ADVERTISEMENT

ಮಹಿಳೆ ಕೂಡಿಹಾಕಿ ಚಿನ್ನಾಭರಣ ದೋಚಿದ ದಂಪತಿ

​ಪ್ರಜಾವಾಣಿ ವಾರ್ತೆ
Published 30 ಮಾರ್ಚ್ 2023, 20:53 IST
Last Updated 30 ಮಾರ್ಚ್ 2023, 20:53 IST
   

ಬೆಂಗಳೂರು: ಮನೆಯಲ್ಲಿ ಒಂಟಿಯಾಗಿದ್ದ ಮಹಿಳೆಯನ್ನು ಕೊಠಡಿಯಲ್ಲಿ ಕೂಡಿಹಾಕಿ ಚಿನ್ನಾಭರಣ ದೋಚಲಾಗಿದ್ದು, ಈ ಸಂಬಂಧ ಗೋವಿಂದಪುರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

‘ವೀರಣ್ಣನಪಾಳ್ಯ ನಿವಾಸಿಯಾದ ಪಶುವೈದ್ಯ ಡಾ. ಶಾಹೀದ್ ಮನೆಯಲ್ಲಿ ಈ ಕೃತ್ಯ ನಡೆದಿದೆ. ಅವರ ಪತ್ನಿಯನ್ನು ಕೂಡಿಹಾಕಿ 250 ಗ್ರಾಂ ಚಿನ್ನಾಭರಣ ಹಾಗೂ ನಗದು ದೋಚಲಾಗಿದೆ. ಮನೆಯಲ್ಲಿ ಕೆಲಸ ಮಾಡುತ್ತಿದ್ದ ನೇಪಾಳದ ದೀಪಕ್ ಮತ್ತು ಅಂಜಲಿ ದಂಪತಿಯೇ ಕೃತ್ಯ ಎಸಗಿ ಪರಾರಿಯಾಗಿದ್ದು, ಅವರಿಬ್ಬರ ವಿರುದ್ಧ ಪ್ರಕರಣ ದಾಖಲಿಸಿಕೊಂಡು ತನಿಖೆ ಮುಂದುವರಿಸಲಾಗಿದೆ’ ಎಂದು ಪೊಲೀಸರು ಹೇಳಿದರು.

‘ಶಾಹೀದ್ ಅವರು ಪತ್ನಿ ಹಾಗೂ ಮೂವರು ಮಕ್ಕಳ ಜೊತೆ ವಾಸವಿದ್ದರು. ನೇಪಾಳದ ದೀಪಕ್ ದಂಪತಿ ವಾರದ ಹಿಂದೆಯಷ್ಟೇ ಡಾ. ಶಾಹೀದ್ ಮನೆಯಲ್ಲಿ ಕೆಲಸಕ್ಕೆ ಸೇರಿದ್ದರು. ದೀಪಕ್ ಭದ್ರತಾ ಸಿಬ್ಬಂದಿ ಆಗಿದ್ದ. ಅಂಜಲಿ ಮನೆ ಕೆಲಸ ಮಾಡುತ್ತಿದ್ದರು.’

ADVERTISEMENT

‘ಕುಣಿಗಲ್ ಬಳಿ ಕೋಳಿ ಫಾರ್ಮ್‌ ನಡೆಸುತ್ತಿರುವ ಶಾಹೀದ್, ಅದರ ಕೆಲಸಕ್ಕೆಂದು ಬುಧವಾರ ಬೆಳಿಗ್ಗೆ ಮನೆಯಿಂದ ಹೊರ ಹೋಗಿದ್ದರು. ಮಕ್ಕಳು ಶಾಲೆಗೆ ತೆರಳಿದ್ದರು. ಪತ್ನಿ ಮಾತ್ರ ಮನೆಯಲ್ಲಿದ್ದರು. ಅದನ್ನು ಗಮನಿಸಿದ್ದ ದೀಪಕ್–ಅಂಜಲಿ, ಪರಿಚಯಸ್ಥ ಇಬ್ಬರನ್ನು ಮನೆಗೆ ಕರೆಸಿಕೊಂಡಿದ್ದರು’ ಎಂದರು.

‘ನೇಪಾಳದ ನಾಲ್ವರು ಸೇರಿ ಶಾಹೀದ್ ಪತ್ನಿ ಮೇಲೆ ಹಲ್ಲೆ ಮಾಡಿದ್ದರು. ನಂತರ, ಅವರನ್ನು ಕೊಠಡಿಯಲ್ಲಿ ಕೂಡಿಹಾಕಿದ್ದರು. ಮನೆಯಲ್ಲಿಟ್ಟಿದ್ದ ಚಿನ್ನಾಭರಣ ಹಾಗೂ ನಗದು ದೋಚಿಕೊಂಡು ಆರೋಪಿ ಪರಾರಿಯಾಗಿದ್ದಾರೆ. ಕೆಲ ಹೊತ್ತಿನ ನಂತರ ಕೊಠಡಿ
ಯಿಂದ ಹೊರಬಂದ ಪತ್ನಿ, ಸ್ಥಳೀಯರಿಗೆ ವಿಷಯ ತಿಳಿಸಿದ್ದರು’ ಎಂದರು.

‘ನೇಪಾಳ ದಂಪತಿಯ ಕೃತ್ಯ ಮನೆಯಲ್ಲಿದ್ದ ಸಿ.ಸಿ.ಟಿ.ವಿ ಕ್ಯಾಮೆರಾದಲ್ಲಿ ಸೆರೆಯಾಗಿದೆ. ಆರೋಪಿಗಳು ನೇಪಾ
ಳಕ್ಕೆ ಹೋಗಿರುವ ಮಾಹಿತಿ ಇದ್ದು, ಅವರ ಪತ್ತೆಗೆ ತನಿಖೆ ಮುಂದುವರಿಸಲಾಗಿದೆ’ ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.