ಬೆಂಗಳೂರು: ನಗರದ ವಿವಿಧ ಭಾಗಗಳಲ್ಲಿ ದ್ವಿಚಕ್ರ ವಾಹನ ಕದಿಯುತ್ತಿದ್ದ ಇಬ್ಬರು ಆರೋಪಿಗಳನ್ನು ಚಂದ್ರಾ ಬಡಾವಣೆ ಪೊಲೀಸರು ಬಂಧಿಸಿದ್ದಾರೆ.
ಮೊಹಮ್ಮದ್ ಆಸೀಫ್ ಮತ್ತು ಮೊಹಮ್ಮದ್ ತಹೀರ್ ಬಂಧಿತ ಆರೋಪಿಗಳು.
‘ಜುಲೈ 24ರಂದು ಠಾಣಾ ವ್ಯಾಪ್ತಿಯ ಮನೆಯೊಂದರ ಬಳಿ ನಿಲ್ಲಿಸಿದ್ದ ದ್ವಿಚಕ್ರ ವಾಹನವನ್ನು ಆರೋಪಿಗಳು ಕದ್ದಿದ್ದರು. ಈ ಸಂಬಂಧ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. ಆರೋಪಿಗಳಿಂದ ₹3.49 ಲಕ್ಷ ಬೆಲೆ ಬಾಳುವ ಆರು ದ್ವಿಚಕ್ರ ವಾಹನಗಳನ್ನು ಜಪ್ತಿ ಮಾಡಲಾಗಿದೆ’ ಎಂದು ಪೊಲೀಸರು ತಿಳಿಸಿದರು.
‘ಆರೋಪಿಗಳ ಬಂಧನದಿಂದ ಚಂದ್ರಾ ಬಡಾವಣೆ, ಜೆ.ಜೆ.ನಗರ, ಕಾಮಾಕ್ಷಿಪಾಳ್ಯ, ಎಲೆಕ್ಟ್ರಾನಿಕ್ ಸಿಟಿ ಠಾಣಾ ವ್ಯಾಪ್ತಿಗಳಲ್ಲಿ ವಾಹನ ಕಳವು ಪ್ರಕರಣಗಳು ಪತ್ತೆಯಾಗಿವೆ’ ಎಂದೂ ಹೇಳಿದರು.
ಆಟೊ–ಸ್ಕೂಟರ್ ಜಪ್ತಿ: ವಿಜಯನಗರ ಹಾಗೂ ಪುಟ್ಟೇನಹಳ್ಳಿ ಠಾಣಾ ವ್ಯಾಪ್ತಿಗಳಲ್ಲಿ ಆಟೊ ಮತ್ತು ಸ್ಕೂಟರ್ ಕದ್ದಿದ್ದ ಆರೋಪಿಯನ್ನು ವಿಜಯನಗರ ಪೊಲೀಸರು ಬಂಧಿಸಿದ್ದಾರೆ.
‘ಅಭಿಷೇಕ್ ಬಂಧಿತ ಆರೋಪಿ. ವಿಜಯನಗರದ ಮನೆಯೊಂದರ ಬಳಿ ನಿಲ್ಲಿಸಿದ್ದ ಸ್ಕೂಟರ್ ಕಳವಾಗಿದ್ದ ಸಂಬಂಧ ವಾಹನ ಮಾಲೀಕ ಪೊಲೀಸರಿಗೆ ದೂರು ನೀಡಿದ್ದರು. ಆರೋಪಿಯನ್ನು ವಿಚಾರಣೆ ನಡೆಸಿದಾಗಪುಟ್ಟೇನಹಳ್ಳಿ ವ್ಯಾಪ್ತಿಯಲ್ಲಿ ಆಟೊ ಕದ್ದಿರುವ ವಿಚಾರ ತಿಳಿಸಿದ್ದ. ಆರೋಪಿಯನ್ನು ಬಂಧಿಸಿ, ಕಳವಾಗಿದ್ದ ₹1.65 ಲಕ್ಷ ಬೆಲೆ ಬಾಳುವ ಆಟೊ ಮತ್ತು ಸ್ಕೂಟರ್ ಜಪ್ತಿ ಮಾಡಲಾಯಿತು’ ಎಂದು ಪೊಲೀಸರು ತಿಳಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.