ADVERTISEMENT

ಬಾಕಿ ಹಣ ಕೇಳಿದ್ದಕ್ಕೆ ಕೊಲೆ:ಬಂಧನ

​ಪ್ರಜಾವಾಣಿ ವಾರ್ತೆ
Published 13 ಜನವರಿ 2021, 20:15 IST
Last Updated 13 ಜನವರಿ 2021, 20:15 IST

ಬೆಂಗಳೂರು: ನಿವೇಶನದ ಬಾಕಿ ಹಣ ಕೇಳಿದ್ದಕ್ಕೆ ರಿಯಲ್ ಎಸ್ಟೇಟ್‌ ಉದ್ಯಮಿಯೊಬ್ಬರನ್ನು ಕೊಲೆ ಮಾಡಿರುವ ಘಟನೆ ಬೇಗೂರು ವ್ಯಾಪ್ತಿಯಲ್ಲಿ ನಡೆದಿದೆ.

ಬೇಗೂರಿನ ವೆಲ್ಲಿಂಗ್ಟನ್‌ ಪ್ಯಾರಡೈಸ್‌ ನಿವಾಸಿ ಮಾಧವ ರೆಡ್ಡಿ ಕೊಲೆಯಾದ ವ್ಯಕ್ತಿ. ಇವರ ನೆರೆಮನೆಯ ಮನೋಹರ್ (30) ಕೊಲೆ ಮಾಡಿರುವ ಆರೋಪಿ.

ಮಾಧವರೆಡ್ಡಿ ಬೇಗೂರಿನಲ್ಲಿ ಬಡಾವಣೆಯೊಂದನ್ನು ನಿರ್ಮಿಸಿ, ಆರೋಪಿ ಮನೋಹರ್ ತಂದೆ ಮುನಿರಾಜು ಎಂಬುವರಿಗೆ ನಿವೇಶನ ಮಾರಾಟ ಮಾಡಿದ್ದರು. ಆದರೆ, ನಿವೇಶನಕ್ಕೆ ಮುನಿರಾಜು ಅವರಿಂದ ಪೂರ್ಣ ಹಣ ಬಂದಿರಲಿಲ್ಲ. ಬಾಕಿ ಹಣ ನೀಡುವಂತೆ ಮಾಧವರೆಡ್ಡಿ ಕೇಳುತ್ತಿದ್ದರೂ ನೆಪಗಳನ್ನು ಹೇಳುತ್ತಾ ಸಮಯ ಕೇಳುತ್ತಿದ್ದರು. ಇದೇ ವಿಚಾರವಾಗಿ ಮನೋಹರ್ ಮತ್ತು ಮಾಧವ ಅವರ ನಡುವೆ ದ್ವೇಷ ಬೆಳೆದಿತ್ತು.

ADVERTISEMENT

‘ಮಂಗಳವಾರ ಸಂಜೆಯೂ ಹಣ ನೀಡುವಂತೆ ಮನೋಹರ್‌ಗೆ ಕೇಳಿದ್ದು, ಇಬ್ಬರ ನಡುವೆ ಜಗಳ ತಾರಕಕ್ಕೇರಿತ್ತು. ತಾಳ್ಮೆ ಕಳೆದುಕೊಂಡಿದ್ದ ಮನೋಹರ್, ಮಾಧವ್ ಅವರ ಕುತ್ತಿಗೆಗೆ ದೊಡ್ಡ ಚಾಕುವಿನಿಂದ ಹಲ್ಲೆ ನಡೆಸಿದ್ದ. ಇದರಿಂದ ಗಂಭೀರ ಗಾಯಗೊಂಡು, ರಕ್ತಸ್ರಾವದಿಂದ ಸ್ಥಳದಲ್ಲೇ ಮಾಧವ್ ಕುಸಿದು ಬಿದ್ದಿದ್ದರು. ಸ್ಥಳೀಯ ಆಸ್ಪತ್ರೆಗೆ ಕರೆದೊಯ್ದುವ ವೇಳೆ ಮೃತಪಟ್ಟರು. ಆರೋಪಿ ಮನೋಹರ್‌ನನ್ನು ಬಂಧಿಸಿ, ಪ್ರಕರಣ ದಾಖಲಿಸಿಕೊಳ್ಳಲಾಗಿದೆ’ ಎಂದು ಪೊಲೀಸ್ ಮೂಲಗಳು ತಿಳಿಸಿವೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.