ಬೆಂಗಳೂರು: ಮೋಜಿನ ಜೀವನ ನಡೆಸಲು ಮನೆಗಳಲ್ಲಿ ಚಿನ್ನಾಭರಣ ಹಾಗೂ ಹಣ ಕದಿಯುತ್ತಿದ್ದ ಇಬ್ಬರು ಆರೋಪಿಗಳನ್ನು ಸುದ್ದಗುಂಟೆ ಪಾಳ್ಯ ಪೊಲೀಸರು ಬಂಧಿಸಿದ್ದಾರೆ.
‘ಹೊಸೂರು ರಸ್ತೆ ಬಳಿಯ ನಿವಾಸಿ ಗುಣ (21) ಹಾಗೂ ಕೋಲಾರದ ಸೂರ್ಯ (23) ಬಂಧಿತರು. ಕಳವಾಗಿದ್ದ ₹22 ಲಕ್ಷ ಬೆಲೆಬಾಳುವ 510 ಗ್ರಾಂ ಚಿನ್ನಾಭರಣಗಳನ್ನು ಆರೋಪಿಗಳು ನೀಡಿದ ಮಾಹಿತಿ ಮೇರೆಗೆ ಜಪ್ತಿ ಮಾಡಲಾಗಿದೆ’ ಎಂದು ಪೊಲೀಸರು ತಿಳಿಸಿದರು.
ಜನವರಿಯಲ್ಲಿಸುದ್ದಗುಂಟೆ ಪಾಳ್ಯ ಠಾಣಾ ವ್ಯಾಪ್ತಿಯ ಎ.ಕೆ.ಕಾಲೊನಿಯ ಮನೆಯೊಂದರ ಕಿಟಕಿ ಗಾಜು ಒಡೆದುಆರೋಪಿಗಳು ಒಳಪ್ರವೇಶಿಸಿದ್ದರು. ಬೀರುವಿನಲ್ಲಿದ್ದ ಚಿನ್ನಾಭರಣ ಹಾಗೂ ನಗದು ಕದ್ದು ಪರಾರಿಯಾಗಿದ್ದರು. ಈ ಸಂಬಂಧ ಮನೆಯ ಮಾಲೀಕ ಪೊಲೀಸ್ ಠಾಣೆಗೆ ದೂರು ನೀಡಿದ್ದರು.
‘ಆರೋಪಿಗಳ ವಿರುದ್ಧ ಬಸವೇಶ್ವರನಗರ, ಜಯನಗರ, ಬೇಗೂರು, ಪರಪ್ಪನ ಅಗ್ರಹಾರ, ಕಾಡುಗೋಡಿ, ಕೆ.ಆರ್.ಪುರ, ಬೆಳ್ಳಂದೂರು ಸೇರಿದಂತೆ ಅನೇಕ ಠಾಣೆಗಳಲ್ಲಿ ಕನ್ನ–ಕಳವು ಪ್ರಕರಣಗಳು ದಾಖಲಾಗಿದ್ದವು. ಕೆಲವು ಪ್ರಕರಣಗಳಲ್ಲಿ ಜೈಲುವಾಸವನ್ನೂ ಅನುಭವಿಸಿದ್ದರು. ಜಾಮೀನಿನ ಮೇಲೆ ಹೊರಬಂದ ನಂತರವೂ ಕೃತ್ಯ ಮುಂದುವರಿಸಿದ್ದರು. ರಾತ್ರಿ ವೇಳೆ ಮನೆಗಳಿಗೆ ನುಗ್ಗಿ ಕಳ್ಳತನ ಮಾಡುತ್ತಿದ್ದ ಇವರು, ಮೋಜಿನ ಜೀವನ ನಡೆಸುತ್ತಿದ್ದರು’ ಎಂದು ಪೊಲೀಸರು ಮಾಹಿತಿ ನೀಡಿದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.