ಬೆಂಗಳೂರು: ‘ಸೈಬರ್ ವಂಚನೆ ಪ್ರಕರಣಗಳಲ್ಲಿ ಹಣ ಕಳೆದುಕೊಂಡ ಬಗ್ಗೆ ತನಿಖೆ ನಡೆಸಿ ಸತ್ಯಾಂಶ ಬಯಲಿಗೆಳೆಯುವ ಬದಲಿಗೆ ಪೊಲೀಸರೇ ಅಂತಹ ಪ್ರಕರಣಗಳನ್ನು ಮುಚ್ಚಿ ಹಾಕುತ್ತಿದ್ದಾರೆ’ ಎಂದು ಹೈಕೋರ್ಟ್ ಕಳವಳ ವ್ಯಕ್ತಪಡಿಸಿದೆ.
ಈ ಕುರಿತಂತೆ ರಾಹುಲ್ ಚಾರಿ ಎಂಬುವರು ಸಲ್ಲಿಸಿದ್ದ ರಿಟ್ ಅರ್ಜಿಯನ್ನು ನ್ಯಾಯಮೂರ್ತಿ ಎಂ.ನಾಗಪ್ರಸನ್ನ ಅವರಿದ್ದ ಏಕಸದಸ್ಯ ನ್ಯಾಯಪೀಠ ಮಾನ್ಯ ಮಾಡಿದೆ.
‘ಥರ್ಡ್ ಪಾರ್ಟಿ ಯೂನಿಫೈಡ್ ಪೇಮೆಂಟ್ ಇಂಟರ್ಫೇಸ್ (ಯುಪಿಐ) ಮಧ್ಯವರ್ತಿಗಳ ಮೂಲಕ ಪೊಲೀಸರು ಸ್ಥಗಿತಗೊಳಿಸಿದ ಬ್ಯಾಂಕ್ ಖಾತೆಗಳಿಂದ ಮೊತ್ತವನ್ನು ವರ್ಗಾಯಿಸಲು ದೂರುದಾರರಿಂದ ಅರ್ಜಿಗಳನ್ನು ಪರಿಗಣಿಸುವಾಗ ಮ್ಯಾಜಿಸ್ಟ್ರೇಟ್ ಕೋರ್ಟ್ಗಳು ಎಚ್ಚರಿಕೆ ವಹಿಸಿ ಎಲ್ಲ ಅಂಶಗಳನ್ನೂ ಪರಿಶೀಲಿಸಿದ ನಂತರವೇ ಅಂತಹ ಮನವಿಗಳನ್ನು ಪುರಸ್ಕರಿಸಬೇಕು’ ಎಂದು ಆದೇಶಿಸಿದೆ.
‘ಡಿಜಿಟಲ್ ಪಾವತಿ ವಂಚನೆ ಪ್ರಕರಣಗಳಲ್ಲಿ ಹಣ ಕಳೆದುಕೊಂಡವರಿಗೆ ಪುನಃ ಹಣ ಕೊಡಿಸಲು ಪೊಲೀಸರೇ ಕಾನೂನುಬಾಹಿರ ವಿಧಾನಗಳನ್ನು ಅನುಸರಿಸುತ್ತಿದ್ದಾರೆ’ ಎಂದು ನ್ಯಾಯಪೀಠ ಹೇಳಿದೆ.
ಫೋನ್ ಪೇ ಪ್ರೈ.ಲಿ ಕಂಪನಿಯ ನಿರ್ದೇಶಕ ರಾಹುಲ್ ಚಾರಿಅವರ ಖಾತೆಯಿಂದ ಹಣ ಕಡಿತ ಮಾಡಿದ್ದಕ್ಕೆ ಅಸಮಾಧಾನ ವ್ಯಕ್ತಪಡಿಸಿ, ಪುನಃ ಯಾವ ಖಾತೆಯಿಂದ ಹಣ ಕಡಿತ ಮಾಡಲಾಗಿದೆಯೋ ಅದೇ ಖಾತೆಗೆ ವರ್ಗಾಯಿಸುವಂತೆ ನಿರ್ದೇಶಿಸಿದೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.