ಬೆಂಗಳೂರು: ನಗರದ ಮೂರು ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ವಿವಿಧ ಬಡಾವಣೆಗಳಲ್ಲಿ ಪಾದಚಾರಿಗಳ ಮೊಬೈಲ್ ಕಸಿದು ಪರಾರಿಯಾಗುತ್ತಿದ್ದ ಇಬ್ಬರು ಆರೋಪಿಗಳನ್ನು ಇಂದಿರಾನಗರ ಠಾಣೆ ಪೊಲೀಸರು ಬಂಧಿಸಿದ್ದಾರೆ.
ವಿನೋದ್ ಅಲಿಯಾಸ್ ಗುಂಡು ಹಾಗೂ ಸ್ಟೀಫನ್ ರಾಜ್ ಅಲಿಯಾಸ್ ರಾಜ್ ಬಂಧಿತ ಆರೋಪಿಗಳು.
‘ಆರೋಪಿಗಳು ಪಾದಚಾರಿಗಳನ್ನು ಗುರಿಯಾಗಿಸಿ, ಮೊಬೈಲ್ ಕಸಿದು ಪರಾರಿ ಆಗುತ್ತಿದ್ದರು. ಎಚ್.ಕೆ.ಸಿದ್ದೇಶ್ ಎಂಬುವವರು ಇಂದಿರಾನಗರದ ಅರ್ಥರ್ ಶೋರೂಂ ಬಳಿ ರಸ್ತೆ ಬದಲಿಯಲ್ಲಿ ಆಟೊವನ್ನು ನಿಲುಗಡೆ ಮಾಡಿ ಮುಂಜಾನೆ ನಾಲ್ಕರ ಸುಮಾರಿಗೆ ನಿದ್ರೆಗೆ ಜಾರಿದ್ದರು. ಅಲ್ಲಿಗೆ ಬಂದಿದ್ದ ಇಬ್ಬರು ಆರೋಪಿಗಳು, ಮೊಬೈಲ್ ಕಸಿದು ಪರಾರಿಯಾಗಿದ್ದರು. ಸಿದ್ದೇಶ್ ಅವರು ಬೇರೊಬ್ಬರ ಮೊಬೈಲ್ ಪಡೆದು ಪೊಲೀಸ್ ಸಹಾಯವಾಣಿಗೆ ಕರೆ ಮಾಡಿದ್ದರು. ಸ್ಥಳಕ್ಕೆ ಬಂದಿದ್ದ ಹೊಯ್ಸಳ ಸಿಬ್ಬಂದಿ ಇಬ್ಬರು ಕಳ್ಳರನ್ನು ಬೆನ್ನಟ್ಟಿ ಹಿಡಿದು ಮೊಬೈಲ್ ಜಪ್ತಿ ಮಾಡಿಕೊಂಡಿದ್ದರು’ ಎಂದು ಮೂಲಗಳು ತಿಳಿಸಿವೆ.
‘ಆರೋಪಿಗಳು ಮೊಬೈಲ್ ಸುಲಿಗೆಯನ್ನೇ ಕಾಯಕ ಮಾಡಿಕೊಂಡಿದ್ದರು. ಇವರ ವಿರುದ್ಧ ಇಂದಿರಾನಗರ ಹಾಗೂ ಹಲಸೂರಿನಲ್ಲಿ ತಲಾ ಒಂದು ಹಾಗೂ ಹೆಣ್ಣೂರು ಪೊಲೀಸ್ ಠಾಣೆಯಲ್ಲಿ ಮೂರು ಪ್ರಕರಣಗಳು ದಾಖಲಾಗಿವೆ’ ಎಂದು ಹೇಳಿದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.