ADVERTISEMENT

ಬಿಲ್ಡರ್, ಇನ್‌ಸ್ಪೆಕ್ಟರ್ ವಿರುದ್ಧ ಎಫ್‌ಐಆರ್

ನಕಲಿ ದಾಖಲೆ ಸೃಷ್ಟಿಸಿ ಜಾಗ ಕಬಳಿಸಲು ಯತ್ನ ಆರೋಪ

​ಪ್ರಜಾವಾಣಿ ವಾರ್ತೆ
Published 5 ಆಗಸ್ಟ್ 2019, 19:34 IST
Last Updated 5 ಆಗಸ್ಟ್ 2019, 19:34 IST
ಶ್ರೀನಿವಾಸ್
ಶ್ರೀನಿವಾಸ್   

ಬೆಂಗಳೂರು: ದೊಡ್ಡನೆಕ್ಕುಂದಿ ಕೈಗಾರಿಕಾ ಪ್ರದೇಶದ ಜಾಗವೊಂದನ್ನು ನಕಲಿ ದಾಖಲೆ ಸೃಷ್ಟಿಸಿ ಕಬಳಿಸಲು ಯತ್ನಿಸಿದ ಆರೋಪದಡಿ ಬಿಲ್ಡರ್ ಹಾಗೂ ಇನ್‌ಸ್ಪೆಕ್ಟರ್ ಸೇರಿದಂತೆ ಆರು ಮಂದಿ ವಿರುದ್ಧ ಮಹದೇವಪುರ ಠಾಣೆಯಲ್ಲಿ ಎಫ್‌ಐಆರ್‌ ದಾಖಲಾಗಿದೆ.

ದೂರವಾಣಿ ನಗರದ ನಿವಾಸಿ ಖಮರುಲ್ಲಾ ಖಾನ್ ಎಂಬುವರು ಹೂಡಿದ್ದ ಖಾಸಗಿ ಮೊಕದ್ದಮೆ ವಿಚಾರಣೆ ನಡೆಸಿ 43ನೇ ಎಸಿಎಂಎಂ ನ್ಯಾಯಾಲಯ ನೀಡಿದ್ದ ನಿರ್ದೇಶನದಂತೆ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.

‘ನಕಲಿ ದಾಖಲೆ ಸೃಷ್ಟಿಸಿ ವಂಚಿಸಿದ ಆರೋಪದಡಿ ಬಿಲ್ಡರ್ ಎಂ. ಕುಂದಲರಾವ್, ವೆಂಕಟರಾಮನ್ ರೆಡ್ಡಿ, ರಂಜಿತ್ ಪ್ರಿಯಾ, ನದೀರ್ ಮೇಸ್ತ್ರಿ, ಗವೀಶ್ವರರಾವ್ ಹಾಗೂ ಆರೋಪಿಗಳಿಗೆ ಸಹಕಾರ ನೀಡಿದ್ದ ಆರೋಪದಡಿ ಮಹದೇವಪುರ ಠಾಣೆಯ ಹಿಂದಿನ ಇನ್‌ಸ್ಪೆಕ್ಟರ್‌ ಟಿ. ಶ್ರೀನಿವಾಸ್ ವಿರುದ್ಧ ಎಫ್‌ಐಆರ್‌ ದಾಖಲಿಸಿಕೊಳ್ಳಲಾಗಿದೆ’ ಎಂದು ಪೊಲೀಸ್ ಮೂಲಗಳು ತಿಳಿಸಿವೆ.

ADVERTISEMENT

ಪ್ರಕರಣದ ವಿವರ: ‘ದೂರುದಾರ ಖಮರುಲ್ಲಾ ಅವರಿಗೆಕರ್ನಾಟಕ ಕೈಗಾರಿಕಾ ಪ್ರದೇಶ ಅಭಿವೃದ್ಧಿ ಮಂಡಳಿಯಿಂದ (ಕೆಐಎಡಿಬಿ) ದೊಡ್ಡನೆಕ್ಕುಂದಿ ಕೈಗಾರಿಕಾ ಪ್ರದೇಶದ 1ನೇ ಹಂತದಲ್ಲಿರುವ ಪ್ಲಾಟ್ ನಂಬರ್ 31ರ ಜಾಗ 1971ರ ಆಗಸ್ಟ್ 20ರಂದು ಮಂಜೂರು ಆಗಿದೆ’ ಎಂದು ಎಫ್‌ಐಆರ್‌ನಲ್ಲಿ ಉಲ್ಲೇಖಿಸಲಾಗಿದೆ.

‘ಜಾಗ ಕಬಳಿಸಲು ಮುಂದಾಗಿದ್ದ ಆರೋಪಿಗಳು, ಜಾಗ ಮಾರಾಟ ಮಾಡಿದಂತೆ ಹಾಗೂ ದೂರುದಾರರಿಗೆ ಹಣ ಕೊಟ್ಟ ರೀತಿಯಲ್ಲಿ ನಕಲಿ ದಾಖಲೆಗಳನ್ನು ಸೃಷ್ಟಿಸಿದ್ದಾರೆ. ಆರೋಪಿಗಳ ವಿರುದ್ಧ ದೂರು ನೀಡಲು ದೂರುದಾರರು ಮಹದೇವಪುರ ಠಾಣೆಗೆ ಹೋಗಿದ್ದಾಗ, ಠಾಣೆಯ ಇನ್‌ಸ್ಪೆಕ್ಟರ್ ಟಿ.ಶ್ರೀನಿವಾಸ್ ದೂರು ದಾಖಲಿಸದೇ ಪಿರ್ಯಾದುದಾರರ ವಿರುದ್ಧವೇ ಪ್ರಕರಣ ದಾಖಲಿಸಿಕೊಂಡಿದ್ದರು.’

‘ಇನ್‌ಸ್ಪೆಕ್ಟರ್ ವರ್ತನೆ ವಿರುದ್ಧ ಖಮರುಲ್ಲಾ, ಬೆಂಗಳೂರು ನಗರ ಪೊಲೀಸ್ ಕಮಿಷನರ್ ಅವರಿಗೆ ದೂರು ನೀಡಿದ್ದರು. ಆ ದೂರು ವೈಟ್‌ಫೀಲ್ಡ್ ಉಪವಿಭಾಗದ ಎಸಿಪಿ ಅವರಿಗೆ ವರ್ಗಾವಣೆ ಆಗಿತ್ತು. ಅಷ್ಟಾದರೂ ಸುಮ್ಮನಿರದ ಆರೋಪಿಗಳು, ದೂರುದಾರರಿಗೆ ಪ್ರಾಣ ಬೆದರಿಕೆ ಹಾಕುತ್ತಿದ್ದಾರೆ’ ಎಂದು ಎಫ್‌ಐಆರ್‌ನಲ್ಲಿ ತಿಳಿಸಲಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.