ್ಲ.
ಮೆಟ್ರೊ ನಿಲ್ದಾಣಗಳಲ್ಲಿ ಜಾಗೃತಿ:ಕೊರೊನಾ ಬಗ್ಗೆ ನಗರದ ಮೆಟ್ರೊ ನಿಲ್ದಾಣಗಳಲ್ಲಿಯೂ ಜಾಗೃತಿ ಮೂಡಿಸಲಾಗುತ್ತಿದೆ. ಅನಾರೋಗ್ಯ ಸಮಸ್ಯೆ ಎದುರಿಸುತ್ತಿರುವವರು ಹಾಗೂ ಈ ಸೋಂಕಿನ ಬಗ್ಗೆ ಮಾಹಿತಿ ಪಡೆದುಕೊಳ್ಳಲು ಬಯಸುವವರು ಆರೋಗ್ಯ ಸಹಾಯವಾಣಿ104ಕ್ಕೆ ಕರೆ ಮಾಡುವಂತೆ ಡಿಜಿಟಲ್ ಫಲಕಗಳ ಮೂಲಕ ಪ್ರಕಟಣೆ ನೀಡಲಾಗುತ್ತಿದೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.