ಬೆಂಗಳೂರು: ಆಚಾರ್ಯ ಕಾಲೇಜು ರಸ್ತೆಯಲ್ಲಿ ಗಾಂಜಾ ಮಾರುತ್ತಿದ್ದ ಸೂಡಾನ್ ರಾಷ್ಟ್ರದ ಅಹಮದ್ ಮೂಸಾ (26) ಎಂಬಾತನನ್ನು ಬಂಧಿಸಿರುವ ಸೋಲದೇವನಹಳ್ಳಿ ಪೊಲೀಸರು, 480 ಗ್ರಾಂನ ಗಾಂಜಾ ಬೀಜಗಳನ್ನು ಜಪ್ತಿ ಮಾಡಿದ್ದಾರೆ.
‘ಸೂಡಾನ್ನಿಂದ ಗಾಂಜಾ ಬೀಜಗಳನ್ನು ನಗರಕ್ಕೆ ತರುತ್ತಿದ್ದ ಮೂಸಾ, ಅವುಗಳನ್ನು ಪುಡಿ ಮಾಡಿ ಸಣ್ಣ ಸಣ್ಣ ಪೊಟ್ಟಣ ಕಟ್ಟುತ್ತಿದ್ದ. ಬಳಿಕ ₹ 100ಕ್ಕೆ ಒಂದು ಪೊಟ್ಟಣದಂತೆ ಯುವಕರಿಗೆ ಮಾರುತ್ತಿದ್ದ. ನಮ್ಮ ಭಾತ್ಮೀದಾರರು ನೀಡಿದ ಖಚಿತ ಮಾಹಿತಿ ಆಧರಿಸಿ ಜ.22ರಂದು ಮಫ್ತಿಯಲ್ಲಿ ಕಾರ್ಯಾಚರಣೆ ನಡೆಸಿ ಮೂಸಾನನ್ನು ಬಂಧಿಸಿದೆವು’ ಎಂದು ಪೊಲೀಸರು ಹೇಳಿದ್ದಾರೆ.
ಉನ್ನತ ವ್ಯಾಸಂಗದ ಸಲುವಾಗಿ 2011ರಲ್ಲಿ ನಗರಕ್ಕೆ ಬಂದಿದ್ದ ಮೂಸಾ, ಮೊದಲು ಕಮ್ಮನಹಳ್ಳಿಯಲ್ಲಿ ನೆಲೆಸಿದ್ದ. ಆಗಿನಿಂದಲೂ ಡ್ರಗ್ಸ್ ಮಾರಾಟ ದಂಧೆಯಲ್ಲಿ ತೊಡಗಿದ್ದ ಈತ, ತನ್ನ ರಾಷ್ಟ್ರದ ಸ್ನೇಹಿತರೊಂದಿಗೇ ಬಡಿದಾಡಿಕೊಂಡಿದ್ದ. ಈ ಸಂಬಂಧ ಮೂಸಾನ ವಿರುದ್ಧ ಬಾಣಸವಾಡಿ ಹಾಗೂ ಸೋಲದೇವನಹಳ್ಳಿ ಠಾಣೆಗಳಲ್ಲಿ ಪ್ರಕರಣಗಳು ದಾಖಲಾಗಿದ್ದವು.
ಆ ಪ್ರಕರಣಗಳ ವಿಚಾರಣೆ ನಡೆಸುತ್ತಿರುವ ನ್ಯಾಯಾಲಯ, ‘ವಿಚಾರಣೆ ಪೂರ್ಣಗೊಳ್ಳುವವರೆಗೂ ದೇಶ ಬಿಟ್ಟು ಹೋಗುವಂತಿಲ್ಲ’ ಎಂದು ಸೂಚಿಸಿದೆ. ಹೀಗಾಗಿ, ಆರೋಪಿಯು ವೀಸಾ ಅವಧಿ ಮುಗಿದರೂ ನಗರದಲ್ಲೇ ನೆಲೆಯೂರಿದ್ದಾನೆ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.
ಹೂವು, ಕಾಂಡ ಮರಾಟ !
ದೇವನಹಳ್ಳಿ ಸಮೀಪದ ಪ್ರಸನ್ನಹಳ್ಳಿಯಲ್ಲಿ ಸೋಮವಾರ ಮಧ್ಯಾಹ್ನ ಗಾಂಜಾ ಗಿಡದ ಕಾಂಡ ಹಾಗೂ ಹೂವುಗಳನ್ನು ಮಾರಾಟ ಮಾಡುತ್ತಿದ್ದ ಒಡಿಶಾದ ನಿರಂಜನ್ ರಾವೂತ್ (39) ಎಂಬಾತನನ್ನು ಪೊಲೀಸರು ಬಂಧಿಸಿದ್ದಾರೆ.
ದೇವನಹಳ್ಳಿಯಲ್ಲಿ ಶೆಡ್ ಹಾಕಿಕೊಂಡು ವಾಸವಿದ್ದ ನಿರಂಜನ್, ಹೊಸಕೋಟೆಯ ನೂರ್ ಎಂಬಾತನಿಂದ ಗಾಂಜಾ ಸೊಪ್ಪು, ಹೂವು ಹಾಗೂ ಕಾಂಡ ಖರೀದಿಸಿ ತಂದು ಇಲ್ಲಿನ ಯುವಕರಿಗೆ ಮಾರುತ್ತಿದ್ದ. ಈತನಿಂದ 850 ಗ್ರಾಂ ಮಾದಕ ವಸ್ತು ಜಪ್ತಿ ಮಾಡಲಾಗಿದ್ದು, ನೂರ್ ಬಂಧನಕ್ಕೆ ಶೋಧ ನಡೆಯುತ್ತಿದೆ ಎಂದು ಪೊಲೀಸರು ಹೇಳಿದ್ದಾರೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.