ADVERTISEMENT

ಅನಿಲ ಸೋರಿಕೆಯಿಂದ ಹೊತ್ತಿಕೊಂಡ ಬೆಂಕಿ; ಒಬ್ಬರಿಗೆ ಗಾಯ

​ಪ್ರಜಾವಾಣಿ ವಾರ್ತೆ
Published 4 ಜನವರಿ 2022, 6:40 IST
Last Updated 4 ಜನವರಿ 2022, 6:40 IST
ಹೋಟೆಲ್‌ನ ಅಡುಗೆ ಕೋಣೆಯಲ್ಲಿ ಇಡಲಾಗಿದ್ದ ದಿನಸಿ ಸಾಮಾಗ್ರಿಗಳು ಚೆಲ್ಲಾಪಿಲ್ಲಿಯಾಗಿರುವುದು 
ಹೋಟೆಲ್‌ನ ಅಡುಗೆ ಕೋಣೆಯಲ್ಲಿ ಇಡಲಾಗಿದ್ದ ದಿನಸಿ ಸಾಮಾಗ್ರಿಗಳು ಚೆಲ್ಲಾಪಿಲ್ಲಿಯಾಗಿರುವುದು    

ಬೆಂಗಳೂರು: ಅಡುಗೆ ಮನೆಯಲ್ಲಿ ಇಟ್ಟಿದ್ದ ಸಿಲಿಂಡರ್‌ನಿಂದ ಅನಿಲ ಸೋರಿಕೆಯಾಗಿ ಬೆಂಕಿ ಹೊತ್ತಿಕೊಂಡಿದ್ದು, ಘಟನೆಯಲ್ಲಿ ಹೋಟೆಲ್‌ ಕಾರ್ಮಿಕರೊಬ್ಬರಿಗೆ ಗಂಭೀರ ಗಾಯಗಳಾಗಿವೆ. ಚಂದ್ರಾ ಲೇಔಟ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

‘ಮಹೇಶ್‌ (28) ಎಂಬುವರಿಗೆ ಸುಟ್ಟ ಗಾಯಗಳಾಗಿವೆ. ಚಿಕಿತ್ಸೆಗಾಗಿ ಅವರನ್ನು ವಿಕ್ಟೋರಿಯಾ ಆಸ್ಪತ್ರೆಗೆ ದಾಖಲಿಸಲಾಗಿದೆ’ ಎಂದು ಪೊಲೀಸರು ಹೇಳಿದ್ದಾರೆ.

‘ಠಾಣೆ ವ್ಯಾಪ್ತಿಯ ಗಣಪತಿ ವೃತ್ತದ ಬಳಿ ‘ಸಂತೃಪ್ತಿ ಉತ್ತರ ಕರ್ನಾಟಕ ಜವಾರಿ ಊಟದ ಮನೆ’ ಎಂಬ ಹೋಟೆಲ್‌ ಇದೆ. ಭಾನುವಾರ ರಾತ್ರಿ ಕೆಲಸಗಾರರೆಲ್ಲಾ ಕೆಲಸ ಮುಗಿಸಿ ಹೋಟೆಲ್‌ಗೆ ಬೀಗ ಹಾಕಿ ಮನೆಗೆ ಹೋಗಿದ್ದಾರೆ. ಬಳಿಕ ಅಡುಗೆ ಕೋಣೆಯಲ್ಲಿದ್ದ ಸಿಲಿಂಡರ್‌ನಿಂದ ಅನಿಲ ಸೋರಿಕೆಯಾಗಿರಬಹುದು. ಬೆಳಿಗ್ಗೆ 7 ಗಂಟೆ ಸುಮಾರಿಗೆ ಹೋಟೆಲ್‌ ಬಾಗಿಲು ತೆಗೆದಿದ್ದ ಮಹೇಶ್‌, ಅಡುಗೆ ಮಾಡಲು ಒಳಗೆ ಹೋಗಿದ್ದಾರೆ. ಅನಿಲ ಸೋರಿಕೆಯಾಗಿರುವುದು ಅವರ ಗಮನಕ್ಕೆ ಬಂದಿಲ್ಲ. ಅವರು ಸ್ಟೌ ಹಚ್ಚಲು ಮುಂದಾದಾಗ ಬೆಂಕಿ ಹೊತ್ತಿಕೊಂಡಿದೆ’ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.

ADVERTISEMENT

‘ಮಹೇಶ್‌ ಅವರ ಮೈಗೆ ಬೆಂಕಿ ಹತ್ತಿಕೊಂಡಿದೆ. ಅವರು ಅದನ್ನು ಆರಿಸುತ್ತಲೇ ಹೋಟೆಲ್‌ನಿಂದ ಹೊರಗೆ ಓಡಿಬಂದಿದ್ದಾರೆ. ಸ್ಥಳೀಯರು ಕೂಡಲೇ ಅಗ್ನಿಶಾಮಕ ದಳದ ಸಿಬ್ಬಂದಿಗೆ ಮಾಹಿತಿ ನೀಡಿದ್ದಾರೆ. ಅವರು ಸ್ಥಳಕ್ಕೆ ಬಂದು ಬೆಂಕಿ ನಂದಿಸಿದ್ದಾರೆ’ ಎಂದು ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.