ADVERTISEMENT

12 ವಾಹನ ಕಳ್ಳತನ: ಶಿಕ್ಷಕಿ ಸರ ಕದ್ದು ಸಿಕ್ಕಿಬಿದ್ದರು

​ಪ್ರಜಾವಾಣಿ ವಾರ್ತೆ
Published 20 ಜನವರಿ 2023, 23:13 IST
Last Updated 20 ಜನವರಿ 2023, 23:13 IST
ಹನುಮಂತನಗರ ಠಾಣೆ ಪೊಲೀಸರು ಆರೋಪಿಗಳಿಂದ ಜಪ್ತಿ ಮಾಡಿರುವ ದ್ವಿಚಕ್ರ ವಾಹನಗಳು
ಹನುಮಂತನಗರ ಠಾಣೆ ಪೊಲೀಸರು ಆರೋಪಿಗಳಿಂದ ಜಪ್ತಿ ಮಾಡಿರುವ ದ್ವಿಚಕ್ರ ವಾಹನಗಳು   

ಬೆಂಗಳೂರು: ನಗರದ ಹಲವೆಡೆ 12 ದ್ವಿಚಕ್ರ ವಾಹನಗಳನ್ನು ಕದ್ದು ಪರಾರಿಯಾಗಿದ್ದ ಇಬ್ಬರು ಆರೋಪಿ ಗಳು, ಹನುಮಂತನಗರದಲ್ಲಿ ಶಿಕ್ಷಕಿಯೊಬ್ಬರ ಚಿನ್ನದ ಸರ ಕಿತ್ತೊಯ್ದಿದ್ದ ಪ್ರಕರಣದಲ್ಲಿ ಪೊಲೀಸರಿಗೆ ಸಿಕ್ಕಿಬಿದ್ದಿದ್ದಾರೆ.

‘ಹನುಮಂತನಗರ ನಿವಾಸಿಯಾದ 56 ವರ್ಷದ ಶಿಕ್ಷಕಿಯೊಬ್ಬರು, ತಮ್ಮ ಚಿನ್ನದ ಸರ ಕಳುವಾದ ಬಗ್ಗೆ ದೂರು ನೀಡಿದ್ದರು. ತನಿಖೆ ಕೈಗೊಂಡು ಪಂತರಪಾಳ್ಯದ ಸುನೀಲ್‌ಕುಮಾರ್ (37) ಹಾಗೂ ವಿನಾಯಕ್ ಬಡಾವಣೆಯ ಬಿ. ಶ್ರೀನಿವಾಸ್ (25) ಎಂಬುವರನ್ನು ಬಂಧಿಸಲಾಗಿದೆ. ಇವರಿಬ್ಬರು ಚಿನ್ನದ ಸರದ ಜೊತೆ ದ್ವಿಚಕ್ರ ವಾಹನಗಳನ್ನೂ ಕದಿಯುತ್ತಿದ್ದ ಸಂಗತಿ ತನಿಖೆಯಿಂದ ಗೊತ್ತಾಗಿದೆ’ ಎಂದು ಪೊಲೀಸರು ಹೇಳಿದರು.

‘ಬಂಧಿತ ಆರೋಪಿಗಳಿಂದ 27 ಗ್ರಾಂ ತೂಕದ ಚಿನ್ನದ ಸರ, 12 ದ್ವಿಚಕ್ರ ವಾಹನಗಳು ಹಾಗೂ ಜನರನ್ನು ಹೆದರಿಸಲು ಬಳಸುತ್ತಿದ್ದ ಚಾಕು ಜಪ್ತಿ ಮಾಡಲಾಗಿದೆ’ ಎಂದು ತಿಳಿಸಿದರು.

ADVERTISEMENT

‘ದೂರುದಾರ ಶಿಕ್ಷಕಿ, ಜ. 4ರಂದು ದ್ವಿಚಕ್ರ ವಾಹನದಲ್ಲಿ ಹೊರಟಿದ್ದರು. ಐದನೇ ಮುಖ್ಯರಸ್ತೆಯಲ್ಲಿ ಅವರ ವಾಹನ ತಡೆದಿದ್ದ ಆರೋಪಿಗಳು, ಚಾಕು ತೋರಿಸಿ ಕೊಲೆ ಬೆದರಿಕೆಯೊಡ್ಡಿದ್ದರು. ನಂತರ, ಚಿನ್ನದ ಸರ ಕಿತ್ತುಕೊಂಡು ಸ್ಥಳದಿಂದ ಪರಾರಿಯಾಗಿದ್ದರು.’

‘ತನಿಖೆ ಕೈಗೊಂಡು ಆರೋಪಿ ಗಳನ್ನು ಬಂಧಿಸಲಾಗಿದೆ. ವಾಹನ ಕದ್ದು ಪರಾರಿಯಾಗಿದ್ದ ಆರೋಪಿಗಳ ಬಗ್ಗೆ ಯಾವುದೇ ಸುಳಿವು ಇರಲಿಲ್ಲ. ಚಿನ್ನದ ಸರ ಕಳ್ಳತನ ಪ್ರಕರಣದಲ್ಲಿ ಆರೋಪಿಗಳನ್ನು ಬಂಧಿಸಿದಾಗಲೇ, ವಾಹನ ಕಳ್ಳತನ ಪ್ರಕರಣಗಳು ಪತ್ತೆಯಾದವು. ಕೆಂಗೇರಿ, ಚನ್ನಮ್ಮನಕೆರೆ ಅಚ್ಚುಕಟ್ಟು, ಕೆ.ಜಿ.ನಗರ, ಗಿರಿನಗರ, ಬನಶಂಕರಿ ಹಾಗೂ ಹಲಸೂರು ಗೇಟ್‌ ಠಾಣೆ ವ್ಯಾಪ್ತಿಯಲ್ಲಿ ದ್ವಿಚಕ್ರ ವಾಹನ ಕದ್ದಿರುವುದಾಗಿ ಆರೋಪಿಗಳು ತಪ್ಪೊಪ್ಪಿ ಕೊಂಡಿದ್ದಾರೆ’ ಎಂದು ಪೊಲೀಸರು ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.