ಬೆಂಗಳೂರು: ಬ್ಯಾಟರಾಯನಪುರ ಠಾಣೆ ವ್ಯಾಪ್ತಿಯಲ್ಲಿ ಜಗದೀಶ್ (34) ಎಂಬುವರನ್ನು ಕೊಲೆ ಮಾಡಲಾಗಿದ್ದು, ಕೃತ್ಯ ಎಸಗಿರುವ ಆರೋಪಿ ಹೇಮಂತ್ ಎಂಬುವರನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ.
‘ಮೈಸೂರು ರಸ್ತೆಯ ಕಸ್ತೂರ್ಬಾ ನಗರದ ನಿವಾಸಿ ಜಗದೀಶ್, ಪೇಂಟರ್ ಆಗಿದ್ದರು. ಅವರ ಕೊಲೆ ಬಗ್ಗೆ ಪತ್ನಿ ದೂರು ನೀಡಿದ್ದಾರೆ. ಆರೋಪಿಯನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಲಾಗುತ್ತಿದೆ’ ಎಂದು ಪೊಲೀಸ್ ಮೂಲಗಳು ಹೇಳಿವೆ.
‘ಜಗದೀಶ್ ಅವರಿಗೆ ಇಬ್ಬರು ಮಕ್ಕಳಿದ್ದಾರೆ. ಜ. 14ರಂದು ಕೆಲಸಕ್ಕೆ ಹೋಗದೇ ಮನೆಯಲ್ಲಿದ್ದ ಜಗದೀಶ್, ಪೇಟಿಂಗ್ ವಸ್ತುಗಳನ್ನು ತರಲೆಂದು ಮಾರುಕಟ್ಟೆಗೆ ತೆರಳಿದ್ದರು. ಇದೇ ವೇಳೆ ಅವರು ಮದ್ಯ ಕುಡಿದಿದ್ದರೆಂದು ಗೊತ್ತಾಗಿದೆ.’
‘ಟಿಂಬರ್ ಯಾರ್ಡ್ ಬಡಾವಣೆ ರಸ್ತೆಯಲ್ಲಿ ಜಗದೀಶ್ ನಿಂತುಕೊಂಡಿದ್ದರು. ಇದೇ ವೇಳೆ ಆರೋಪಿ ಹೇಮಂತ್ ಬೈಕ್ನಲ್ಲಿ ಸ್ಥಳಕ್ಕೆ ಬಂದಿದ್ದರು. ಪಾನಮತ್ತ ಜಗದೀಶ್, ಅವಾಚ್ಯ ಶಬ್ದಗಳಿಂದ ನಿಂದಿಸಿದ್ದರು. ಅದೇ ವಿಚಾರಕ್ಕೆ ಗಲಾಟೆ ಶುರುವಾಗಿತ್ತು’ ಎಂದು ಪೊಲೀಸ್ ಮೂಲಗಳು ತಿಳಿಸಿವೆ.
‘ಆರೋಪಿ ಹೇಮಂತ್, ಜಗದೀಶ್ ಅವರ ಕಪಾಳಕ್ಕೆ ಹೊಡೆದಿದ್ದರು. ಸ್ಥಳದಲ್ಲೇ ಕುಸಿದು ಬಿದ್ದಿದ್ದ ಜಗದೀಶ್ ತಲೆಗೆ ತೀವ್ರ ಪೆಟ್ಟು ಬಿದ್ದಿತ್ತು. ಸ್ಥಳೀಯರು ಅವರನ್ನು ಆಸ್ಪತ್ರೆಗೆ ಕರೆದೊಯ್ದಿದ್ದರು. ಚಿಕಿತ್ಸೆ ನೀಡಿದ್ದ ವೈದ್ಯರು, ಜಗದೀಶ್ ಬದುಕುವುದಿಲ್ಲವೆಂದು ತಿಳಿಸಿದ್ದರು. ಹೀಗಾಗಿ, ಸಂಬಂಧಿಕರು ಮನೆಗೆ ಕರೆತಂದಿದ್ದರು. ಜ. 16ರಂದು ಅವರು ಮೃತಪಟ್ಟಿದ್ದಾರೆ’ ಎಂದು ಮೂಲಗಳು ಹೇಳಿವೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.