ಬೆಂಗಳೂರು: ಹಣ್ಣಿನ ಜ್ಯೂಸ್ ತಯಾರಿಸುವ ಯಂತ್ರದಲ್ಲಿ ಚಿನ್ನದ ರಾಡ್ ಇಟ್ಟು ಸಾಗಿಸುತ್ತಿದ್ದ ವ್ಯಕ್ತಿಯನ್ನು ಕಸ್ಟಮ್ಸ್ ಅಧಿಕಾರಿಗಳು ಕೆಂಪೇಗೌಡ ಅಂತರರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಇದೇ 21ರಂದು ಬಂಧಿಸಿದ್ದಾರೆ.
ಬಂಧಿತ 33 ವರ್ಷದ ವ್ಯಕ್ತಿಯು ಉತ್ತರಪ್ರದೇಶದವನಾಗಿದ್ದು, ಆತನಿಂದ ₹45 ಲಕ್ಷ ಮೌಲ್ಯದ 930 ಗ್ರಾಂ ಚಿನ್ನ ಜಪ್ತಿ ಮಾಡಲಾಗಿದೆ.
‘ಆರೋಪಿಯು ಶಾರ್ಜಾದಿಂದ ‘ಏರ್ ಅರೇಬಿಯಾ ಜಿ9–498’ ವಿಮಾನದ ಮೂಲಕ ಮಂಗಳವಾರ ರಾತ್ರಿ ನಗರಕ್ಕೆ ಬಂದಿದ್ದ. ಕರ್ತವ್ಯದಲ್ಲಿದ್ದ ಕಸ್ಟಮ್ಸ್ ಸಿಬ್ಬಂದಿ ಆತನ ಚಲನವಲನಗಳನ್ನು ಕಂಡು ಅನುಮಾನಗೊಂಡಿದ್ದರು. ಆತನನ್ನು ಕರೆದು ವಿಚಾರಿಸಿದಾಗ ಚಿನ್ನ ಕಳ್ಳಸಾಗಣೆ ಮಾಡುತ್ತಿದ್ದುದಾಗಿ ಒಪ್ಪಿಕೊಂಡಿದ್ದ. ಆತನ ವಿರುದ್ಧ ಪ್ರಕರಣ ದಾಖಲಿಸಿ ವಿಚಾರಣೆ ನಡೆಸುತ್ತಿದ್ದೇವೆ’ ಎಂದು ಕಸ್ಟಮ್ಸ್ ಅಧಿಕಾರಿಯೊಬ್ಬರು ಹೇಳಿದ್ದಾರೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.