ADVERTISEMENT

ಠಾಣೆಯಿಂದ ಹೊರಬಂದ ರೌಡಿ ಹಿಂಬಾಲಿಸಿ ಕೊಲೆ

​ಪ್ರಜಾವಾಣಿ ವಾರ್ತೆ
Published 28 ಜುಲೈ 2021, 19:33 IST
Last Updated 28 ಜುಲೈ 2021, 19:33 IST

ಬೆಂಗಳೂರು: ಠಾಣೆಯಿಂದ ಹೊರಬಂದ ರೌಡಿಯನ್ನು ಹಿಂಬಾಲಿಸಿ ದುಷ್ಕರ್ಮಿಗಳು ಕೊಲೆ ಮಾಡಿರುವ ಘಟನೆ ಬಾಣಸವಾಡಿ ಠಾಣೆಯ ಬಳಿ ಬುಧವಾರ ನಡೆದಿದೆ.

ಬಸವೇಶ್ವರನಗರದಲ್ಲಿ ವಾಸವಿದ್ದ ಹರೀಶ್ ಕೊಲೆಯಾದ ರೌಡಿ.

ಕೊಲೆ, ಕೊಲೆ ಯತ್ನ ಸೇರಿದಂತೆ ನಾಲ್ಕು ಅಪರಾಧ ಪ್ರಕರಣಗಳಲ್ಲಿ ಭಾಗಿಯಾಗಿದ್ದ ಹರೀಶ್ ವಿರುದ್ಧಬಾಣಸವಾಡಿ ಠಾಣೆಯಲ್ಲಿ ರೌಡಿಪಟ್ಟಿ ತೆರೆಯಲಾಗಿತ್ತು. ಇದಾದ ಬಳಿಕ ಹರೀಶ್‌ ಬಸವೇಶ್ವರನಗರ ವ್ಯಾಪ್ತಿಯಲ್ಲಿ ವಾಸವಿದ್ದ.

ADVERTISEMENT

‘ಹರೀಶ್ ಅಪರಾಧ ಕೃತ್ಯಗಳಲ್ಲಿ ಮುಂದುವರಿದಿರುವ ಕುರಿತು ಪೊಲೀಸರಿಗೆ ಮಾಹಿತಿ ಸಿಕ್ಕಿದ್ದರಿಂದ ಠಾಣೆಗೆ ಬರುವಂತೆ ಸೂಚಿಸಿದ್ದರು. ಹರೀಶ್‌ಗೆ ಇನ್ನು ಮುಂದೆ ಅಪರಾಧಗಳಲ್ಲಿ ತೊಡಗದಂತೆ ಎಚ್ಚರಿಸಿ, ಮುಚ್ಚಳಿಕೆ ಬರೆಸಿ ಕಳುಹಿಸಿದ್ದರು’.

‘ಠಾಣೆಯಿಂದ ಹೊರಬಂದಿದ್ದ ಹರೀಶ್‌ನನ್ನು ದುಷ್ಕರ್ಮಿಗಳ ತಂಡ ಹಿಂಬಾಲಿಸಿತ್ತು. ಠಾಣೆಯಿಂದ ಕೆಲವೇ ದೂರದಲ್ಲಿ ದುಷ್ಕರ್ಮಿಗಳು ಮಾರಕಾಸ್ತ್ರಗಳಿಂದ ದಾಳಿ ನಡೆಸಿದ್ದರು. ಈ ವೇಳೆ ನೆಲಕ್ಕೆ ಬಿದ್ದ ಆತನ ತಲೆ ಮೇಲೆ ಕಲ್ಲು ಹಾಕಿ ಕೊಲೆ ಮಾಡಿದ್ದಾರೆ. ಬಳಿಕ ಆರೋಪಿಗಳು ಸ್ಥಳದಿಂದ ಪರಾರಿಯಾಗಿದ್ದಾರೆ’ ಎಂದು ಪೊಲೀಸರು ತಿಳಿಸಿದರು.

‘ಪೊಲೀಸರು ಘಟನಾ ಸ್ಥಳಕ್ಕೆ ತೆರಳಿ, ಹರೀಶ್ ಮೃತದೇಹವನ್ನು ಮರಣೋತ್ತರ ಪರೀಕ್ಷೆಗೆ ರವಾನಿಸಿದರು. ಘಟನೆ ಸಂಬಂಧ ಅಕ್ಕಪಕ್ಕದ ಸ್ಥಳದಲ್ಲಿದ್ದ ಸಿಸಿಟಿವಿ ದೃಶ್ಯಾವಳಿಗಳನ್ನು ಪರಿಶೀಲಿಸಲಾಗಿದೆ. ಹಳೆಯ ದ್ವೇಷದಿಂದ ಹರೀಶ್‌ ಮೇಲೆ ದಾಳಿ ನಡೆಸಿರುವ ಶಂಕೆ ಇದೆ’ ಎಂದು ಪೊಲೀಸ್ ಮೂಲಗಳು ತಿಳಿಸಿವೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.