ADVERTISEMENT

ಮುಖ್ಯಮಂತ್ರಿ ಆಗುವ ಬಯಕೆ ವ್ಯಕ್ತಪಡಿಸಿದ ಸಿ.ಟಿ.ರವಿ

​ಪ್ರಜಾವಾಣಿ ವಾರ್ತೆ
Published 14 ಫೆಬ್ರುವರಿ 2020, 19:56 IST
Last Updated 14 ಫೆಬ್ರುವರಿ 2020, 19:56 IST
ಸಿ.ಟಿ.ರವಿ
ಸಿ.ಟಿ.ರವಿ   

ಮೈಸೂರು: ಕನ್ನಡ ಮತ್ತು ಸಂಸ್ಕೃತಿ ಸಚಿವ ಸಿ.ಟಿ.ರವಿ, ಮುಖ್ಯಮಂತ್ರಿಯಾಗುವ ‌‌ಬಯಕೆ ವ್ಯಕ್ತಪಡಿಸಿದ್ದಾರೆ.

ಮೈಸೂರಿನಲ್ಲಿ ಶುಕ್ರವಾರ ಬಹುರೂಪಿ ರಾಷ್ಟ್ರೀಯ ನಾಟಕೋ ತ್ಸವದ ಉದ್ಘಾಟನಾ ಸಮಾರಂಭದಲ್ಲಿ ಅವರು ಪಾಲ್ಗೊಂಡಿದ್ದರು. ‘ಮುಖ್ಯಮಂತ್ರಿ’ ಚಂದ್ರು ಅವರೂ ಈ ಕಾರ್ಯಕ್ರಮದಲ್ಲಿ ಇದ್ದರು. ಭಾಷಣದ ವೇಳೆ ಸಚಿವರು, ‘ಮುಖ್ಯಮಂತ್ರಿ‘ ಚಂದ್ರು ಹೆಸರನ್ನು ಹೇಳುವಾಗ ‘ನೀವು ಕೊನೆಯವರೆಗೂ ಶಾಶ್ವತ ಮುಖ್ಯಮಂತ್ರಿಯಾಗಿಯೇ ಇರಿ. ನಮಗೆ ಕನಿಷ್ಠ ಮಾಜಿ ಮುಖ್ಯಮಂತ್ರಿ ಎಂದು ಕರೆಯಿಸಿಕೊಳ್ಳುವ ಭಾಗ್ಯವನ್ನಾದರೂ ಕೊಡಿ’ ಎಂದರು.

ನಾಟಕೋತ್ಸವ ಉದ್ಘಾಟಿಸಿ ನಟ ಅನಂತನಾಗ್‌ ಮಾತನಾಡು ವಾಗಲೂ ‘ಮುಖ್ಯಮಂತ್ರಿ‘ ಚಂದ್ರು ಹೆಸರನ್ನು ಪ್ರಸ್ತಾಪಿಸಿದ್ದರು. ಈ ವೇಳೆ ವೇದಿಕೆಯಲ್ಲಿದ್ದ ಸಚಿವರು, ಅನಂತನಾಗ್‌ ಉದ್ದೇಶಿಸಿ, ‘ನನ್ನನ್ನು ಕನಿಷ್ಠ ಮಾಜಿ ಮುಖ್ಯ ಮಂತ್ರಿ ಯನ್ನಾಗಿ ಮಾಡಲು ಆಶೀರ್ವದಿಸಿ’ ಎಂದರು. ಅದಕ್ಕೆ ಅನಂತನಾಗ್‌, ‘ನಿಮ್ಮ ಬಯಕೆ ಯನ್ನು ಚಾಮುಂಡೇಶ್ವರಿ ಈಡೇರಿಸಲಿ’ ಎಂದು ಅವರು ಪ್ರತಿಕ್ರಿಯಿಸಿದರು.

ADVERTISEMENT

ಕೊನೆಯಲ್ಲಿ ಸಂಸದ ಪ್ರತಾಪ ಸಿಂಹ ಮಾತನಾಡುತ್ತಾ, ‘ಆಸೆ ಇದ್ದರೆ ಮಾತ್ರ ಅಧಿಕಾರ ಸಿಗುತ್ತದೆ. ಸಿ.ಟಿ.ರವಿ ಅವರ ಬಯಕೆ ಈಡೇರಲಿ’ ಎಂದರು. ಈ ವೇಳೆ ಎಚ್ಚೆತ್ತ ಸಚಿವರು, ‘ನಾನು ತಮಾಷೆಗೆ ಹೇಳಿದ್ದು. ಅದನ್ನೇ ದೊಡ್ಡದಾಗಿ ಮಾಡಬೇಡಿ’ ಎಂದು ನಗು ಬೀರಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.